ಪೊಲೀಸರ ಮುಂದೆ ಶರಣಾದ ಸೋಮನಾಥ್ ಭಾರ್ತಿ
ನವದೆಹಲಿ, ಸೆಪ್ಟೆಂಬರ್ 29 : ದೆಹಲಿ ಮಾಜಿ ಕಾನೂನು ಸಚಿವ, ಆಮ್ ಆದ್ಮಿ ಪಕ್ಷದ ಹಾಲಿ ಶಾಸಕ ಸೋಮನಾಥ್ ಭಾರ್ತಿ ಅವರು ಪೊಲೀಸರ ಮುಂದೆ ಶರಣಾಗಿದ್ದಾರೆ. ಭಾರ್ತಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಶರಣಾಗುವಂತೆ ಸೂಚನೆ ನೀಡಿತ್ತು.
ಸೋಮನಾಥ್ ಭಾರ್ತಿ ಅವರ ವಿರುದ್ಧ ಪತ್ನಿ ಲಿಪಿಕಾ ಅವರು ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಭಾರ್ತಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ್ದ ಸುಪ್ರೀಂಕೋರ್ಟ್ ಗುರುವಾರಕ್ಕೆ ವಿಚಾರಣೆ ಮುಂದೂಡಿತ್ತು. ಶರಣಾಗುವಂತೆ ಹೇಳಿತ್ತು. [ಜೈಲಿಗೆ ಹೋಗೋಕೆ ಭಾರ್ತಿಗೆ ಭಯಾನಾ?]

'ಸೋಮನಾಥ್ ಭಾರ್ತಿ ಯಾಕೆ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಅವರು ಪೊಲೀಸರಿಗೆ ಶರಣಾಗಲೇಬೇಕು. ಆಮ್ ಆದ್ಮಿ ಪಕ್ಷ ಮತ್ತು ಅವರ ಕುಟುಂಬ ಅವರಿಂದ ಸಾಕಷ್ಟು ಮುಜುಗರ ಅನುಭವಿಸಿದೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೆಲವು ದಿನಗಳ ಹಿಂದೆ ಟ್ವಿಟ್ ಮಾಡಿದ್ದರು. ['ಸುಂದರ ಮಹಿಳೆ' ಎಂದ ಭಾರ್ತಿಗೆ ಹೆಂಡತಿ ಲಿಪಿಕಾ ತಿರುಗೇಟು]
ಪೊಲೀಸರ ಮುಂದೆ ಶರಣಾಗಿ : ಸೋಮವಾರ ಸೋಮನಾಥ್ ಭಾರ್ತಿ ಅವರು ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್. ಎಲ್. ದತ್ತು ಮತ್ತು ನ್ಯಾ.ಅಮಿತಾವ ರಾಯ್ ಅವರನ್ನು ಒಳಗೊಂಡ ಪೀಠ ಸಂಜೆಯೊಳಗೆ ಶರಣಾಗುವಂತೆ ಸೂಚಿಸಿತ್ತು. [ಸೋಮನಾಥ್ ಭಾರ್ತಿ ಪ್ರಕರಣಕ್ಕೆ ಟ್ವೀಟ್ ಪ್ರತಿಕ್ರಿಯೆಗಳು]

ಜವಾಬ್ದಾರಿಯುತ ಪ್ರಜೆಯಂತೆ ನಡೆದುಕೊಳ್ಳಬೇಕು. ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಬಾರದು. ತಲೆಮರೆಸಿಕೊಂಡಿರುವ ವ್ಯಕ್ತಿಯನ್ನು ಕೋರ್ಟ್ ರಕ್ಷಿಸುವುದಿಲ್ಲ ಎಂದು ಹೇಳಿದ್ದ ಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತ್ತು. ಭಾರ್ತಿ ಅವರು ಶರಣಾಗಲು ಮಂಗಳವಾರದ ತನಕ ಸಮಯ ನೀಡಬೇಕು ಎಂಬ ಮನವಿಯನ್ನು ಕೋರ್ಟ್ ತಳ್ಳಿಹಾಕಿತ್ತು. [ಪಿಟಿಐ ಚಿತ್ರಗಳು]












Click it and Unblock the Notifications