Vande Bharat Express; ದಕ್ಷಿಣ ಭಾರತಕ್ಕೆ 3 ಹೊಸ ರೈಲುಗಳು
ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮೂರು ಹೊಸ ವಂದೇ ಭಾರತ್ ರೈಲುಗಳನ್ನು ನೀಡುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣೆ, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣಗೆ ಈ ರೈಲು ಕೊಡುಗೆಯಾಗಿ ಬರಲಿದೆ.
ಬೆಂಗಳೂರು, ಜನವರಿ 24; ಭಾರತೀಯ ರೈಲ್ವೆಯ ಮೊದಲ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಈ ಮಾದರಿ ಐಷಾರಾಮಿ ರೈಲುಗಳ ಸಂಚಾರ ಆರಂಭವಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಸಹ ಶೀಘ್ರವೇ 3 ರೈಲುಗಳು ಬರಲಿವೆ.
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನವೆಂಬರ್ 2022ರಲ್ಲಿ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಈ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತಿದೆ.
ಮೈಸೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗಾಗಿ ಬೇಡಿಕೆ
ಇದು ದೇಶದ 5ನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯಾಗಿತ್ತು. ಬೆಂಗಳೂರು ನಗರದಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಇದೇ ಮಾದರಿ ರೈಲು ಸಂಚಾರ ಆರಂಭಿಸಲು ಈಗಾಗಲೇ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
Vande Bharat; ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಅಪ್ಡೇಟ್ ಕೊಟ್ಟ ಜೋಶಿ
ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮ, ಐಟಿ ಉದ್ಯಮದ ನೆಲೆ ಹೊಂದಿರುವ ಅನೇಕ ನಗರಗಳಿವೆ. ಇಂತಹ ನಗರಗಳಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ.
Vande Bharat Express : ಬೆಂಗಳೂರು ನಗರದಿಂದ ಮೂರು ಮಾರ್ಗದಲ್ಲಿ ರೈಲು ಸಂಚಾರ
ಭಾರತೀಯ ರೈಲ್ವೆಯಿಂದ ಯೋಜನೆ
ಭಾರತೀಯ ರೈಲ್ವೆ ಅಧಿಕಾರಿಗಳ ಪ್ರಕಾರ ದಕ್ಷಿಣ ಭಾರತದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಇನ್ನೂ 3 ವಂದೇ ಭಾರತ್ ರೈಲುಗಳನ್ನು ಘೋಷಣೆ ಮಾಡಲಾಗುತ್ತದೆ. ಈ ಕುರಿತು ಚಿಂತನೆ ನಡೆದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದ ಮಂಡನೆ ಮಾಡುವ ಬಜೆಟ್ನಲ್ಲಿ ಹೊಸ ರೈಲುಗಳು ಘೋಷಣೆಯಾಗುವ ಸಾಧ್ಯತೆ ಇದೆ.
ಮೈಸೂರು-ಚೆನ್ನೈ ರೈಲು ಸೇವೆ ಹೊರತುಪಡಿಸಿ, ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಿಕಂದರಾಬಾದ್-ವಿಶಾಖಪಟ್ಟಣ ನಡುವಿನ ರೈಲು ಸೇವೆಗೆ ಚಾಲನೆ ನೀಡಿದ್ದಾರೆ. ಈ ರೈಲು ಸೇವೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ.
ಯಾವ-ಯಾವ ಮಾರ್ಗದಲ್ಲಿ ಸಂಚಾರ
ಸದ್ಯ ಇರುವ ಮಾಹಿತಿ ಪ್ರಕಾರ ಭಾರತೀಯ ರೈಲ್ವೆ ಯಾವ-ಯಾವ ಮಾರ್ಗದಲ್ಲಿ ರೈಲುಗಳ ಸಂಚಾರ ನಡೆಸಬಹುದು ಎಂದು ಯೋಜನೆ ರೂಪಿಸುತ್ತಿದೆ. ಬೆಂಗಳೂರು-ಹುಬ್ಬಳ್ಳಿ-ಧಾರವಾಡ ತನಕ ವಂದೇ ಭಾರತ್ ರೈಲು ಓಡಿಸುತ್ತೇವೆ ಎಂದು ರೈಲ್ವೆ ಸಚಿವರು ಈಗಾಗಲೇ ಘೋಷಣೆ ಮಾಡಿದ್ದಾರೆ.
ಉಳಿದಂತೆ ತೆಲಂಗಾಣ ರಾಜ್ಯದ ಕಾಚಿಗುಡಾ-ಬೆಂಗಳೂರು, ತೆಲಂಗಾಣದ ಸಿಕಂದರಾಬಾದ್-ತಿರುಪತಿ, ಸಿಕಂದರಾಬಾದ್-ಪುಣೆ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸುವ ಸಾಧ್ಯತೆ ಇದೆ. ಮಾರ್ಗಗಳ ಅಂತಿಮ ಪಟ್ಟಿ ಶೀಘ್ರವೇ ಪ್ರಕಟವಾಗುವ ನಿರೀಕ್ಷೆ ಇದೆ.
ಚುನಾವಣೆಯ ಮೇಲೆ ಕಣ್ಣು
2023ರಲ್ಲಿ ದಕ್ಷಿಣ ಭಾರತದಲ್ಲಿ ನಡೆಯುವ ಚುನಾವಣೆಗಳ ಮೇಲೆ ಕೇಂದ್ರ ಸರ್ಕಾರ ಗಮನವಿಟ್ಟಿದೆ. ಆದ್ದರಿಂದ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ. ಅದರಲ್ಲಿ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಹ ಸೇರಿವೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ನಡೆಯಲಿದೆ. ತೆಲಂಗಾಣ ರಾಜ್ಯದಲ್ಲಿಯೂ ಸಹ ಇದೇ ವರ್ಷ ಚುನಾವಣೆ ಇದೆ.
ಆಂಧ್ರ ಪ್ರದೇಶ ರಾಜ್ಯದಲ್ಲಿಯೂ ಮುಂದಿನ ವರ್ಷ ಚುನಾವಣೆ ಇದೆ. ಅಲ್ಲದೇ ಲೋಕಸಭೆ ಚುನಾವಣೆ 2024ರಲ್ಲಿ ನಡೆಯಲಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಅದರ ಭಾಗವಾಗಿಯೇ ರೈಲು ಮಾರ್ಗ ಘೋಷಣೆಯಾಗಲಿದೆ ಎಂಬ ವಿಶ್ಲೇಷಣೆಯೂ ಇದೆ.
ಹೈದರಾಬಾದ್-ಮೈಸೂರು ಮಾರ್ಗದಲ್ಲಿ ಓಡಿಸಿ
ತೆಲಂಗಾಣದ ಹೈದರಾಬಾದ್ ಮತ್ತು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಐಟಿ ಉದ್ಯಮ, ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾಗಿದೆ. ಆದ್ದರಿಂದ ಹೈದರಾಬಾದ್-ಬೆಂಗಳೂರು-ಮೈಸೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಬೆಂಗಳೂರು ಮೂಲಕ ಈ ರೈಲು ಸಾಗುವುದರಿಂದ ಹಲವು ಜನರಿಗೆ ಅನುಕೂಲವಾಗಲಿದೆ ಎಂದು ಜನರು ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಆದರೆ ಈ ಬೇಡಿಕೆ ಬಗ್ಗೆ ರೈಲು ಇಲಾಖೆ ಯಾವುದೇ ನಿರ್ಣಯ ಕೈಗೊಂಡಿಲ್ಲ.