ಟಿಕೆಟ್ ಸಿಗದಿದ್ದರೆ ಬಂಡಾಯದ ಹಾಡು, ರಾಜಸ್ಥಾನದ್ದೂ ಅದೇ ಪಾಡು!
ಜೈಪುರ, ಅಕ್ಟೋಬರ್ 31: ಮಧ್ಯಪ್ರದೇಶದಲ್ಲಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಎದ್ದಿರುವ ವಿವಾದ ರಾಜಸ್ಥಾನದಲ್ಲೂ ಆರಂಭವಾಗಿದೆ!
ಎರಡು ರಾಜ್ಯಗಳಲ್ಲೂ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಬಂದವರ ನಡುವೆ ಟಿಕೆಟ್ ಗಾಗಿ ಹಣಾಹಣಿ ಏರ್ಪಟ್ಟಿದ್ದು, ಹೈಕಮಾಂಡಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನೆರಡು ದಿನಗಳಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ನ 40 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡಗುಡೆಯಾಗಲಿದೆ. ಕಳೆದ ಚುನಾವಣೆಯಲ್ಲಿ ಸೋಲುಂಡ ನಾಯಕರಿಗೆ ಟಿಕೆಟ್ ನೀಡಬಾರದು ಎಂದು ಕೆಲವರು ವಾದಿಸುತ್ತಿದ್ದಾರೆ. ಹಾಗೆಯೇ ವಲಸೆ ಬಂದವರಿಗೆ ಟಿಕೆಟ್ ನೀಡಿ ಮೂಲ ಕಾಂಗ್ರೆಸ್ಸಿಗರನ್ನು ನಿರ್ಲಕ್ಷ್ಯಿಸಿದರೆ ಬಂಡಾಯ ಏಳುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಟಿಕೆಟ್ ಹಂಚಿಕೆ ವಿಷಯದಲ್ಲಿ ಆಕ್ರೋಶ
ಬೆಗನ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಂದ್ರ ಸಿಂಗ್ ಬಿದುರಿ ಅವರ ಹೆಸರನ್ನು ಅಭ್ಯರ್ಥಿಗಳ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲೆ ಇಡಲಾಗಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಈ ಭಾಗದ ಕಾಂಗ್ರೆಸ್ ಮುಖಂಡರು ನೇರ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಅವರ ಹೆಸರನ್ನು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಸಿರಲೇ ಇಲ್ಲ, ಅಂದಮೇಲೆ ಅವರ ಹೆಸರು ಅಗ್ರಪಂಕ್ತಿಯಲ್ಲಿ ಬರುವುದು ಹೇಗೆ ಎಂದು ಚಿತ್ತೋರ್ಗಢ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದ್ದಾರೆ. ಇಂಥ ಹಲವು ಪತ್ರಗಳು ರಾಃಉಲ್ ಗಾಂಧಿ ಅವರಿಗೆ ಹೋಗಿದ್ದು, ಟಿಕೆಟ್ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುವ ಸೂಚನೆ ಸಿಕ್ಕಿದೆ.

ವಲಸೆ ಬಂದವರಿಗೆ ಟಿಕೆಟ್ ನೀಡಬೇಡಿ!
ಅಷ್ಟೇ ಅಲ್ಲ, ಚುರು ವಿಧಾನಸಭಾ ಕ್ಷೇತ್ರದ ಮಕ್ಬೂಲ್ ಮಂಡೇಲಿಯಾ ಎಂಬುವವರನ್ನೂ ಅಭ್ಯರ್ಥಿಗಳನ್ನಾಗಿ ಮಾಡಬಹುದು ಎಂಬುದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಿಂದ ತಿಳಿದುಬಂದಿದೆ. ಇದನ್ನೂ ಕಾಂಗ್ರೆಸ್ ಕಾರ್ಯಕರ್ತರು, ಕೆಲ ಮುಖಂಡರು ವಿರೋಧಿಸಿದ್ದಾರೆ. ಬೇರೆ ಪಕ್ಷಗಳಿಂದ ಟಿಕೆಟ್ ಗಾಗಿಯೇ ಕಾಂಗ್ರೆಸ್ ಗೆ ಬಂದ ಹಮಿದಾ ಬೇಗಂ ಎಂಬ ಮಹಿಳೆಗೂ ಟಿಕೆಟ್ ನೀಡಬಾರದು ಎಂಬ ಕೂಗು ಕೇಳಿಬರುತ್ತಿದೆ.

ಮೂಲ ಕಾಂಗ್ರೆಸ್ಸಿಗರು V/s ವಲಸೆ ಕಾಂಗ್ರೆಸಿಗರು
ಎಲ್ಲೆಡೆಯೂ ಚುನಾವಣೆಯ ಸಮಯದಲ್ಲಿ ಏಳುವ ಬಹುಮುಖ್ಯ ಸಮಸ್ಯೆಗಳಲ್ಲಿ ಇದೊಂದು. ಟಿಕೆಟ್ ಸಿಕ್ಕಿಲ್ಲವೆಂದು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬರುವವರಿಗೆ ಟಿಕೆಟ್ ನೀಡುವುದರಿಂದ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿದಂತಾಗುತ್ತದೆ ಎಂಬ ಕೂಗು ಕೇಳಿಬರುತ್ತಿದೆ. ಹಾಗೊಮ್ಮೆ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡಿದರೆ ಬಂಡಾಯ ಏಳುವ ಎಚ್ಚರಿಕೆಯನ್ನೂ ಮೂಲ ಕಾಂಗ್ರೆಸಿಗರು ನೀಡಿರುವುದು ಹೈಕಮಾಂಡಿಗೆ ದೊಡ್ಡ ತಲೆನೋವಾಗಿದೆ.

ಚುನಾವಣೆ ಯಾವತ್ತು?
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಮತ್ತು ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿರುದ್ಧ ಜನರಿಗ ಉತ್ತಮ ಅಭಿಪ್ರಾಯವಿಲ್ಲ. ಈ ಆಡಳಿತವಿರೋಧಿ ಅಲೆಯನ್ನೇ ಕಾಂಗ್ರೆಸ್ ತನ್ನ ಗೆಲುವಿನ ಮೆಟ್ಟಿಲನ್ನಾಗಿ ಬಳಸಿಕೊಳ್ಳಬಹುದು.












Click it and Unblock the Notifications