ದೇಶದ ಪ್ರಮುಖ ನಗರಗಳಲ್ಲಿ ಪಾಕಿಸ್ತಾನದಿಂದ ಉಗ್ರರ ದಾಳಿ ಸಾಧ್ಯತೆ!
ಬೆಂಗಳೂರು, ಸೆಪ್ಟೆಂಬರ್ 29: ಅಂತರ ರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿ ಆಗುತ್ತಿರುವ ಪಾಕಿಸ್ತಾನ, ಆ ಸಿಟ್ಟಿನಲ್ಲಿ ಭಾರತದ ನಗರಗಳ ಮೇಲೆ ದಾಳಿ ನಡೆಸಲು ಪ್ರೋತ್ಸಾಹ ನೀಡಬಹುದು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಗಡಿ ಭಾಗದಲ್ಲಿ ರಕ್ಷಣಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಹ ಪಾಕಿಸ್ತಾನ ಕುಮ್ಮಕ್ಕು ನೀಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಮುಖ ನಗರಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ಯೋಜಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಪಾಕಿಸ್ತಾನಕ್ಕೆ 'ಆಪ್ತ ರಾಷ್ಟ್ರ' ಸ್ಥಾನ, ಕಾವೇರಿ ತೀರ್ಮಾನ: ದೆಹಲಿ ಸಭೆ ಇಂದು]
ಐಎಸ್ ಐಎಸ್ ಹಾಗೂ ಜಮಾತ್ ಉಲ್ ಮುಜಾಹಿದೀನ್ ಉಗ್ರ ಸಂಘಟನೆಯಿಂದ 'ಚಾಕು ದಾಳಿ' ನಡೆಯಬಹುದು ಎಂದು ಇತ್ತೀಚೆಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಗ್ರರ ದಾಳಿಯಿಂದ ಎಷ್ಟು ದೊಡ್ಡ ಅನಾಹುತ ಮಾಡಲು ಸಾಧ್ಯವಿದೆಯೋ ಅದನ್ನು ಪಾಕಿಸ್ತಾನ ಪ್ರಯತ್ನಿಸುತ್ತದೆ. ಸೇನಾ ಕ್ಯಾಂಪ್ ಗಳು ಹಾಗೂ ಚೆಕ್ ಪೋಸ್ಟ್ ಗಳು ಉಗ್ರರ ದಾಳಿಯ ಗುರಿಗಳಲ್ಲಿವೆ. ಇನ್ನು ನಗರಗಳಲ್ಲಿ ಜನನಿಬಿಡ ಪ್ರದೇಶಗಳು ಹಾಗೂ ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.[19ನೇ ಸಾರ್ಕ್ ಸಮ್ಮೇಳನ ರದ್ದು, ಪಾಕ್ ಗೆ ಮುಖಭಂಗ]
ಇನ್ನು ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಸ್ಲೀಪರ್ ಸೆಲ್ ಗಳ ಬಗ್ಗೆಯೂ ಕಣ್ಣಿಡುವಂತೆ ಸೂಚನೆ ನೀಡಿದ್ದು, ಗಲಭೆ ಸೃಷ್ಟಿಸುವ ಅಂಶಗಳನ್ನು ಹರಿಬಿಡುವ ಸಾಧ್ಯತೆಗಳೂ ಇವೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸಿಟ್ಟಾಗಿರುವ ಪಾಕಿಸ್ತಾನ ದಾಳಿ ನಡೆಸುವುದಕ್ಕೆ ತಹತಹಿಸುತ್ತಿದೆ. ಅದ್ದರಿಂದ ರಕ್ಷಣಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.