ಗಾಂಧಿ ಜಯಂತಿ ದಿನ ದೇಶಕ್ಕೆ ಸಂದ ಬಹುದೊಡ್ಡ ಕಾಣಿಕೆ!
ನವದೆಹಲಿ, ಅ.3: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ನಿನ್ನೆ 143ನೇ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಅಪರಾಧಿ ಜನಪ್ರತಿನಿಧಿಗಳಿಗೆ ರಕ್ಷಣೆ ಒದಗಿಸುವ ಜನಪ್ರತಿನಿಧಿ ಕಾಯಿದೆ ತಿದ್ದುಪಡಿ ವಿಧೇಯಕ ಸಂಬಂಧಿ ಸುಗ್ರೀವಾಜ್ಞೆಯನ್ನು ವಾಪಸ್ ತೆಗೆದುಕೊಳ್ಳುವ ಮೂಲಕ ಗಾಂಧಿ ಜಯಂತಿ ದಿನ ದೇಶಕ್ಕೆ ಬಹುದೊಡ್ಡ ಕಾಣಿಕೆ ಸಂದಾಯವಾಗಿದೆ! ಇದರಿಂದ ನಮ್ಮ ದೇಶಕ್ಕೆ ಇನ್ನೂ ಭವ್ಯ ಭವಿಷ್ಯವಿದೆ ಎಂಬ ಆಸೆ ಚಿಗುರಿದೆ.

ಈ ಮಧ್ಯೆ, ಮೊನ್ನೆಯಷ್ಟೇ 4 ವರ್ಷ ಜೈಲು ಶಿಕ್ಷೆಗೆ ಗುರಿಯಾದ ರಾಜ್ಯಸಭೆ ಸದಸ್ಯ ರಶೀದ್ ಮಸೂದ್ ಅವರ ಸದಸ್ಯತ್ವ ರದ್ದುಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದನ್ವಯ ರಶೀದ್ ಮಸೂದ್ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಸೂಚಿಸಿ ರಾಜ್ಯಸಭೆ ಸಭಾಪತಿಗೆ ಪತ್ರ ಬರೆಯಲು ಕೇಂದ್ರ ಸಂಪುಟ ತೀರ್ಮಾನಿಸಿದೆ.
ಇದರೊಂದಿಗೆ ಜನಪ್ರತಿನಿಧಿ ಕಾಯಿದೆ ಸಂಬಂಧ ಜುಲೈ 10ರಿಂದಲೇ ಜಾರಿಗೆ ಬರುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಿಂದ ಸಂಸದ ಸ್ಥಾನವನ್ನು ಕಳೆದುಕೊಂಡ ಮೊಟ್ಟಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ರಶೀದ್ ಮಸೂದ್ ಭಾಜನರಾಗಿದ್ದಾರೆ. ಆದರೆ ಇದು ಇನ್ನೂ ಆರಂಭವಷ್ಟೇ. ಸರದಿಯಲ್ಲಿ ಇನ್ನೂ ಅನೇಕ ಜನಪ್ರತಿನಿಧಿಗಳು ಮನೆಗೆ ಮರಳುವ ಕಾಲ ಸಮೀಪಿಸಿದೆ. ಈ ಸಾಲಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಇಂದು ಸೇರ್ಪಡೆಯಾಗುವುದು ಶತಃಸಿದ್ಧವಾಗಿದೆ.
Judicail activisim: ಗಮನಿಸಿ. ಹಾಲಿ ಲೋಕಸಭೆಯಲ್ಲಿಯೇ 70ಕ್ಕೂ ಹೆಚ್ಚು ಕಳಂಕಿತರು ವಿಜೃಂಭಿಸುತ್ತಿದ್ದಾರೆ. ಇವರನ್ನೆಲ್ಲಾ ಪಟ್ಟಿ ಮಾಡಿ ಲೋಕಸಭೆ/ ರಾಜ್ಯಸಭೆಯಿಂದ ಈ ಅವಧಿಯಲ್ಲೇ ಹೊರಗಟ್ಟುವ ಕಾರ್ಯ ನಡೆಯಲಿದೆ. ಅಷ್ಟರಮಟ್ಟಿಗೆ ಸುಪ್ರೀಂ ಆದೇಶ ಫಲಪ್ರದವಾಗಲಿದೆ.
ಇನ್ನು, ಹಾಲಿ ಲೋಕಸಭೆ ಕಾಲಾವಧಿ ಇನ್ನು ಆರೇಳು ತಿಂಗಳು ಇರುವುದರಿಂದ ಹೆಚ್ಚೇನು ನಷ್ಟವಾಗದು ಎಂದು ಈ ಕಳಂಕಿತ ಜನಪ್ರತಿನಿಧಿಗಳು ಅಲ್ಪ ಸಂತೋಷ ಪಡುವಂತಿಲ್ಲ. ಏಕೆಂದರೆ ಈ ಕಳಂಕಿತ ಜನಪ್ರತಿನಿಧಿಗಳು ಯಾರೂ ಮುಂದೆ ನಡೆಯುವ ಚುನಾವಣೆಗಳಲ್ಲೂ ಸ್ಪರ್ಧಿಸುವಂತಿಲ್ಲ ಎಂಬ ಪೂರಕ ಆದೇಶ ಎದುರಿಗೇ ಇದ್ದು, ಮುಂದೆ ಸಂಸತ್ತು/ ಆಯಾ ರಾಜ್ಯಗಳ ವಿಧಾನಸಭೆಗಳ ಮೇಲೆ ಕಳಂಕಿತರ ನೆರಳು ಸಹ ಬೀಳುವುದಿಲ್ಲ ಎಂದು ಆಶಿಸಬಹುದಾಗಿದೆ.
ಇದೇ ವೇಳೆ, Representation of People Actಗೆ ತಿದ್ದುಪಡಿ ತರುವ ವಿಫಲ ಯತ್ನವು ರಾಹುಲ್ ಗಾಂಧಿಗೆ ಸಂದ ಜಯವೋ ಅಥವಾ ಬಿಜೆಪಿಯ ಯಶಸ್ಸೋ ಎಂಬುದು ಪ್ರಶ್ನಾರ್ಹ/ ಚರ್ಚಾರ್ಹ ವಿಷಯವೇ ಆದರೂ ಸದ್ಯಕ್ಕೆ ಗೆದ್ದಿರುವುದಂತೂ ದೇಶದ ಜನಕೋಟಿ.
ತಿದ್ದುಪಡಿಯ ಕುಟಿಲ ಧ್ಯೇಯೋದ್ದೇಶ:
ಇಷ್ಟಕ್ಕೂ ತಿದ್ದುಪಡಿ ಮೂಲಕ Representation of People Act clause 4 of section 8 ಅನ್ನು ಮತ್ತೆ ಸೇರ್ಪಡೆ ಮಾಡುವ ವಿಚಾರ ಸುಗ್ರೀವಾಜ್ಞೆಯಲ್ಲಿ ಅಡಗಿತ್ತು. ಅಂದರೆ ಕೆಳ ನ್ಯಾಯಾಲಯದಲ್ಲಿ ದೋಷಿ ಎಂದು ಶಿಕ್ಷೆಗೆ ಗುರಿಯಾಗುವ ಜನಪ್ರತಿನಿಧಿಯ ವಿರುದ್ಧದ ಪ್ರಕರಣ ಮುಂದೆ ಉನ್ನತ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಆ ಕಳಂಕಿತ ವ್ಯಕ್ತಿಯ ಸಂಸದ/ ಶಾಸಕ ಸ್ಥಾನ ಅಭಾದಿತವಾಗಿ ಮುಂದುವರಿಯಬೇಕು ಎಂಬುದು ತಿದ್ದುಪಡಿಯ ಕುಟಿಲ ಧ್ಯೇಯೋದ್ದೇಶವಾಗಿತ್ತು. ಆದರೆ Representation of People Act ಸದುದ್ದೇಶವೇ ಬೇರೆಯಾಗಿತ್ತು.
ಮುಂದಿದೆ ಮಾರಿಹಬ್ಬ: ಇಷ್ಟಕ್ಕೂ Public Interest Foundation (PIF) ಎಂಬ NGO ಸಂಸ್ಥೆ ಅಪರಾಧಿ ಜನಪ್ರತಿನಿಧಿಗಳನ್ನು ಬಲಿಹಾಕುವ ಉದ್ದೇಶದಿಂದ ಸುಪ್ರೀಂಕೋರ್ಟ್ ಮೊರೆಹೋಗಿತ್ತು. ಈ ಸಂಬಂಧ ಜುಲೈ 10ರಂದು ಸುಪ್ರೀಂಕೋರ್ಟ್ ನೀಡಿರುವುದು ಮಧ್ಯಂತರ ಆದೇಶವಷ್ಟೇ. ಅಕ್ಟೋಬರ್ 9ರಂದು ಮುಂದಿನ ವಿಚಾರಣೆ ನಡೆಯಲಿದೆ.
ಅಂದು ಆರೋಪಪಟ್ಟಿ ಎದುರಿಸುತ್ತಿರುವವರು (ಅಂದರೆ ತಕ್ಷಣಕ್ಕೆ ಉದಾಹರಣೆಗಾಗಿ ಮಾತ್ರ ಹೇಳುವುದಾದರೆ ಜನಾರ್ದನ ರೆಡ್ಡಿಯಂತಹವರು - ಇಂತಹವರು ಸಾವಿರಾರು ಮಂದಿಯಿದ್ದಾರೆ, ಅದು ಬೇರೆ ವಿಷಯ) ಚುನಾವಣೆಗಳಲ್ಲಿಯೂ ಸ್ಪರ್ಧಿಸುವಂತಿಲ್ಲ ಎನ್ನುವುದರ ಬಗ್ಗೆಯೂ PIF ನಿರ್ದೇಶಕ ನೃಪೇಂದ್ರ ಮಿಶ್ರಾ ಅವರು ಸುಪ್ರೀಂಕೋರ್ಟ್ ಗಮನ ಸೆಳೆದಿದ್ದು, ಬಹುಶಃ ಕೋರ್ಟ್ ಇದಕ್ಕೂ ಅಸ್ತು ಅನ್ನುವ ಸಾಧ್ಯತೆ ಹೆಚ್ಚಾಗಿದೆ. ಅಂತಹ ಆದೇಶವೇನಾದರೂ ಹೊರಬಿದ್ದರೆ ನಿಜಕ್ಕೂ ದೇಶದ ಜನಸಾಮಾನ್ಯ ಬದುಕು ಬಂಗಾರವಾದೀತು.
PIF ಸಂಸ್ಥೆಯ ನಿರ್ದೇಶಕ ನೃಪೇಂದ್ರ ಮಿಶ್ರಾ ಅವರು Telecom Regulatory Authority of India (TRAI) ಮಾಜಿ ಅಧ್ಯಕ್ಷರು. ಇವರಿಗೆ ಎಡಬಲವಾಗಿ ಬೆಂಬಲಕ್ಕೆ ನಿಂಈತಿರುವವರು ನರೇಶ್ ಚಂದ್ರ - ಮಾಜಿ ಸಂಪುಟ ಕಾರ್ಯದರ್ಶಿ ಮತ್ತು ಬಿಮಲ್ ಜಲನ್ - ಆರ್ ಬಿಐ ಮಾಜಿ ಗವರ್ನರ್.












Click it and Unblock the Notifications