ಪಂಜಾಬಿಗೆ ನುಗ್ಗಿದ್ದು ಲಷ್ಕರ್ ಇ ತೋಯ್ಬಾ ಉಗ್ರರು?
ಬೆಂಗಳೂರು, ಜುಲೈ 29 : ಸೋಮವಾರ ಮುಂಜಾನೆ ಪಂಜಾಬಿನ ಗುರುದಾಸ್ ಪುರಕ್ಕೆ ನುಗ್ಗಿದ ಉಗ್ರರು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ. ಜುಲೈ 15ರಿಂದ 18ರೊಳಗೆ ದಾಳಿಯ ಯೋಜನೆಯನ್ನು ತಯಾರಿಸಿದ್ದ ಉಗ್ರರು ಜುಲೈ 27ರಂದು ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.
ಸುಮಾರು 11 ಗಂಟೆಗಳ ಕಾರ್ಯಾಚರಣೆ ಬಳಿಕ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಗುರುದಾಸ್ ಪುರಕ್ಕೆ ನುಗ್ಗಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿದ್ದವು. ಭಾನುವಾರ ರಾತ್ರಿಯೇ ಉಗ್ರರು ಭಾರತಕ್ಕೆ ನುಸುಳಿದ್ದರು ಎಂದು ಶಂಕಿಸಲಾಗಿದೆ. [ಚಿತ್ರಗಳು : ಪಂಜಾಬಿನಲ್ಲಿ ಉಗ್ರರನ್ನು ಮಟ್ಟ ಹಾಕಿದ ಯೋಧರು]

ಸ್ಥಳೀಯರ ನೆರವು ಪಡೆದಿದ್ದರೆ? : ಉಗ್ರರು ಭಾರತಕ್ಕೆ ನುಸುಳಲು ಜಮ್ಮು ಅಥವ ಪಂಜಾಬಿನಲ್ಲಿ ಸ್ಥಳೀಯರ ನೆರವು ಪಡೆದಿರಬಹುದು ಎಂದು ತನಿಖೆ ನಡೆಸಲಾಗುತ್ತಿದೆ. ದಾಳಿ ಮಾಡಲು ಮೂರು ಸ್ಥಳಗಳನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದರು. ಮೊದಲು ರಸ್ತೆಯಲ್ಲಿ ಗುಂಡು ಹಾರಿಸಿದ ಉಗ್ರರು ನಂತರ ಪೊಲೀಸ್ ಠಾಣೆಗೆ ನುಗ್ಗಿ ಅಡಗಿ ಕುಳಿತರು.[ಉಗ್ರರ ಕಾರ್ಯಾಚರಣೆಯ ವಿವರ]
ಮೊದಲ ಬಾರಿ ಬಂದಿದ್ದರು : ಪ್ರಾಥಮಿಕವಾದ ತನಿಖೆಯ ಮಾಹಿತಿಯಂತೆ ಉಗ್ರರು ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಮಾತುಕತೆಯನ್ನು ಮುರಿಯಲು ಈ ದಾಳಿಯನ್ನು ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಸಾಯಲು ಸಿದ್ಧವಾಗಿ ಬಂದಿದ್ದರು : ಪೊಲೀಸ್ ಠಾಣೆಯಲ್ಲಿ ಅಡಗಿ ಕುಳಿತು ಉಗ್ರರು ಭದ್ರತಾ ಪಡೆಗಳ ಜೊತೆ ನಿರಂತರವಾಗಿ ಗುಂಡಿನ ಚಕಮಕಿ ನಡೆಸಿದರು. ಉಗ್ರರು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಮತ್ತು ಜನರನ್ನು ಒತ್ತೆಯಾಗಿಟ್ಟುಕೊಂಡು ಯಾವುದೇ ಬೇಡಿಕೆಯನ್ನು ಮುಂದಿಡಲಿಲ್ಲ.
ಬಾಂಬ್ ಶಕ್ತಿಯುತವಾಗಿದ್ದವು : ಸೇನಾ ಸಮವಸ್ತ್ರ ಧರಿಸಿ ಬಂದಿದ್ದ ಉಗ್ರರು ದೀನಾ ನಗರ್ ಪೊಲೀಸ್ ಠಾಣೆಗೆ ನುಗ್ಗುವ ಮೊದಲು ರೈಲ್ವೆ ಹಳಿಗಳ ಮೇಲೆ ಪ್ರಬಲವಾದ 9 ಬಾಂಬ್ ಗಳನ್ನು ಇಟ್ಟಿದ್ದರು. ಆದರೆ, ಅವುಗಳಿಗೆ ಟೈಮರ್ ಆಳವಡಿಸಿರಲಿಲ್ಲ. ಆ ಮಾರ್ಗದಲ್ಲಿ ರೈಲು ಬಂದಿದ್ದರೆ ಅವುಗಳು ಸ್ಫೋಟಗೊಳ್ಳುತ್ತಿದ್ದವು. ಅದಕ್ಕೂ ಮೊದಲೇ ಪೊಲೀಸರು ಅದನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದರು.












Click it and Unblock the Notifications