ಸಹಾರಾ ಇಂಡಿಯಾ ಮುಖ್ಯಸ್ಥ ಸುಬ್ರತೋ ರಾಯ್ ಶರಣು
ನವದೆಹಲಿ, ಫೆ.27: ಬಂಧನ ಭೀತಿ ಎದುರಿಸುತ್ತಿರುವ ಸಹಾರಾ ಇಂಡಿಯಾ ಮುಖ್ಯಸ್ಥ ಸುಬ್ರತೋ ರಾಯ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಮಾಡಲು ವಿಫಲವಾದ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಲಕ್ನೋ ಪೊಲೀಸರೆದರು ಸುಬ್ರತೋ ರಾಯ್ ಶರಣಾಗಿದ್ದಾರೆ.
ಹೂಡಿಕೆದಾರರಿಂದ ಸಂಗ್ರಹಿಸಿದ ಸುಮಾರು 20 ಸಾವಿರ ಕೋಟಿ ರು ಮೊತ್ತವನ್ನು ಮರು ಪಾವತಿಸುವಂತೆ ಸುಬ್ರತೋ ರಾಯ್ ಒಡೆತನದ ಸಹಾರಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಕೋರ್ಟ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ರಾಯ್ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿತ್ತು.

ಉತ್ತರ ಪ್ರದೇಶ ಪೊಲೀಸರು ಗುರುವಾರ (ಫೆ.27) ಸುಬ್ರತೋ ರಾಯ್ ಮನೆ ಮೇಲೆ ದಾಳಿ ನಡೆಸಿ ಬಂಧನಕ್ಕೆ ಮುಂದಾಗಿದ್ದರು. ಆದರೆ, ರಾಯ್ ಸಿಕ್ಕಿರಲಿಲ್ಲ. ಬಳಿಕ ರಾಯ್ ಅವರು ಸುಪ್ರೀಂಕೋರ್ಟ್ ಅನ್ನು ಬೇಷರತ್ ಕ್ಷಮೆಯಾಚಿಸಿದ್ದರು.
'ಸುಬ್ರತಾ ರಾಯ್ ಅವರು ಇಂದು ಲಕ್ನೋ ಪೊಲೀಸರ ಎದುರು ಶರಣಾಗಿದ್ದಾರೆ. ಅವರು ಪೊಲೀಸ್ ಕಸ್ಟಡಿಯಲ್ಲಿ ಮಾ.4 ರ ತನಕ ಇರಲಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟಿಗೆ ಮಾಹಿತಿ ನೀಡಲಾಗಿದೆ' ಎಂದು ರಾಯ್ ಅವರ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
'ನನ್ನ ತಾಯಿಗೆ ಹುಷಾರಿಲ್ಲ. ಹೀಗಾಗಿ ನಾನು ಕೋರ್ಟ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ನನಗೆ ಖುದ್ದು ಹಾಜರಾತಿ ವಿನಾಯತಿ ನೀಡಿ. ಕೋರ್ಟ್ ನಿರ್ದೇಶನದಂತೆ ನಾನು ಸಂಸ್ಥೆಯ ಹೂಡಿಕೆದಾರರಿಗೆ ಹಣ ಮರು ಪಾವತಿ ಮಾಡುತ್ತೇನೆ' ಎಂದು ಸುಬ್ರತೋ ರಾಯ್ ಅವರು ಸುಪ್ರೀಂಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.
ಸಹರಾ ಸಮೂಹದ ಸಂಸ್ಥೆಗಳಾದ ಸಹರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ (ಎಸ್ ಐಆರ್ ಇಸಿ) ಹಾಗೂ ಸಹರಾ ಹೌಸಿಂಗ್ ಇನ್ ವೆಸ್ಟ್ ಮೆಂಟ್ ಕಾರ್ಪೊರೇಶನ್ (ಎಸ್ ಎಚ್ ಐಸಿ) ಸ್ವತ್ತುಗಳನ್ನು ಜಪ್ತಿ ಮಾಡುವಂತೆ ಹಾಗೂ ಅವುಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಅಧಿಕಾರ ಸೆಬಿಗೆ ಸುಪ್ರೀಂಕೋರ್ಟ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಸಹರಾ ಸಮೂಹದ ಈ ಎರಡು ಕಂಪೆನಿಗಳು ತಮ್ಮ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ಶೇ.15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕಾಗಿದೆ.
ಏನಿದು ಪ್ರಕರಣ?: ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳಿಗೆ ವಿರುದ್ಧವಾಗಿ ರೂ. 24,029 ಕೋಟಿ ರೂ. ಸಂಗ್ರಹಿಸಿದ್ದ ಸಹಾರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ. ಸಹಾರಾ ಹೌಸಿಂಗ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಶನ್ ಮತ್ತು ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ ಮೂಲಕ ಠೇವಣಿದಾರರು ತಮಗೆ ಅಗತ್ಯವಿದ್ದಾಗ ಪರಿವರ್ತಿಸಬಹುದಾದ ಒಎಫ್ ಸಿಡಿ ಬಾಂಡ್ ಗಳನ್ನು ವಿತರಿಸುವ ಮೂಲಕ ಈ ನಿಧಿ ಸಂಗ್ರಹಿಸಲಾಗಿತ್ತು.
ಠೇವಣಿ ಸಂಗ್ರಹಣೆಯ ಸ್ಪಷ್ಟ ಉದ್ದೇಶವನ್ನು ಕಂಪನಿ ಸ್ಪಷ್ಟವಾಗಿ ತಿಳಿಸಿರಲಿಲ್ಲ. ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದದಿರುವುದು ಕುತೂಹಲಕಾರಿಯಾಗಿದೆ.












Click it and Unblock the Notifications