ರೈಲ್ವೆ ಸಚಿವರ ವಿರುದ್ಧ ರೊಚ್ಚಿಗೆದ್ದ ವಿಪಕ್ಷಗಳು: ಸಚಿವರ ರಾಜೀನಾಮೆಗೆ ಆಗ್ರಹ
ಒಡಿಶಾ: ಬಾಲಸೋರ್ನಲ್ಲಿ ನಡೆದ ಭೀಕರ ರೈಲು ಅಪಘಾತ ಹಿನ್ನೆಲೆ ವಿಪಕ್ಷಗಳು ಆಕ್ರೋಶ ಹೊರಹಾಕುತ್ತಿವೆ. ಇದರ ಜೊತೆಗೆ ರೈಲ್ವೆ ಸಚಿವರ ರಾಜೀನಾಮೆಗೂ ಆಗ್ರಹ ಕೇಳಿಬಂದಿದೆ. ಅದ್ರಲ್ಲೂ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹಿಂದಿನ ದುರಂತಗಳನ್ನ ಉದಾಹರಣೆಯಾಗಿ ನೀಡಿದ್ದಾರೆ. ಈ ಮೂಲಕ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ನಿನ್ನೆ ರಾತ್ರಿ ಒಡಿಶಾದ ಬಾಲಸೋರ್ನಲ್ಲಿ 3 ರೈಲು ಡಿಕ್ಕಿಯಿಂದ ಸಂಭವಿಸಿದ ರಣಭೀಕರ ಅಪಘಾತಕ್ಕೆ ಈವರೆಗೂ 261 ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಗಂಟೆಗೂ ಹೆಚ್ಚು ಕಾಲ ನಡೆದ ರಕ್ಷಣೆ ಕಾರ್ಯಾಚರಣೆ ಈಗ ಮುಗಿದಿದೆ. ಈ ಮೂಲಕ ಸಾವಿನ ಸಂಖ್ಯೆ ಅಧಿಕೃತವಾಗಿ 261 ಅಂತಾ ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ವಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ. ಅದರಲ್ಲೂ ಶರದ್ ಪವಾರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ರೈಲ್ವೆ ಸಚಿವರ ವಿರುದ್ಧ ವಿಪಕ್ಷಗಳ ಆಕ್ರೋಶ
ಭೀಕರ ರೈಲು ದುರಂತದ ಬಗ್ಗೆ ಮಾತನಾಡಿರುವ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್, ಹಿಂದೆ ರೈಲು ದುರಂತ ನಡೆದಾಗ ಅದರ ಸಂಪೂರ್ಣ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡುತ್ತಿದ್ದರು. ಆದ್ರೆ ಈಗ ಆ ಬಗ್ಗೆ ಯಾರೂ ಮಾತನಾಡಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದೊಂದು ದುರದೃಷ್ಟಕರ ಘಟನೆ ದೇಶದಲ್ಲಿ ಇಂತಹ ದೊಡ್ಡಮಟ್ಟದ ರೈಲು ಅಪಘಾತ ಹಿಂದೆಂದೂ ನಡೆದಿರಲಿಲ್ಲ. ಸರ್ಕಾರ ರೈಲು ದುರಂತದ ಬಗ್ಗೆ ತಕ್ಷಣ ತನಿಖೆ ನಡೆಸಬೇಕಿದೆ. ಅಪಘಾತಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಶರದ್ ಪವಾರ್ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಕುಟುಕಿದ ಪವಾರ್?
ಹಾಗೇ ತಮ್ಮ ಮಾತಿನ ಉದ್ದಕ್ಕೂ ಪರೋಕ್ಷವಾಗಿ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ವಿರುದ್ಧ ಪವಾರ್ ಗರಂ ಆದ್ರು. ಹಿಂದೆಲ್ಲ ಇಂತಹ ಅಪಘಾತ ನಡೆದಾಗ ರೈಲ್ವೆ ಮಂತ್ರಿಗಳು ರಾಜೀನಾಮೆ ನೀಡುತ್ತಿದ್ದರು. ಆದರೆ ಈಗ ಯಾರೂ ಅದರ ಬಗ್ಗೆ ಮಾತನಾಡಲು ತಯಾರಿಲ್ಲ. ವಂದೇ ಭಾರತ್ ರೈಲು ಸೇರಿ ವೇಗದ ರೈಲುಗಳನ್ನು ದೇಶದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಈ ಹೊತ್ತಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಕೇಂದ್ರ ಮತ್ತು ರೈಲ್ವೆ ಸಚಿವಾಲಯ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಪವಾರ್ ಆಗ್ರಹಿಸಿದ್ದಾರೆ.
ವಿರೋಧ ಪಕ್ಷಗಳಿಂದ ಟ್ವೀಟ್ ವಾರ್!
ಹಾಗೇ ಇನ್ನೊಂದು ಕಡೆ ವಿರೋಧ ಪಕ್ಷಗಳ ನಾಯಕರು ಟ್ವೀಟ್ ಮೂಲಕ ರೈಲ್ವೆ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಹಾಗೇ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಒಡಿಶಾ ಸಂಸದ ಸಪ್ತಗಿರಿ ಉಲಾಖ ಸೇರಿದಂತೆ ಎಐಸಿಸಿ ಅಧ್ಯಕ್ಷರ ಕಚೆರಿ ಸಂಯೋಜಕ ಗುರುದೀಪ್ ಸಪ್ಪಾಲ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವರು ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು. ಹಾಗೂ ಅಲ್ಲಿ ಇದ್ದ ರಕ್ಷಣಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಮೃತರ ಕುಟುಂಬಕ್ಕೆ ಪಿಎಂ ಸಾಂತ್ವನ ಹೇಳಿದರು. ಜೊತೆಗೆ ಸ್ಥಳೀಯ ಆಸ್ಪತ್ರೆಗಳಿಗೂ ಭೇಟಿ ನೀಡಿ, ಗಾಯಾಳುಗಳ ಜತೆ ಮಾತನಾಡಿ ಧೈರ್ಯ ತುಂಬಿದರು. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಇದೀಗ ರಕ್ಷಣಾ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಅಧಿಕೃತವಾಗಿ ಸಾವಿನ ಸಂಖ್ಯೆ 261 ಅಂತಾ ಹೇಳಲಾಗುತ್ತಿದೆ. ಆದರೆ ಗಾಯಗೊಂಡು ನರಳಾಡುತ್ತಿರುವ ಹಲವು ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಇಲ್ಲ.
ತುರ್ತು ಸಂಪರ್ಕ ಮಾಡಲು ಸಹಾಯವಾಣಿ
ಇನ್ನು ಸಹಾಯವಾಣಿಗೆ ಈ ಸಂಖ್ಯೆಗಳನ್ನ ಸಂಪರ್ಕ ಮಾಡಬಹುದಾಗಿದೆ. ಬಂಗಾರಪೇಟೆ (Bangarpet): 08153 255253, ಬೆಂಗಳೂರು (Bangalor): 080-22356409, ಕುಪ್ಪಂ (Kuppam): 8431403419, ಕೆಜೆಎಮ್ (KJM):+91 88612 03980, ಭದ್ರಕ್ (Bhadrak): 8455889900, ಕಟಕ್ (Cuttack): 8455889917, ಭುವನೇಶ್ವರ (Bhubaneswar): 8455889922, ಖುರ್ದಾ ರಸ್ತೆ (Khurda Road): 6370108046, ಬ್ರಹ್ಮಪುರ (Brahmapur): 89173887241, ಪಲಾಸ (Palasa): 8978881006 ಹಾಗೂ ಹೌರಾ ಸಹಾಯವಾಣಿ ಸಂಖ್ಯೆ (Howrah Helpline Number): 033-26382217 ಗೆ ಸಂಪರ್ಕ ಮಾಡಬಹುದು.












Click it and Unblock the Notifications