ಬದಲಾಗಿಲ್ಲ ಬಿಹಾರ ಎಂದ ಪ್ರಶಾಂತ್ ಕಿಶೋರ್ ಹೇಳಿಕೆ ಮನೋಜ್ ಝಾ ತಿರುಗೇಟು
ಪಾಟ್ನಾ, ಅಕ್ಟೋಬರ್ 03: ಬಿಹಾರದಲ್ಲಿ ಕಳೆದ 1990 ರಿಂದ ಏನೂ ಬದಲಾಗಿಲ್ಲ ಎಂಬ ಪ್ರಶಾಂತ್ ಕಿಶೋರ್ ಹೇಳಿಕೆಗೆ ಆರ್ಜೆಡಿ ನಾಯಕ ಮನೋಜ್ ಝಾ ತಿರುಗೇಟು ನೀಡಿದ್ದಾರೆ. ರಾಜಕೀಯ ತಂತ್ರಜ್ಞರು ಪ್ರಮುಖವಲ್ಲದ ವಿಷಯಗಳನ್ನು ಎತ್ತುತ್ತಿದ್ದಾರೆ, ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತಹ ವಿಷಯಗಳ ಬಗ್ಗೆ ಮೌನವಾಗಿದ್ದಾರೆ ಎಂದು ಕುಟುಕಿದ್ದಾರೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಪದೇ ಪದೇ ನಿರಾಕರಿಸುತ್ತಿರುವ ವಿಷಯವನ್ನು ಪ್ರಶಾಂತ್ ಕಿಶೋರ್ ಪ್ರಸ್ತಾಪಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಮುಖ್ಯವಲ್ಲದ ವಿಷಯದ ಬಗ್ಗೆ ಮಾತನಾಡುವ ಅವರು, ಸಮಸ್ಯೆಗಳ ಬಗ್ಗೆ ಮೌನವಾಗಿದ್ದಾರೆ," ಎಂದು ಮನೋಜ್ ಝಾ ಹೇಳಿದ್ದಾರೆ.
"ಪ್ರಶಾಂತ್ ಕಿಶೋರ್ ಅವರ ಲಿಪಿಯನ್ನು ಅರ್ಥಮಾಡಿಕೊಳ್ಳಲು ನಾನು ರಾಕೆಟ್ ವಿಜ್ಞಾನವನ್ನು ಅರ್ಥಮಾಡಿಕೊಳ್ಳಬೇಕಾಗಿಲ್ಲ" ಎಂದು ಆರ್ಜೆಡಿ ನಾಯಕ ಮನೋಜ್ ಝಾ ತಿರುಗೇಟು ಕೊಟ್ಟಿದ್ದಾರೆ.

ಬಿಹಾರದಲ್ಲಿ ಬದಲಾವಣೆಯಾಗಿಲ್ಲ ಎಂದಿದ್ದ ಪ್ರಶಾಂತ್ ಕಿಶೋರ್:
ಕಳೆದ ಭಾನುವಾರ ಪಶ್ಚಿಮ ಚಂಪಾರಣ್ ಜಿಲ್ಲೆಯಿಂದ ರಾಜ್ಯದ್ಯಂತ ಪಾದಯಾತ್ರೆ ಆರಂಭಿಸಿರುವ ಪ್ರಶಾಂತ್ ಕಿಶೋರ್, ಬಿಹಾರವನ್ನು ಆಳಿದ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು, 1990 ರಿಂದ ರಾಜ್ಯವು ಬದಲಾಗಿಲ್ಲ ಎಂದು ದೂರಿದ್ದರು. ಇಲ್ಲಿನ ಜನರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ ಎಂದಿದ್ದರು.
'ಜನ್ ಸೂರಜ್' ಅಭಿಯಾನದ ಭಾಗವಾಗಿ ಕಿಶೋರ್ ತನ್ನ ಪಾದಯಾತ್ರೆಯನ್ನು ಅಕ್ಟೋಬರ್ 2 ರಂದು ಭಿತಿಹರ್ವಾ ಗಾಂಧಿ ಆಶ್ರಮದಿಂದ ಪ್ರಾರಂಭಿಸಿದರು. ಅಲ್ಲಿಂದ ಗಾಂಧಿಯವರು 1917 ರಲ್ಲಿ ತಮ್ಮ ಮೊದಲ ಸತ್ಯಾಗ್ರಹ ಚಳುವಳಿಯನ್ನು ಪ್ರಾರಂಭಿಸಿದ್ದರು.
ಪ್ರಶಾಂತ್ ಕಿಶೋರ್ ಹೇಳಿಕೆಗೆ ಝಾ ಪ್ರತ್ಯುತ್ತರ:
ಪ್ರಶಾಂತ್ ಕಿಶೋರ್ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಮನೋಜ್ ಝಾ, "ಬಿಹಾರವನ್ನು ಅರ್ಥಮಾಡಿಕೊಳ್ಳಲು, ನೀವು ಅದನ್ನು ಮೊದಲು ವಿಶ್ಲೇಷಿಸಬೇಕು," ಎಂದಿದ್ದಾರೆ. "ಜಾರ್ಖಂಡ್ ಪ್ರತ್ಯೇಕವಾದಾಗ ಬಿಹಾರಕ್ಕೆ ಸಿಕ್ಕಿದ್ದೇನು? ಜಾರ್ಖಂಡ್ನಿಂದಾಗಿ ನಮ್ಮ ಉದ್ಯಮದ ಅಡಿಪಾಯ ಗಟ್ಟಿಯಾಗಿತ್ತು. ಜಾರ್ಖಂಡ್ ಪ್ರತ್ಯೇಕವಾದ ನಂತರ ಸರ್ಕಾರ ಬಿಹಾರಕ್ಕೆ ಏಕೆ ವಿಶೇಷ ಸ್ಥಾನಮಾನ ನೀಡಲಿಲ್ಲ? ವಿಶೇಷ ಪ್ಯಾಕೇಜ್ ಏಕೆ ನೀಡಲಿಲ್ಲ? ಘೋಷಣೆಯ ನಂತರವೂ ಪ್ರಧಾನಿ ಮೌನವಾಗಿದ್ದಾರೆಯೇ? ನಾನು ಎಚ್ಚರಿಸುತ್ತಿದ್ದೇನೆ, ಬಿಹಾರ ಜ್ವಾಲಾಮುಖಿಯ ಮೇಲೆ ಕುಳಿತಿದೆ ಎಂದು ಝಾ ಹೇಳಿದರು.
ಬಿಹಾರದ ಬಗ್ಗೆ ಪ್ರಶಾಂತ್ ಕಿಶೋರ್ ಹೇಳಿದ್ದೇನು?
ಬಿಹಾರದಿಂದ ಸರಬರಾಜು ಆಗುವ ಮಾನವ ಸಂಪನ್ಮೂಲ ಎಲ್ಲರಿಗೂ ಅಗತ್ಯವಾಗಿದೆ, ಆದರೆ ಈ ಬಂಡವಾಳವನ್ನು ರಾಜ್ಯದೊಳಗೆ ಬಳಸಿಕೊಳ್ಳಲು ಹೂಡಿಕೆ ಮಾಡಲು ಯಾರೂ ಆಸಕ್ತಿ ಹೊಂದಿಲ್ಲ. ಇದು ನಮ್ಮ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಕಾರ್ಯಸೂಚಿಯಲ್ಲಿದೆ ಎಂದು ಮನೋಜ್ ಝಾ ಹೇಳಿದರು. 1990ರಲ್ಲಿ ಬಿಹಾರವು ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾಗಿತ್ತು. 2022 ರಲ್ಲಿ ಅದು ಇನ್ನೂ ಹಾಗೆಯೇ ಉಳಿದಿದೆ. ಇಲ್ಲಿನ ಜನರು ಇತರ ರಾಜ್ಯಗಳಿಗೆ ವಲಸೆ ಹೋಗುತ್ತಾರೆ ಎಂದು ಕಿಶೋರ್ ಹೇಳಿದ್ದರು.












Click it and Unblock the Notifications