ರಕ್ಷಣಾ ಕಾರ್ಯ ಮುಕ್ತಾಯ, ಮೃತರ ಸಂಖ್ಯೆ 261ಕ್ಕೆ ಏರಿಕೆ
ಒಡಿಶಾ: ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಕ್ತಾಯವಾಗಿದೆ. ಈ ಮೂಲಕ ಮೃತರ ಸಂಖ್ಯೆಯು 261ಕ್ಕೆ ಏರಿಕೆಯಾಗಿದೆ. 20 ಗಂಟೆಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯದಲ್ಲಿ 900ಕ್ಕೂ ಹೆಚ್ಚು ಜನರ ಜೀವ ಉಳಿಸಲಾಗಿದೆ. ಇನ್ನೂ ನೂರಾರು ಮಂದಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ನಿನ್ನೆ ಆರಂಭವಾಗಿದ್ದ ರಕ್ಷಣಾ ಕಾರ್ಯಕ್ಕೆ ಸಾವಿರಾರು ರಕ್ಷಣಾ ಸಿಬ್ಬಂದಿ ಸಾಥ್ ನೀಡಿದ್ರು. ಹಾಗೇ 200ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಸೇರಿದಂತೆ 45 ಸಂಚಾರಿ ಆರೋಗ್ಯ ತಂಡಗಳು ರಕ್ಷಣಾ ಕಾರ್ಯ ನಡೆಸಿದ್ದವು. ಅಂತೂ ಹಲವು ಗಂಟೆಗಳ ಸತತ ಪ್ರಯತ್ನದಿಂದ (Odisha Train Accident) ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಕ್ತಾಯಗೊಂಡಿದೆ. ರೈಲು ಹಳಿ ಮೇಲೆ ಬಿದ್ದ ಬೋಗಿಗಳ ತೆರವು ಕಾರ್ಯ ಕೂಡ ಪೂರ್ಣವಾಗಿದ್ದು, ನಿನ್ನೆ ಸಂಜೆಯಿಂದ ಅಡ್ಡಿಯಾಗಿದ್ದ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಒಟ್ಟು 49 ರೈಲುಗಳು ರದ್ದಾಗಿದ್ದವು
ಬೆಂಗಳೂರು & ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಸೇರಿ ಕೋರಮಂಡಲ್ ಎಕ್ಸ್ಪ್ರೆಸ್ ಹಾಗೂ ಗೂಡ್ಸ್ ರೈಲು ಮಧ್ಯೆ ಒಡಿಶಾದ ಬಾಲಸೋರ್ನಲ್ಲಿ ನಿನ್ನೆ ರಾತ್ರಿ ಸಂಭವಿಸಿರುವ ಅಪಘಾತದ ನಂತರ ಈ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ಅಡಚಣೆ ಎದುರಾಗಿತ್ತು. ಹೀಗಾಗಿ 49 ರೈಲುಗಳು ರದ್ದಾಗಿದ್ದು, 38 ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು. ಇದು ಪ್ರಯಾಣಿಕರಿಗೆ ಮತ್ತೊಂದು ಸಂಕಷ್ಟ ತಂದೊಡಿತ್ತು. ಇದೀಗ ರಕ್ಷಣಾ ಕಾರ್ಯ ನಡೆಸಿ, ರೈಲು ಹಳಿ ಕ್ಲಿಯರ್ ಮಾಡಲಾಗಿದೆ. ಈ ಮೂಲಕ ನೂರಾರು ರೈಲುಗಳ ಸಂಚಾರಕ್ಕೆ ಈಗ ವ್ಯವಸ್ಥೆ ಮಾಡಲಾಗುತ್ತಿದೆ.
ಜೀವ ಉಳಿಸಲು ಸಂಚಾರ ಬಂದ್
ಹೌದು, ಒಡಿಶಾ ರೈಲು ದುರಂತದಲ್ಲಿ 261ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗ್ತಿದೆ. ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರ ಬಂದ್ ಮಾಡಲಾಗಿತ್ತು. ಇನ್ನು ಅಗತ್ಯ ಎನಿಸಿದ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಿ ರೈಲುಗಳ ಸಂಚಾರಕ್ಕೆ ಸಹಾಯ ಮಾಡಲಾಗಿತ್ತು. ಸತತ ಪ್ರಯತ್ನ ಫಲ ಎಂಬಂತೆ ಹಲವು ಪ್ರಯಾಣಿಕರ ಜೀವ ಉಳಿಸಲಾಗಿತ್ತು. ಹಾಗೂ ರೈಲು ಬೋಗಿಗಳ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು. ಹಾಗೂ ಅಲ್ಲಿ ಇದ್ದ ರಕ್ಷಣಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಮೃತರ ಕುಟುಂಬಕ್ಕೆ ಪಿಎಂ ಸಾಂತ್ವನ ಹೇಳಿದರು. ಜೊತೆಗೆ ಸ್ಥಳೀಯ ಆಸ್ಪತ್ರೆಗಳಿಗೂ ಭೇಟಿ ನೀಡಿ, ಗಾಯಾಳುಗಳ ಜತೆ ಮಾತನಾಡಿ ಧೈರ್ಯ ತುಂಬಿದರು. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಇದೀಗ ರಕ್ಷಣಾ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಅಧಿಕೃತವಾಗಿ ಸಾವಿನ ಸಂಖ್ಯೆ 261 ಅಂತಾ ಹೇಳಲಾಗುತ್ತಿದೆ. ಆದರೆ ಗಾಯಗೊಂಡು ನರಳಾಡುತ್ತಿರುವ ಹಲವು ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಇಲ್ಲ.
ದೇಹ ನೋಡಿ ಸಂಬಂಧಿಕರ ಕಣ್ಣೀರು
ಈಗಾಗಲೇ 260ಕ್ಕೂ ಹೆಚ್ಚು ಜನ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ಕೋರಮಂಡಲ್ ಎಕ್ಸ್ಪ್ರೆಸ್ ಅಪಘಾತದಲ್ಲಿ ಮೃತಪಟ್ಟಿರುವವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ 2 ಲಕ್ಷ ರೂ ಸೇರಿ ಸಣ್ಣಪುಟ್ಟ ಗಾಯದೊಂದಿಗೆ ನರಳುತ್ತಿರುವ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮೃತರ ಸಂಬಂಧಿಕರು ತಮ್ಮವರ ಮೃತ ದೇಹಗಳನ್ನ ನೋಡಿ ಕಣ್ಣಿರು ಹಾಕುತ್ತಿರುವ ದೃಶ್ಯ ಮನಸ್ಸು ಹಿಂಡುವಂತಿದೆ.
ತುರ್ತು ಸಂಪರ್ಕ ಮಾಡಲು ಸಹಾಯವಾಣಿ
ಇನ್ನು ಸಹಾಯವಾಣಿಗೆ ಈ ಸಂಖ್ಯೆಗಳನ್ನ ಸಂಪರ್ಕ ಮಾಡಬಹುದಾಗಿದೆ. ಬಂಗಾರಪೇಟೆ (Bangarpet): 08153 255253, ಬೆಂಗಳೂರು (Bangalor): 080-22356409, ಕುಪ್ಪಂ (Kuppam): 8431403419, ಕೆಜೆಎಮ್ (KJM):+91 88612 03980, ಭದ್ರಕ್ (Bhadrak): 8455889900, ಕಟಕ್ (Cuttack): 8455889917, ಭುವನೇಶ್ವರ (Bhubaneswar): 8455889922, ಖುರ್ದಾ ರಸ್ತೆ (Khurda Road): 6370108046, ಬ್ರಹ್ಮಪುರ (Brahmapur): 89173887241, ಪಲಾಸ (Palasa): 8978881006 ಹಾಗೂ ಹೌರಾ ಸಹಾಯವಾಣಿ ಸಂಖ್ಯೆ (Howrah Helpline Number): 033-26382217 ಗೆ ಸಂಪರ್ಕ ಮಾಡಬಹುದು.












Click it and Unblock the Notifications