ಮಾಜಿ ಪೊಲೀಸ್ ಆಯುಕ್ತರ ವಿರುದ್ಧದ ಆರೋಪ ಗಂಭೀರ: ದೀದಿಗೆ ಮುಜುಗರ
ನವದೆಹಲಿ, ಮಾರ್ಚ್ 26: ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಕೋಲ್ಕತಾದ ಆಗಿನ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ನಂಟಿನ ಕುರಿತು ಸಿಬಿಐ ನಡೆಸಿದ ವಿಚಾರಣೆಯ ಹೊಸ ವರದಿಯಲ್ಲಿನ ಅಂಶಗಳು ಬಹಳ ಗಂಭೀರವಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ನ್ಯಾಯಪೀಠವು, ತನಗೆ ಒದಗಿಸಿರುವ ಮಾಹಿತಿಗಳಲ್ಲಿ 'ಬಹಳ ಬಹಳ ಗಂಭೀರ ಸಂಗತಿಗಳಿದ್ದರೆ' ತನ್ನ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ ಎಂದು ಹೇಳಿತು. ಅಲ್ಲದೆ, ಚಿಟ್ ಫಂಡ್ ಹಗರಣದ ತನಿಖೆ ನಡೆಸಿದ ರಾಜ್ಯ ಎಸ್ಐಟಿಯ ಮುಖ್ಯಸ್ಥರಾಗಿದ್ದ ರಾಜೀವ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಪ್ರಕ್ರಿಯೆ ಕೈಗೊಳ್ಳಲು ಅರ್ಜಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು.
ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠವು, ಅರ್ಜಿ ಸಲ್ಲಿಸಲು ತನಿಖಾ ಸಂಸ್ಥೆಗೆ ಹತ್ತು ದಿನಗಳ ಕಾಲಾವಕಾಶ ನೀಡಿತು. ಅರ್ಜಿ ಸಲ್ಲಿಸದ ಏಳು ದಿನಗಳ ಬಳಿಕ ರಾಜೀವ್ ಕುಮಾರ್ ಮತ್ತು ಇತರೆ ಆರೋಪಿಗಳು ಪ್ರತಿಕ್ರಿಯೆ ನೀಡಬಹುದಾಗಿದೆ.

ಶಾರದಾ ಹಗರಣದ ತನಿಖೆ ವೇಳೆ ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧತೆ ತೋರಿಸದ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ವಿರುದ್ಧ ಸಿಬಿಐ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯಿಂದ ಮುಕ್ತಿಗೊಳಿಸಲು ಸಹ ಸುಪ್ರೀಂಕೋರ್ಟ್ ನಿರಾಕರಿಸಿತು.
ಸಿಬಿಐ ಸಲ್ಲಿಸಿರುವ ತನಿಖಾ ವರದಿಯು ಮುಚ್ಚಿದ ಲಕೋಟೆಯಲ್ಲಿ ಇರುವುದರಿಂದ ಇನ್ನೊಂದು ಬದಿಯ ವಾದ ಆಲಿಸದೆ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು.
ಇದರಿಂದ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಿನ್ನಡೆಯುಂಟಾಗಿದೆ.












Click it and Unblock the Notifications