ನೋಟು ನಿಷೇಧ: ಹುಲಿ ಮೇಲೆ ಮೋದಿ ಸವಾರಿ ಭೇಷ್ ಎಂದ ನಿತೀಶ್
ಐನೂರು, ಸಾವಿರ ರೂಪಾಯಿ ನೋಟು ನಿಷೇಧದ ವಿಚಾರದಲ್ಲಿ ಸಂಸತ್ತಿನ ಹೊರಗೆ, ಒಳಗೆ ಒಗ್ಗಟ್ಟಾಗಿ ಸರಕಾರದ ವಿರುದ್ದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಪ್ರಧಾನಿ ಪರವಾಗಿ ನಿಂತಿದ್ದಾರೆ.
ಪಾಟ್ನಾ, ನ 21: ಐನೂರು, ಸಾವಿರ ರೂಪಾಯಿ ನೋಟು ನಿಷೇಧದ ವಿಚಾರದಲ್ಲಿ ಸಂಸತ್ತಿನ ಹೊರಗೆ, ಒಳಗೆ ಒಗ್ಗಟ್ಟಾಗಿ ಸರಕಾರದ ವಿರುದ್ದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಪ್ರಧಾನಿ ಪರವಾಗಿ ನಿಂತಿದ್ದಾರೆ.
ಮೋದಿಯವರ ನೋಟು ನಿಷೇಧದ ತೀರ್ಮಾನವನ್ನು 'ಹುಲಿಯ ಮೇಲೆ ನಡೆಯುವ ಕಠಿಣ ನಿರ್ಧಾರ'ಎಂದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಧಾನಿಯವರ ಈ ನಿರ್ಧಾರದಿಂದ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. (ನೋಟು ನಿಷೇಧದಿಂದ ಇಳಿಮುಖವಾದ ಅಪರಾಧಗಳು)
ನವೆಂಬರ್ ಎಂಟರಂದು ಮೋದಿಯವರು ಘೋಷಿಸಿದ ಈ ಕ್ರಾಂತಿಕಾರಿ ನಿರ್ಧಾರದ ಜೊತೆಗೆ ಜನರು ಭಾವನಾತ್ಮಕವಾಗಿ ಬೆರೆತಿದ್ದಾರೆ. ಜನರ ಭಾವನೆಗಳ ವಿರುದ್ದ ಯಾವುದೇ ರಾಜಕೀಯ ಪಕ್ಷಗಳು ಹೋಗಬಾರದು ಎಂದು ನಿತೀಶ್, ಎಲ್ಲಾ ಪಕ್ಷದವರಿಗೂ ಕಿವಿಮಾತನ್ನು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೋದಿಯವರ ವಿರೋಧಿಯೆಂದೇ ಗುರುತಿಸಿಕೊಂಡಿರುವ ನಿತೀಶ್, ನೋಟು ನಿಷೇಧದ ವಿಚಾರದಲ್ಲಿ ನರೇಂದ್ರ ಮೋದಿ ಬೆನ್ನಿಗೆ ನಿಂತಿರುವುದು ಇದು ಎರಡನೇ ಬಾರಿ.
ಪ್ರಧಾನಿ ತೆಗೆದುಕೊಂಡಿರುವ ಈ ನಿರ್ಧಾರ ಅತ್ಯಂತ ಕಠಿಣವಾದದ್ದು, ಇದನ್ನು ನಾನು ಹುಲಿ ಮೇಲಿನ ನಡಿಗೆ ಎಂದು ಹೇಳಲು ಬಯಸುತ್ತೇನೆ. ಇದೇ ರೀತಿ ಪ್ರಧಾನಿ ಬೇನಾಮಿ ಆಸ್ತಿ ವಿಚಾರದಲ್ಲೂ ಡೈನಾಮಿಕ್ ನಿರ್ಧಾರ ತೆಗೆದುಕೊಳ್ಳಲಿ ಎಂದು ನಿತೀಶ್ ಹೇಳಿದ್ದಾರೆ.
ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನಿತೀಶ್, ಪ್ರಧಾನಿಯವರ ಜೊತೆಗೆ ನನಗೆ ಭಿನ್ನಾಭಿಪ್ರಾಯಗಳಿವೆ. ಆದರೆ, ನೋಟು ನಿಷೇಧದ ವಿಚಾರದಲ್ಲಿ ಮೋದಿಗೆ ಬೆಂಬಲ ಸೂಚಿಸುತ್ತೇನೆಂದು ಸಭೆಯಲ್ಲಿ ಹೇಳಿದ್ದಾರೆ.