ಕೊರೊನಾ ವಿರುದ್ಧ ಹೋರಾಟ; ರಾಜ್ಯಗಳಿಗೆ 15 ಸಾವಿರ ಕೋಟಿ
ನವದೆಹಲಿ, ಮೇ 17 : "ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ಸಾಕಷ್ಟು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತು. ರಾಜ್ಯಗಳು ಸಹ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅವುಗಳಿಗೆ ಪ್ರೋತ್ಸಾಹ ನೀಡುವ ಕೆಲಸವೂ ಆಗುತ್ತಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್, 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ನ 5ನೇ ಹಂತದ ವಿವರಗಳನ್ನು ನೀಡಿದರು. "ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತ್ಯಗತ್ಯ ವಸ್ತುಗಳ ಖರೀದಿಗಾಗಿ ರಾಜ್ಯಗಳಿಗೆ 15,000 ಕೋಟಿ ನೀಡಲಾಗಿದೆ" ಎಂದರು.
"ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸರ್ಕಾರ ವೆಚ್ಚ ಮಾಡುತ್ತಿದ್ದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಸಾಂಕ್ರಮಿಕ ರೋಗಗಳ ಚಿಕಿತ್ಸಾ ಘಟಕವನ್ನು ಆರಂಭಿಸಲಾಗುತ್ತದೆ. ಎಲ್ಲಾ ವಲಯ (ಬ್ಲಾಕ್) ಮಟ್ಟದಲ್ಲಿ ಪ್ರಯೋಗಾಲಯ ಸ್ಥಾಪನೆಯಾಗಲಿದೆ" ಎಂದು ಸಚಿವರು ತಿಳಿಸಿದರು.

"ಕೋವಿಡ್ -19 ಹರಡುವುದನ್ನು ತಡೆಯಲು ಸರ್ಕಾರ ಹಲವು ಪ್ರಕ ಕೈಗೊಂಡಿತು. ಪ್ರಯೋಗಾಲಯ, ಕಿಟ್, ಟೆಲಿ ಕಮ್ಯುನಿಕೇಶನ್ ಸೇವೆಗಳ ಸುಧಾರಣೆಗೆ ಒತ್ತು ನೀಡಲಾಯಿತು. ದೇಶದಲ್ಲಿ ಪಿಪಿಇ ಕಿಟ್ಗಳು ಸಾಕಷ್ಟು ಉತ್ಪಾದನೆಯಾಗುತ್ತಿದೆ" ಎಂದು ಹಣಕಾಸು ಸಚಿವರು ವಿವರಿಸಿದರು.
"ಕೊರೊನಾ ಲಾಕ್ ಡೌನ್ ಪರಿಣಾಮ ಕೇಂದ್ರದಂತೆ ರಾಜ್ಯಗಳಿಗೂ ಸಂಪನ್ಮೂಲ ಸಂಗ್ರಹಣೆ ಸಮಸ್ಯೆಯಾಗಿದೆ. ವಿವಿಧ ರಾಜ್ಯಗಳ ತೆರಿಗೆ ಪಾಲು 46,038 ಕೋಟಿಯನ್ನು ನೀಡಲಾಗಿದೆ. ವೈದ್ಯಕೀಯ ಸಚಿವಾಲಯ ಹೆಚ್ಚುವರಿಯಾಗಿ 14 ಸಾವಿರ ಕೋಟಿ ಬಿಡುಗಡೆ ಮಾಡಿದೆ" ಎಂದರು.
"ರಾಜ್ಯಗಳಿಗೆ ಹಣಕಾಸು ಪಡೆದುಕೊಳ್ಳಲು ವಿಧಿಸಲಾಗಿದ್ದ ಮಿತಿಯನ್ನು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಶೇ 60ಕ್ಕೆ ಹೆಚ್ಚಿಸಿದೆ. ಜಿಎಸ್ಡಿಪಿ (ರಾಜ್ಯಗಳ ಆರ್ಥಿಕ ವೃದ್ಧಿ ದರ) ಮೊತ್ತದ ಶೇ 5ರಷ್ಟು ಪ್ರಮಾಣದ ಸಾಲ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ" ಎಂದು ಸಚಿವರು ಹೇಳಿದರು.












Click it and Unblock the Notifications