200ಕ್ಕೂ ಹೆಚ್ಚು ನುಸುಳುಕೋರರನ್ನು ಮಟ್ಟಹಾಕಿದ ಸೇನೆ
ನವದೆಹಲಿ, ಸೆಪ್ಟೆಂಬರ್ 29 : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಏಕಾಏಕಿ ದಾಳಿ ನಡೆಸಿಲ್ಲ. ಗಡಿ ನಿಯಂತ್ರಣಾ ರೇಖೆಯ ಬಳಿ ಕನಿಷ್ಠ ಒಂದು ವಾರ ಕಾಲ ಉಗ್ರರ ಚಲನವಲನಗಳನ್ನು ಪರಿಶೀಲಿಸಿ, ಸರಿಯಾದ ಸಮಯದಲ್ಲಿ ಬಲವಾದ ಏಟು ನೀಡಿದೆ.
ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ಕುಳಿತಿದ್ದ ಭಯೋತ್ಪಾದಕರ ಪ್ರತಿ ಕ್ಯಾಂಪುಗಳಲ್ಲಿ ಕನಿಷ್ಠ 20ರಿಂದ 25 ಉಗ್ರರು ಬೀಡುಬಿಟ್ಟಿದ್ದರು. ಈ ತಾಣಗಳ ಮೇಲೆ ದಾಳಿ ನಡೆಸಿರುವ ಭಾರತೀಯ ಸೇನೆ ಏನಿಲ್ಲವೆಂದರೂ 200 ನುಸುಳುಕೋರರನ್ನು ಭಾರತದೊಳಗೆ ನುಸುಳದಂತೆ ತಡೆಹಿಡಿದಂತಾಗಿದೆ.
ಗುಪ್ತಚರ ಇಲಾಖೆಗೆ ಸಿಕ್ಕ ಮಾಹಿತಿಯ ಪ್ರಕಾರ, ಈ ಕ್ಯಾಂಪುಗಳಲ್ಲಿದ್ದ ಉಗ್ರರು ಗುಂಪು ಗುಂಪಾಗಿ ಭಾರತದೊಳಗೆ ನುಸುಳಲು ಸಿದ್ಧತೆ ನಡೆಸುತ್ತಿದ್ದರು. ಇವರು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಪಾಕಿಸ್ತಾನದಲ್ಲಿರುವ ತಮ್ಮ ನಾಯಕರ ಸೂಚನೆಗಾಗಿ ಕಾದು ಕುಳಿತಿದ್ದರು. ['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]
ಇದರ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತೀಯ ಸೇನೆ, ಚಾಣಾಕ್ಷತನದಿಂದ ದಾಳಿ ನಡೆಸುವ ಯೋಜನೆಯನ್ನು ರೂಪಿಸಿದೆ. ಬಾರಾಮುಲ್ಲಾ, ರಾಜೌರಿ ಮತ್ತು ಕುಪ್ವಾರಾದಲ್ಲಿರುವ 19, 25 ಮತ್ತು 28 ಡಿವಿಷನ್ ಯೋಧರು ದಾಳಿ ನಡೆಸಿ ಉಗ್ರರ ಕ್ಯಾಂಪುಗಳನ್ನು ನಿರ್ನಾಮ ಮಾಡಿದ್ದಾರೆ. ಈ ಕಾರ್ಯಾಚರಣೆಯನ್ನು ಪ್ಯಾರಾಮಿಲಿಟರಿ ಪಡೆ ಹೆಲಿಕಾಪ್ಟರ್ ಮುಖಾಂತರ ಸಹಕಾರ ನೀಡುತ್ತಿತ್ತು.
ಸೆಪ್ಟೆಂಬರ್ 28ರ ಮಧ್ಯರಾತ್ರಿ ಹೊತ್ತಿನಲ್ಲಿ ಸರ್ಜಿಕಲ್ ಸ್ಟ್ರೈಕ್ ಆಪರ್ಷನ್ ಆರಂಭವಾಗಿ, ಸೂರ್ಯೋದಯವಾಗುವುದರೊಳಗೆ ಮುಕ್ತಾಯವಾಗಿದೆ. ಈ ಕಾರ್ಯಾಚರಣೆಯ ವಿವರಣೆಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮತ್ತು ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ ಲೆ.ಜ. ರಣಬೀರ್ ಸಿಂಗ್ ಅವರಿಗೆ ನೀಡಲಾಗುತ್ತಿತ್ತು. [ಎಷ್ಟು ಉಗ್ರರ ಕ್ಯಾಂಪ್ ಧ್ವಂಸ, ಎಷ್ಟು ಜನ ಉಗ್ರರು ಬಲಿ?]
ಮೂಲಗಳ ಪ್ರಕಾರ, ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಉರಿ ಪ್ರಾಂತ್ಯದಲ್ಲಿ ನಡೆದ ದಾಳಿಯಂತೆಯೇ ಅಥವಾ ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಸಲು ಉಗ್ರರು ತಯಾರಾಗಿ ಕುಳಿತಿದ್ದರು. ಇನ್ನೂ ಅನೇಕ ಉಗ್ರರ ಕ್ಯಾಂಪುಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದು, ಅವುಗಳ ಮೇಲೆಯೂ ಸೇನೆ ಕಣ್ಣಿಟ್ಟಿದೆ.
ಬುಧವಾರ ರಾತ್ರಿ ನಡೆದ ದಾಳಿಯಲ್ಲಿ 38ಕ್ಕೂ ಹೆಚ್ಚು ಉಗ್ರರು ಹತರಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಇದು ಸರ್ಜಿಕಲ್ ಅಟ್ಯಾಕ್ ಅಲ್ಲ ಎಂದು ಪಾಕಿಸ್ತಾನ ಹೇಳುತ್ತಲೇ ಇದೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಲ್ಲಿ ಕೊಡಬೇಕೋ ಅಲ್ಲಿ ಬಲವಾದ ಏಟು ಕೊಟ್ಚಿದ್ದಾರೆ. [ಉಗ್ರರ ಏಟಿಗೆ ಭಾರತದ ಬಲವಾದ ತಿರುಗೇಟು : ಏರ್ ಮಾರ್ಷಲ್ ಪಾಂಡೆ]