ಪ್ರಶಾಂತ್ ಕಿಶೋರ್ ಪ್ರಸ್ತಾವಿತ ಕಾಂಗ್ರೆಸ್ 'ಮರುಹುಟ್ಟು' ಯೋಜನೆ: ಏನಿದು?
ನವದೆಹಲಿ, ಏಪ್ರಿಲ್ 22: ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧವಾದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜೊತೆ ಹಲವಾರು ಬಾರಿ ಚರ್ಚೆ ನಡೆಸಿರುವ ಪ್ರಶಾಂತ್ ಕಿಶೋರ್ ಇನ್ನೆರಡು ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ. ಈ ನಡುವೆ ಪ್ರಶಾಂತ್ ಕಿಶೋರ್ ಅವರ ಕಾಂಗ್ರೆಸ್ ಮರುಹುಟ್ಟು ನೀಡುವ ಯೋಜನೆಯ ಬಗ್ಗೆ ಚರ್ಚೆ ಆರಂಭವಾಗಿದೆ.
ಈ ಹಿಂದೆಯೇ ಹಲವಾರು ಬಾರಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನ ಮಾಡುವ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದರು. ಈ ಬಗ್ಗೆ ಪ್ರಮುಖ ಅಂಶಗಳ ವರದಿ ಕೂಡಾ ಮಾಡಿದ್ದರು. ಈಗ ಕಾಂಗ್ರೆಸ್ ಸೇರ್ಪಡೆ ಬಳಿಕ ಈ ಯೋಜನೆ ಕಾರ್ಯತಂತ್ರಕ್ಕೆ ತಂದು ಕಾಂಗ್ರೆಸ್ ಅನ್ನು ಪ್ರಶಾಂತ್ ಕಿಶೋರ್ ಪುನರುಜ್ಜೀವನ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ವಾರ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಶಾಂತ್ ಕಿಶೋರ್ ಮೊದಲ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ನ ಪುನರುಜ್ಜೀವನದ ಯೋಜನೆ ಮತ್ತು ಮುಂಬರುವ ಚುನಾವಣೆಗಳು, 2024 ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ತಂತ್ರದ ಕುರಿತು ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಆಯ್ದ ಕಾಂಗ್ರೆಸ್ ನಾಯಕರ ಮುಂದೆ ಪ್ರಸ್ತಾಪ ಮಾಡಲಾಗಿದೆ. ಅವರಲ್ಲಿ ಈ ಯೋಜನೆ ಮತ್ತು ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಸೇರುವ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಶಾಂತ್ ಕಿಶೋರ್ ಅವರ ಕಾಂಗ್ರೆಸ್ 2.0 ಪ್ಲಾನ್
ಪ್ರಶಾಂತ್ ಕಿಶೋರ್ ಅವರ ಕಾಂಗ್ರೆಸ್ 2.0 ಪ್ಲಾನ್ ಬಹಿರಂಗವಾಗಿಲ್ಲವಾದರೂ, ಕಳೆದ ವರ್ಷ ಅವರು ಗಾಂಧಿಯವರಿಗೆ ಪ್ರಸ್ತುತಪಡಿಸಿದ ಯೋಜನೆಯು 2024 ರಲ್ಲಿ ಭಾರತದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವ ಕುರಿತಾಗಿ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಪಕ್ಷಕ್ಕೆ ಉಂಟಾದ ನಷ್ಟವನ್ನು ಉಲ್ಲೇಖ ಮಾಡಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಪಕ್ಷ ಹೇಗೆ ಬೆಳೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್ನ ಪರಂಪರೆ, ಕಾಂಗ್ರೆಸ್ ನಡೆದು ಬಂದ ಹಾದಿ, ಮುಂದೆ ಕಾಂಗ್ರೆಸ್ ಏನು ಮಾಡಬೇಕು ಎಂಬ ವಿಚಾರಗಳ ಬಗ್ಗೆ ಈ ಕಾಂಗ್ರೆಸ್ ಪುನರುಜ್ಜೀವನ ಯೋಜನೆಯಲ್ಲಿ ಪ್ರಸ್ತುತ ಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಕಾಂಗ್ರೆಸ್ ಎಡವಿದ್ದು ಎಲ್ಲಿ ಎಂಬ ಬಗ್ಗೆಯೂ ಉಲ್ಲೇಖಗಳು ಇದೆ.

ಗಾಂಧೀಯೇತರ ಕಾರ್ಯಾಧ್ಯಕ್ಷರ ಪ್ರಸ್ತಾಪ
"ಕಾಂಗ್ರೆಸ್ನ ಪುನರ್ಜನ್ಮ" ಕ್ಕಾಗಿ ನಾಯಕತ್ವವು ಪಕ್ಷವನ್ನು ಪುನರ್ನಿರ್ಮಿಸಬೇಕು ಹಾಗೂ ಪ್ರಜಾಪ್ರಭುತ್ವಗೊಳಿಸಬೇಕಾಗಿದೆ ಎಂದು ಪ್ರಶಾಂತ್ ಕಿಶೋರ್ ಯೋಜನೆ ಹೇಳುತ್ತದೆ. ಇದು ಸೋನಿಯಾ ಗಾಂಧಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ, "ಗಾಂಧಿಯೇತರ" ಕಾರ್ಯಾಧ್ಯಕ್ಷ ಅಥವಾ ಉಪಾಧ್ಯಕ್ಷರನ್ನಾಗಿ ಮಾಡುವುದು ಹಾಗೂ ರಾಹುಲ್ ಗಾಂಧಿಯನ್ನು ಸಂಸದೀಯ ಮಂಡಳಿಯ ಮುಖ್ಯಸ್ಥರನ್ನಾಗಿ ಮಾಡುವುದರ ಬಗ್ಗೆ ಸೂಚನೆ ನೀಡಿದೆ. "ಕಾಂಗ್ರೆಸ್ ನಾಯಕತ್ವದ ನಿರ್ದೇಶನದಂತೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುವ ಗಾಂಧಿಯೇತರ ಕಾರ್ಯಾಧ್ಯಕ್ಷ/ಉಪಾಧ್ಯಕ್ಷರ ಅವಶ್ಯಕತೆಯಿದೆ," ಎಂದು ಈ ಕಾಂಗ್ರೆಸ್ ಪಕ್ಷ ಪುನರುಜ್ಜೀವನ ಯೋಜನೆ ಹೇಳಿದೆ.

ಮಮತಾ ಗೆಲುವಿನ ಬಳಿಕ ಕಾಂಗ್ರೆಸ್ ಗೆಲುವಿಗೆ ಸಿದ್ಧತೆ
ಕಾಂಗ್ರೆಸ್ ತೆಗೆದುಕೊಳ್ಳಬೇಕಾದ ಐದು ಕಾರ್ಯತಂತ್ರದ ನಿರ್ಧಾರಗಳಲ್ಲಿ ಇದು 1 ನೇ ಹಂತವಾಗಿದೆ ಎಂದು ಯೋಜನೆ ಹೇಳಿದೆ. ಇತರವುಗಳು, ಮೈತ್ರಿಗಳನ್ನು ವಿಂಗಡಿಸುವುದು, ಪಕ್ಷದ ಸಂಸ್ಥಾಪಕ ತತ್ವಗಳನ್ನು ಮತ್ತೆ ಸ್ಥಾಪನೆ ಮಾಡುವುದು, ತಳಮಟ್ಟದ ನಾಯಕರ ಸಂಖ್ಯೆ ಹೆಚ್ಚಳ ಮಾಡುವುದು ಹಾಗೂ ಮಾಧ್ಯಮ ಮತ್ತು ಡಿಜಿಟಲ್ ಪ್ರಚಾರವನ್ನು ಬೆಂಬಲಿಸುವ ವ್ಯವಸ್ಥೆಯನ್ನು ರಚಿಸುವುದು ಆಗಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ಭಾರಿ ಜಯ ಸಾಧಿಸಿದ ನಂತರ, ಗಾಂಧಿಗಳು ಮತ್ತು ತಂತ್ರಜ್ಞರ ನಡುವಿನ ಮಾತುಕತೆ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ ಕಾಂಗ್ರೆಸ್, ಪ್ರಶಾಂತ್ ಕಿಶೋರ್ ಮಾತುಕತೆ ವಿಫಲವಾದ ನಂತ ಮುಂದಿನ ದಾರಿಯಲ್ಲಿ ಭಿನ್ನಾಭಿಪ್ರಾಯಗಳ ಬಗ್ಗೆ ವರದಿಯಾಗಿದೆ. ಆದರೆ ಫೆಬ್ರವರಿ-ಮಾರ್ಚ್ನಲ್ಲಿ ಐದು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ನ ಚುನಾವಣಾ ಸೋಲಿನ ನಂತರ ಮಾತುಕತೆ ಪುನರಾರಂಭವಾಯಿತು. ಈಗ ಭಿನ್ನಾಭಿಪ್ರಾಯವನ್ನು ಸರಿಪಡಿಸಿ ಕಾಂಗ್ರೆಸ್ಗೆ ಪ್ರಶಾಂತ್ ಕಿಶೋರ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ 2.0 ಗಾಗಿ ಪ್ರಶಾಂತ್ ಯೋಜನೆಯ ಮುಖ್ಯಾಂಶ
* ಜನಸಾಮಾನ್ಯರಿಗೆ ಹೊಸ ಕಾಂಗ್ರೆಸ್ ಸೃಷ್ಟಿ
* ಕಾಂಗ್ರೆಸ್ ಮೌಲ್ಯಗಳು ಮತ್ತು ಮೂಲ ತತ್ವಗಳನ್ನು ರಕ್ಷಿಸುವುದು
* ಅರ್ಹತೆ, ಪ್ರಮುಖ ವ್ಯಕ್ತಿಯ ಜೊತೆ ನಿಷ್ಠುರ ನಡವಳಿಕೆಯನ್ನು ನಾಶ ಮಾಡುವುದು
* ಮೈತ್ರಿ ಗೊಂದಲವನ್ನು ಸರಿಪಡಿಸುವುದು
* ಸ್ವಜನಪಕ್ಷಪಾತವನ್ನು ಎದುರಿಸಲು 'ಒಂದು ಕುಟುಂಬ, ಒಂದು ಟಿಕೆಟ್'
* ಎಲ್ಲಾ ಹಂತಗಳಲ್ಲಿ ಚುನಾವಣೆಗಳ ಮೂಲಕ ಸಾಂಸ್ಥಿಕ ಸಂಸ್ಥೆಗಳನ್ನು ಪುನರ್ರಚಿಸುವುದು
* ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೇರಿದಂತೆ ಎಲ್ಲಾ ಹುದ್ದೆಗಳಿಗೆ ನಿಗದಿತ ಅವಧಿ
* 15,000 ತಳಮಟ್ಟದ ನಾಯಕರನ್ನು ಗುರುತಿಸಿ, ದೇಶದಲ್ಲಿ 1 ಕೋಟಿ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು
* 200ಕ್ಕೂ ಅಧಿಕ ಸಮಾನ ಮನಸ್ಕ ಪ್ರಭಾವಿಗಳು, ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರ ಒಕ್ಕೂಟ ರಚನೆ












Click it and Unblock the Notifications