ತಮಿಳುನಾಡಿನ 9 ಸಿಎಂಗಳ ಸೂತಕದ ಸುದ್ದಿಗೆ ಸಾಕ್ಷಿಯಾದ ಮಾಜಿ ಸಿಎಂ
ಜಯಲಲಿತಾ ಅವರ ಸಾವಿನ ಸುದ್ದಿಯನ್ನು ಕೇಳುವ ಮೂಲಕ, ಹಿರಿಯ ರಾಜಕೀಯ ಮುಖಂಡ ಎಂ ಕರುಣಾನಿಧಿ, ತಮಿಳುನಾಡಿನ 9 ಸಿಎಂಗಳ ಸೂತಕದ ಸುದ್ದಿಗೆ ಸಾಕ್ಷಿಯಾದರು.
ಭಾರತದ ರಾಜಕಾರಣದ ವಯೋವೃದ್ದ ನಾಯಕ ಮುತ್ತುವೇಲು ಕರುಣಾನಿಧಿ ಮಂಗಳವಾರ (ಡಿ 6) ದೇಶದ ರಾಜಕೀಯ ಇತಿಹಾಸದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.[ಜಯಲಲಿತಾ ಅಪರೂಪದ ಚಿತ್ರಗಳು]
ಡಿಎಂಕೆ ಪಕ್ಷದ ಪರಮೋಚ್ಚ ನಾಯಕ 92 ವರ್ಷದ ಕರುಣಾನಿಧಿ ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದವರು. ವ್ಹೀಲ್ ಚೇರ್ ನಲ್ಲಿ ಕೂತೇ ರಾಜಕೀಯ ಸಂಭಾಳಿಸುವ ಕರುಣಾನಿಧಿ ದೇಶದ ಅನುಭವೀ ರಾಜಕಾರಣಿಯಲ್ಲೊಬ್ಬರು.
1969ರಲ್ಲಿ ಡಿಎಂಕೆ ಪಕ್ಷದ ಸಂಸ್ಥಾಪಕ ಅಣ್ಣಾದೊರೈ ನಿಧನದ ನಂತರ ಪಕ್ಷದ ಮಂಚೂಣಿ ನಾಯಕರಾಗಿ, ಮುಖ್ಯಮಂತ್ರಿಯಾದ ಕರುಣಾನಿಧಿ, ಇದುವರೆಗೆ ತಮಿಳುನಾಡಿನ ಒಂಬತ್ತು ಮಾಜಿ/ಹಾಲಿ ಮುಖ್ಯಮಂತ್ರಿಗಳ ಸಾವಿನ ಸುದ್ದಿಗೆ ಸಾಕ್ಷಿಯಾಗಿದ್ದಾರೆ.
ಇದೇ ತಿಂಗಳು ಒಂದರಂದು ಆಸ್ಪತ್ರೆಗೆ ದಾಖಲಾಗಿರುವ ಕರುಣಾನಿಧಿ, ಇನ್ನೇನು ಕೆಲವು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ.
ಕರುಣಾನಿಧಿ ಇದುವರೆಗೆ 9 ಮುಖ್ಯಮಂತ್ರಿಗಳ ಸಾವಿನ ಸುದ್ದಿಗೆ ಸಾಕ್ಷಿಯಾಗಿದ್ದಾರೆ. ಮುಂದೆ ಓದಿ..
ಭಕ್ತವತ್ಸಲಂ
09.10.1897ರಲ್ಲಿ ಜನಿಸಿದ ಎಂ ಭಕ್ತವತ್ಸಲಂ, 1963 ರಿಂದ 1967ರ ಅವಧಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದರು. ಇವರು 6 ಮಾರ್ಚ್ 1967ರಲ್ಲಿ ನಿಧನ ಹೊಂದಿದರು.
ಅಣ್ಣಾದೊರೈ
ಸಿ ಎನ್ ಅಣ್ಣಾದೊರೈ, 15 ಸೆಪ್ಟಂಬರ್, 1909 - 3 ಫೆಬ್ರವರಿ 1969 ಕಾಲಾವಧಿಯವರು. ತಮಿಳುನಾಡಿನ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳ ಪೈಕಿ ಮಂಚೂಣಿಯಲ್ಲಿ ನಿಲ್ಲುವ ತಮಿಳರ ಪ್ರೀತಿಯ ಅಣ್ಣಾ, 1967 ರಿಂದ 1969ರ ಅವಧಿಯಲ್ಲಿ ಸಿಎಂ ಆಗಿದ್ದರು.
ರಾಮಸಾಮಿ
ಓಮಂದೂರು ರಾಮಸಾಮಿ ರೆಡ್ಡಿ 1895 - 1970ರ ಕಾಲಘಟ್ಟದವರು. ಇವರು 23 ಮಾರ್ಚ್ 1947ರಿಂದ 6 ಏಪ್ರಿಲ್ 1949ರ ಅವಧಿಯಲ್ಲಿ ತಮಿಳುನಾಡು ಸಿಎಂ (ಮದರಾಸು ಸಂಸ್ಥಾನ) ಆಗಿ ಕೆಲಸ ನಿರ್ವಹಿಸಿದ್ದರು.
ರಾಜಾಜಿ
ಚಕ್ರವರ್ತಿ ರಾಜಗೋಪಾಲಾಚಾರಿ ಆಲಿಯಾಸ್ ರಾಜಾಜಿ, 10 ಡಿಸೆಂಬರ್ 1878 ರಲ್ಲಿ ಜನಿಸಿ, 25 ಡಿಸೆಂಬರ್ 1972ರಲ್ಲಿ ನಿಧನ ಹೊಂದಿದರು. ಇವರು 1952 ರಿಂದ 1954ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರು.
ಕಾಮರಾಜ್
ಏಪ್ರಿಲ್ 13, 1954ರಲ್ಲಿ ತಮಿಳುನಾಡು ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ಕುಮಾರಸಾಮಿ ಕಾಮರಾಜ್ ನಡಾರ್, ಅಕ್ಟೋಬರ್ 2, 1975 ರಲ್ಲಿ ನಿಧನ ಹೊಂದಿದರು. ಭಾರತ ಸರಕಾರ ಇವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿತ್ತು.
ಎಂಜಿಆರ್
ಮರುದೂರು ಗೋಪಾಲನ್ ರಾಮಚಂದ್ರನ್ ಆಲಿಯಾಸ್ ಎಂಜಿಆರ್, ತಮಿಳುನಾಡು ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲೊಬ್ಬರು. 17 ಜನವರಿ 1917ರಲ್ಲಿ ಜನಿಸಿದ ಇವರು, 24 ಡಿಸೆಂಬರ್ 1987ರಲ್ಲಿ ನಿಧನ ಹೊಂದಿದರು. ಇವರು ಸುಮಾರು ಹತ್ತು ವರ್ಷದ ಅವಧಿಗೆ ಸಿಎಂ ಆಗಿದ್ದವರು. ಇವರಿಗೆ ಮರಣೋತ್ತರ ಭಾರತರತ್ನ ಲಭಿಸಿತ್ತು.
ನೆಡುಂಚಳಿಯನ್
ವಿ ಆರ್ ನೆಡುಂಚಳಿಯನ್, 24 ಡಿಸೆಂಬರ್, 1987ರಿಂದ 7 ಜನವರಿ, 1988ರ ಎಂಟು ದಿನದ ಮಟ್ಟಿಗೆ ಹಂಗಾಮಿ ಮುಖ್ಯಮಂತ್ರಿಯಾಗಿದ್ದವರು. ಇವರು 11 ಜುಲೈ 1920ರಲ್ಲಿ ಜನಿಸಿದ ಇವರು, 12 ಜನವರಿ 2000 ಇಸವಿಗೆ ನಿಧನ ಹೊಂದಿದರು.
ಜಾನಕಿ ರಾಮಚಂದ್ರನ್
ಜಾನಕಿ ರಾಮಚಂದ್ರನ್, 7 ಜನವರಿ 1988ರಿಂದ 30 ಜನವರಿ 1988ರ ಅವಧಿಗೆ (25 ದಿನ) ಸಿಎಂ ಆಗಿದ್ದವರು. ನವೆಂಬರ್ 30ಕ್ಕೆ ಜನಿಸಿದ ಜಾನಕಿ, ಮೇ 19, 1996ಕ್ಕೆ ವಿಧಿವಶರಾದರು.
ಜಯಲಲಿತಾ
ಜಯಲಲಿತಾ ಜಯರಾಮನ್ ಆಲಿಯಾಸ್ ಜಯಲಲಿತಾ (24 ಫೆಬ್ರವರಿ, 1948 - 5 ಡಿಸೆಂಬರ್, 2016) ಮೂರು ಅವಧಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದವರು.