ನಕಲಿ ಪದವಿ: ಹರ್ಮನ್ಪ್ರೀತ್ ಕೌರ್ ಡಿಎಸ್ಪಿ ಹುದ್ದೆ ವಾಪಸ್
Recommended Video
ಚಂಡಿಗಡ, ಜುಲೈ 10: ಭಾರತದ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಪದವಿ ಪ್ರಮಾಣಪತ್ರಗಳು ನಕಲಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಅವರಿಗೆ ನೀಡಿದ್ದ ಪೊಲೀಸ್ ಉಪ ವರಿಷ್ಠಾದಿಕಾರಿ ಹುದ್ದೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.
ಕಳೆದ ವರ್ಷ ನಡೆದ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಫೈನಲ್ ತಲುಪುವಲ್ಲಿ ಮಹತ್ವದ ಕೊಡುಗೆ ನೀಡಿದ್ದ ಹರ್ಮನ್ಪ್ರೀತ್ ಕೌರ್ ಅವರಿಗೆ ಪಂಜಾಬ್ ಸರ್ಕಾರ ಈ ವರ್ಷದ ಮಾರ್ಚ್ನಲ್ಲಿ ಡಿಎಸ್ಪಿ ಹುದ್ದೆ ನೀಡಿ ಗೌರವಿಸಿತ್ತು.
ಭಾರತೀಯ ಮಹಿಳಾ ಕ್ರಿಕೆಟರ್ ಹರ್ಮನ್ ಪ್ರೀತ್ ಗೆ DCP ಹುದ್ದೆ
ಹುದ್ದೆ ಪಡೆದುಕೊಳ್ಳುವ ವೇಳೆ ಕೌರ್ ಅವರು ಮೀರತ್ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ 2011ರಲ್ಲಿ ಪದವಿ ಪಡೆದ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ಬಳಿಕ ನಡೆದ ಪೊಲೀಸ್ ಪರಿಶೀಲನೆಯಲ್ಲಿ ಅವರು ನೀಡಿದ ಪ್ರಮಾಣಪತ್ರ ನಕಲಿ ಎನ್ನುವುದು ದೃಢಪಟ್ಟಿದೆ.
'ಹರ್ಮನ್ಪ್ರೀತ್ ಅವರ ವಿದ್ಯಾರ್ಹತೆಯನ್ನು ಈಗ ಕೇವಲ 12ನೆಯ ತರಗತಿ ಎಂದು ಪರಿಗಣಿಸಬೇಕಾಗಿರುವುದರಿಂದ ಅವರಿಗೆ ಹೆಚ್ಚೆಂದರೆ ಪಂಜಾಬ್ ಪೊಲೀಸ್ ಕಾನ್ಸ್ಟೆಬಲ್ ಕೆಲಸ ನೀಡಬಹುದು ಎಂದು ರಾಜ್ಯ ಸರ್ಕಾರವು ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ' ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸ್ ನಿಯಮಾವಳಿಗಳ ಪ್ರಕಾರ ಅವರ ಈಗಿನ ವಿದ್ಯಾರ್ಹತೆಯು ಡಿಎಸ್ಪಿ ಹುದ್ದೆ ಪಡೆಯಲು ಸಾಲುವುದಿಲ್ಲ.
ಸಿಇಎಟಿ ಅವಾರ್ಡ್ಸ್: ಕೊಹ್ಲಿ, ಹರ್ಮನ್ ಪ್ರೀತ್ ಗೆ ಉನ್ನತ ಗೌರವ
ಆದರೆ, ನಕಲಿ ಪದವಿ ಪ್ರಮಾಣಪತ್ರ ನೀಡಿದ್ದಕ್ಕೆ ಹರ್ಮನ್ಪ್ರೀತ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪಂಜಾಬ್ ಸರ್ಕಾರ ಹೇಳಿದೆ.
ಏಕೆಂದರೆ, ಅವರು ಅಂತರರಾಷ್ಟ್ರೀಯ ಖ್ಯಾತಿಯ ಆಟಗಾರ್ತಿ. ಅವರು ಕ್ರಿಕೆಟ್ನಲ್ಲಿ ಮಾಡಿರುವ ಸಾಧನೆಗೆ ಆಧಾರದಲ್ಲಿ ಡಿಎಸ್ಪಿ ಶ್ರೇಣಿಯ ಹುದ್ದೆ ನೀಡಲಾಗಿತ್ತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕ್ರಿಕೆಟ್ನ ಉತ್ತಮ ಸಾಧನೆಗಾಗಿ ಹರ್ಮನ್ಪ್ರೀತ್ ಕೌರ್ ಅರ್ಜುನ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಒಂದು ವೇಳೆ ಪಂಜಾಬ್ ಪೊಲೀಸರು ನಕಲಿ ಪ್ರಮಾಣಪತ್ರ ಪಡೆದ ಅಪರಾಧ ಎಸಗಿದ್ದಾರೆ ಎಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿದರೆ ಅರ್ಜುನ ಪ್ರಶಸ್ತಿಯನ್ನು ಕೂಡ ಹಿಂದಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಹರ್ಮನ್ಪ್ರೀತಿ ಅವರು ನೀಡಿದ್ದ ಪದವಿ ಪ್ರಮಾಣಪತ್ರವನ್ನು ಜಲಂಧರ್ ಪೊಲೀಸರು ಪರಿಶೀಲನೆ ನಡೆಸಿದ್ದರು. ಅವರ ಕೊನೆಯ ಮಾರ್ಕ್ಸ್ ಶೀಟ್ನಲ್ಲಿ ನಮೂದಿಸಿದ್ದ ನೋಂದಣಿ ಸಂಖ್ಯೆ ಮತ್ತು ಪರೀಕ್ಷಾ ಸಂಖ್ಯೆಗಳು ವಿಶ್ವವಿದ್ಯಾಲಯದ ದಾಖಲೆಗಳಲ್ಲಿಯೇ ಇಲ್ಲ ಎನ್ನುವುದು ಖಚಿತವಾಗಿತ್ತು.
ರಾಜ್ಯಕ್ಕೆ ಹೆಮ್ಮೆ ತಂದ ಆಟಗಾರ್ತಿ ಎಂಬ ಸಲುವಾಗಿ ಪಂಜಾಬ್ ಸರ್ಕಾರವು ಹರ್ಮನ್ಪ್ರೀತ್ ಅವರಿಗೆ ಡಿಎಸ್ಪಿ ಹುದ್ದೆ ನೀಡಿ ಗೌರವಿಸಿತ್ತು. ಅದಕ್ಕೂ ಮೊದಲು ಅವರು ಪಶ್ಚಿಮ ರೈಲ್ವೆಯಲ್ಲಿ ಕಚೇರಿ ವರಿಷ್ಠಾಧಿಕಾರಿಯಾಗಿ ಐದು ವರ್ಷದ ಒಪ್ಪಂದದೊಂದಿಗೆ ಕೆಲಸ ಮಾಡುತ್ತಿದ್ದರು.
ಅಲ್ಲಿ ಅವರು ಮೂರು ವರ್ಷ ಮಾತ್ರ ಸೇವೆ ಸಲ್ಲಿಸಿದ್ದರಿಂದ ಅವರಿಗೆ ಅಲ್ಲಿಂದ ನಿರ್ಗಮನ ಪತ್ರ ನೀಡಲು ಅವಕಾಶವಿರಲಿಲ್ಲ. ಈ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿದ್ದ ಅಮರಿಂದರ್ ಸಿಂಗ್, ರೈಲ್ವೆ ಇಲಾಖೆಯ ಅನುಮತಿ ಪತ್ರ ಪಡೆದು ಪೊಲೀಸ್ ಇಲಾಖೆಗೆ ಸೇರುವಂತೆ ಮಾಡಿದ್ದರು.