ಹುತಾತ್ಮರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ರಾಜ್ ನಾಥ್ ಸಿಂಗ್
ರಾಯ್ಪುರ, ಏಪ್ರಿಲ್ 25: ಸೋಮವಾರ ನಡೆದ ಸಿಆರ್ ಪಿಎಫ್ ಯೋಧರ ಹತ್ಯೆಯು ಹೇಡಿಗಳ ಕೆಲಸವಾಗಿದ್ದು, ಹುತಾತ್ಮ ಯೋಧರ ಈ ತ್ಯಾಗವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಎಚ್ಚರಿಸಿದ್ದಾರೆ.
ಛತ್ತೀಸ್ ಗಢದ ಸುಕ್ಮಾದಲ್ಲಿ ಏಪ್ರಿಲ್ 24ರಂದು ನಡೆದಿದ್ದ ಯೋಧರು ಹಾಗೂ ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ 26 ಯೋಧರು ಸಾವನ್ನಪ್ಪಿದ್ದರು.

ಹುತಾತ್ಮ ಯೋಧರ ಪಾರ್ಥೀವ ಶರೀರಗಳಿಗೆ ಅಂತಿಮ ಸಲ್ಲಿಸುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದ ಅವರು, ನಮನ ಸಲ್ಲಿಸಿದರು. ಆನಂತರ, ರಾಯ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯೋಧರ ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ ಸಿಂಗ್ ಕೂಡಾ ಹಾಜರಿದ್ದರು.
ಸುದ್ದಿಗೋಷ್ಠಿಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿಯನ್ನು ತಣ್ಣಗಿನ ಕ್ರೌರ್ಯ ಎಂದು ಬಣ್ಣಿಸಿದ ರಾಜ್ ನಾಥ್, ''ನಕ್ಸಲರು ಬಡವರ ವಿರೋಧಿಗಳು. ಇಂಥವರನ್ನು ಹತ್ತಿಕ್ಕಲೇಬೇಕಿದೆ. ಈವರೆಗೆ ನಕ್ಸಲರನ್ನು ಹತ್ತಿಕ್ಕಲು ನಾವು (ಸರ್ಕಾರ) ಅನುಸರಿಸುತ್ತಿದ್ದ ಮಾರ್ಗಗಳ ಪುನರಾವಲೋಕ ನಡೆಸಬೇಕಿದೆ. ಅವರನ್ನು ಹಿಮ್ಮೆಟ್ಟಿಸಲು ಹೊಸ ಮಾರ್ಗಗಳನ್ನು ಹುಡುಕುವತ್ತ ಸರ್ಕಾರ ಚಿಂತನೆ ನಡೆಸಲಿದೆ'' ಎಂದು ತಿಳಿಸಿದರು.











Click it and Unblock the Notifications