ದಿನಾಚರಣೆ, ಮಕ್ಕಳ ಭವಿಷ್ಯ, ದೆಹಲಿ ರಸ್ತೆ ಬದಿಯ ಬೆಂಕಿ
ಈ ದೇಶದ ಭವಿಷ್ಯ ಎನಿಸಿಕೊಂಡ ಮಕ್ಕಳನ್ನು ಇದೊಂದು ದಿನ ಅಂದರೆ ಮಕ್ಕಳ ದಿನಾಚರಣೆಯಂದು ನೆನೆಸಿಕೊಳ್ಳುವುದು ಬಿಟ್ಟರೆ ವರ್ಷದ ಉಳಿದೆಲ್ಲ ದಿನವೂ ನಿರ್ಲಕ್ಷ್ಯವೇ ಎದ್ದು ಕಾಣುತ್ತದೆ. ಮಕ್ಕಳ ಆರೋಗ್ಯ, ಶಿಕ್ಷಣ, ಆಟದ ಮೈದಾನ...ಹೀಗೆ ಮಕ್ಕಳು ತುಂಬ ಖುಷಿಯಿಂದ ಬೆಳೆಯಲು ಬೇಕಾದ ವಾತಾವರಣ ಸೃಷ್ಟಿಯಾಗಬೇಕಲ್ಲವೆ?
ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿ ನಾಲ್ಕು ದಿನಗಳ ಕಾಲ ಶಾಲೆಗೆ ರಜಾ ಘೋಷಿಸಿದ ನಂತರ ಸೋಮವಾರವಷ್ಟೇ ಶಾಲೆಗಳು ಪುನರಾರಂಭವಾಗಿವೆ. ಮಕ್ಕಳು ರಸ್ತೆಯಲ್ಲಿ ನಡೆದುಬರುವಾಗ ಹಿನ್ನೆಲೆಯಲ್ಲಿ ಅದ್ಯಾವುದೋ ವ್ಯಕ್ತಿ ಮತ್ತೆ ಕಸಕ್ಕೆ ಬೆಂಕಿ ಹಾಕಿದ್ದಾನೆ. ಇಂಥ ದೃಶ್ಯ ನೋಡಿದರೆ ಕರುಳು ಹಿಂಡಿದಂತಾಗುತ್ತದೆ.
ಇರಲಿ, ಈ ದಿನ ಅಂದರೆ ಮಕ್ಕಳ ದಿನದ ವಿಶೇಷವಾಗಿ ಕೆಲವು ತುಂಬ ಚಂದದ ಫೋಟೋಗಳು ಇಲ್ಲಿವೆ. ದೇಶದ ಮೊದಲ ಪ್ರಧಾನಿ ನೆಹರೂ ಅವರ ಜನ್ಮದಿನದ ಅಂಗವಾಗಿ ಆಚರಿಸುವ ಮಕ್ಕಳ ದಿನದಲ್ಲಿ ವಿಶೇಷ ಮಕ್ಕಳು ಸಹ ಭಾಗವಹಿಸಿವೆ. ಜತೆಗೆ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಲಾಗಿದೆ. ಮಕ್ಕಳ ದಿನದಂದು ಭೂತಕಾಲ ಅಂದರೆ ನಮ್ಮ ಬಾಲ್ಯ ಹಾಗೂ ಅವರ ಭವಿಷ್ಯ ಎರಡೂ ಏಕಕಾಲಕ್ಕೆ ಕಣ್ಣೆದುರು ಬರುತ್ತದೆ.

ನೆಹರೂ ನೆನಕೆ
ಮಕ್ಕಳ ದಿನಾಚರಣೆ ಅಂಗವಾಗಿ ಮಂಗಳವಾರ ಕೋಲ್ಕತ್ತಾದಲ್ಲಿ ಶಾಲಾ ಮಕ್ಕಳು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಸ್ಮರಿಸಿದರು. ನವೆಂಬರ್ ಹದಿನಾಲ್ಕನೇ ತಾರೀಕು ನೆಹರೂ ಜನ್ಮದಿನ. ಅವರ ಅಪೇಕ್ಷೆಯಂತೆಯೇ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮಕ್ಕಳಿಗೆ ರಾಷ್ಟ್ರೀಯ ಪುರಸ್ಕಾರ
ಮಕ್ಕಳ ದಿನದ ವಿಶೇಷವಾಗಿ ರಾಷ್ಟ್ರೀಯ ಮಕ್ಕಳ ಪುರಸ್ಕಾರ ವಿತರಿಸಿದ ನಂತರ ಪ್ರಶಸ್ತಿ ಪುರಸ್ಕೃತ ಮಕ್ಕಳ ಜತೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ಮೊದಲ ಪ್ರಜೆ ರಾಮ್ ನಾಥ್ ಕೋವಿಂದ್ ಅವರು ಫೋಟೋದಲ್ಲಿ ಸೆರೆಯಾದ ಬಗೆಯಿದು.

ಗೌರವ ಸಮರ್ಪಣೆ
ಜವಾಹರ್ ಲಾಲ್ ನೆಹರೂ ಅವರ 128ನೇ ಜನ್ಮ ವರ್ಷಾಚರಣೆ ಸಂಭ್ರಮದಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆಹರೂ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು.

ಮಕ್ಕಳ ಪಾದಯಾತ್ರೆ
ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯಿಸಿ ಮಕ್ಕಳು ಕೋಲ್ಕತ್ತಾದಲ್ಲಿ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ನೆಹರೂ ವೇಷಧಾರಿ ಮಕ್ಕಳು
ಈ ದೃಶ್ಯ ನಮ್ಮ ಮನೆಯ ಬೀದಿಗಳಲ್ಲೂ ಕಾಣಿಸುವಂಥದ್ದೇ. ನೆಹರೂ ವೇಷದಲ್ಲಿ ಚಿಕ್ಕ ಮಕ್ಕಳು. ಹೀಗೆ ಕಾಣಿಸಿಕೊಂಡಿದ್ದು ಮಧ್ಯಪ್ರದೇಶದ ಭೋಪಾಲದಲ್ಲಿ.

ವಿಶೇಷ ಮಕ್ಕಳು
ಮುಂಬೈನಲ್ಲಿ ಮಂಗಳವಾರ ವಿಶೇಷ ಮಕ್ಕಳಿಂದ ಮಕ್ಕಳ ದಿನದ ಸಂಭ್ರಮ.

ಮಕ್ಕಳ ಭವಿಷ್ಯ ಮತ್ತು ಬೆಂಕಿ
ಇದು ದೆಹಲಿಯ ಚಿತ್ರ. ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಕಸಕ್ಕೆ ಬೆಂಕಿ ಹಾಕಿದ್ದಾನೆ. ದೇಶದ ಭವಿಷ್ಯ ಎನಿಸಿರುವ ಮಕ್ಕಳು ಶಾಲೆಯತ್ತ ಹೊರಟಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮೀತಿ ಮೀರಿದ ಕಾರಣಕ್ಕೆ ನಾಲ್ಕು ದಿನಗಳ ಕಾಲ ಶಾಲೆಗೆ ರಜಾ ನೀಡಲಾಗಿತ್ತು. ಸೋಮವಾರವಷ್ಟೇ ಪುನರಾರಂಭವಾದ ಶಾಲೆಗೆ ತೆರಳುವಾಗ ಮಕ್ಕಳು ಕಂಡಿದ್ದು ಇಂಥ ಹಿನ್ನೆಲೆಯಲ್ಲಿ.












Click it and Unblock the Notifications