ವಾಯುಪಡೆ ವಿಮಾನ ದುರಂತದಲ್ಲಿ ಒಬ್ಬರೂ ಬದುಕುಳಿಯಲಿಲ್ಲ
ನವದೆಹಲಿ, ಜೂನ್ 13: ಕಣ್ಮರೆಯಾಗಿದ್ದ ಎಎನ್ 32 ಸಾರಿಗೆ ವಿಮಾನದಲ್ಲಿ ವಾಯುಪಡೆಯ 13 ಸಿಬ್ಬಂದಿ ಪೈಕಿ ಒಬ್ಬರೂ ಬದುಕುಳಿದಿಲ್ಲ ಎಂದು ಭಾರತೀಯ ವಾಯುಪಡೆ (ಐಎಎಫ್) ದುಃಖದ ಸಂಗತಿಯನ್ನು ತಿಳಿಸಿದೆ.
ಜೂನ್ 3ರಂದು ಅರುಣಾಚಲ ಪ್ರದೇಶದ ಮೆಂಚುಕಾ ವಾಯುನೆಲೆಯತ್ತ 13 ಸಿಬ್ಬಂದಿಯನ್ನು ಹೊತ್ತಿದ್ದ ಆಂಟೊನೊವ್ 32 ವಿಮಾನ ಕಣ್ಮರೆಯಾಗಿತ್ತು. ಅದರ ಅವಶೇಷ ಮಂಗಳವಾರ ಪತ್ತೆಯಾಗಿತ್ತು.
ಪ್ರತಿಕೂಲ ಹವಾಮಾನ ಮತ್ತು ದಟ್ಟಾರಣ್ಯದ ಪ್ರದೇಶದ ಕಾರಣದಿಂದ ಪತ್ತೆ ಕಾರ್ಯಾಚರಣೆಗೆ ತೊಡಕಾಗಿತ್ತು. ಆದರೂ ವಿಮಾನದಲ್ಲಿದ್ದ ಸಿಬ್ಬಂದಿಯಲ್ಲಿ ಯಾರಾದರೂ ಬದುಕುಳಿದಿರಬಹುದು ಎಂಬ ಆಶಯದೊಂದಿಗೆ ವಾಯುಪಡೆ ಕಾರ್ಯಾಚರಣೆ ನಡೆಸಿತ್ತು.
ಎಂಟು ಜನರ ರಕ್ಷಣಾ ಕಾರ್ಯಪಡೆ ತಂಡ ಐಎಎಫ್ನ ವಿಮಾನದ ಅವಶೇಷ ಪತ್ತೆಯಾದ ಸ್ಥಳದ ಸಮೀಪ ಬುಧವಾರ ಇಳಿದು, ಯಾರಾದರೂ ಬದುಕುಳಿದಿದ್ದಾರೆಯೆ ಎಂದು ಪತ್ತೆ ಕಾರ್ಯಾಚರಣೆ ನಡೆಸಿತ್ತು.
ಐಎಎಫ್ನ ಎಎನ್-32 ವಿಮಾನದ ಅವಶೇಷವು ಗುಡ್ಡಗಾಡಿನ ದಟ್ಟ ಅರಣ್ಯ ಪ್ರದೇಶದ ನಡುವೆ ಮಂಗಳವಾರ ಐಎಎಫ್ ಎಂಐ-17 ಹೆಲಿಕಾಪ್ಟರ್ ಕಣ್ಣಿಗೆ ಬಿದ್ದಿತ್ತು. ಆದರೆ, ಈ ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಐಎಎಫ್ ತಿಳಿಸಿದೆ.

ಸ್ಥಳದ ಸಮೀಪ ತೆರಳಿದ ತಂಡ
ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗೆ ಭಾರತೀಯ ವಾಯುಪಡೆ ಶ್ರದ್ಧಾಂಜಲಿ ಸೂಚಿಸಿದೆ. ಮೃತ ಸಿಬ್ಬಂದಿಯ ಕುಟುಂಬಕ್ಕೆ ಸಾಂತ್ವನ ಹೇಳಿದೆ.
ವಿಮಾನದ ಅವಶೇಷ ಮಂಗಳವಾರವೇ ಪತ್ತೆಯಾಗಿದ್ದರೂ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಪಡೆಗೆ ಸ್ಥಳವನ್ನು ತಲುಪುವುದು ಸಾಧ್ಯವಾಗಿರಲಿಲ್ಲ. ಬುಧವಾರ ಹತ್ತಿರದ ಬೆಟ್ಟದಲ್ಲಿ ಹೆಲಿಕಾಪ್ಟರ್ನಿಂದ ರಕ್ಷಣಾ ತಂಡವನ್ನು ಇಳಿಸಲಾಗಿತ್ತು. ಕೊನೆಗೂ ಒಂದು ತಂಡ ಗುರುವಾರ ಬೆಳಿಗ್ಗೆ ಸ್ಥಳದ ಸಮೀಪದ ಪ್ರದೇಶವನ್ನು ತಲುಪುವಲ್ಲಿ ಯಶಸ್ವಿಯಾಯಿತು.

ಮೃತಪಟ್ಟ ಯೋಧರ ಹೆಸರು
ದುರಂತದಲ್ಲಿ ಮೃತಪಟ್ಟ ವಾಯು ಯೋಧರ ಹೆಸರುಗಳನ್ನು ಕೂಡ ಐಎಎಫ್ ಪ್ರಕಟಿಸಿದೆ. ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಎಸ್/ಎಲ್ ಎಚ್ ವಿನೋದ್, ಎಫ್/ಎಲ್ ಆರ್ ಥಾಪಾ, ಎಫ್/ಎಲ್ ಎ ತನ್ವಾರ್, ಎಫ್/ಎಲ್ ಎಸ್ ಮೊಹಾಂತಿ, ಎಫ್/ಎಲ್ ಎಂಕೆ ಗರ್ಗ್, ಡಬ್ಲ್ಯೂಒ ಕೆಕೆ ಮಿಶ್ರಾ, ಎಸ್ಜಿಟಿ ಅನೂಪ್ ಕುಮಾರ್, ಸಿಪಿಎಲ್ ಶೆರಿನ್, ಎಲ್ಎಸಿ ಎಸ್ಕೆ ಸಿಂಗ್, ಎಲ್ಎಸಿ ಪಂಕಜ್, ಎನ್ಸಿ (ಇ) ಪುಟಾಲಿ ಮತ್ತು ಎನ್ಸಿ (ಇ) ರಾಜೇಶ್ ಕುಮಾರ್ ಎಂದು ತಿಳಿಸಿದೆ.

15 ಜನರ ತಂಡದಿಂದ ಹುಡುಕಾಟ
ಐಎಎಫ್ನ 9 ಜನರ ಪರ್ವತಾರೋಹಿಗಳು, ನಾಲ್ವರು ಸೇನಾ ಸಿಬ್ಬಂದಿ, ಇಬ್ಬರು ನಾಗರಿಕ ಪರ್ವತಾರೋಹಿಗಳನ್ನು ಒಳಗೊಂಡ 15 ಜನರ ತಂಡ ವಿಮಾನದ ಅವಶೇಷ ಕಂಡುಬಂದಿದ್ದ ಅರುಣಾಚಲ ಪ್ರದೇಶದ ಸಿಯಾಂಗ್ ಮತ್ತು ಶಿ-ಯೋಮಿ ಜಿಲ್ಲೆಗಳ ಗಡಿಯಲ್ಲಿನ ಗಟ್ಟೆ ಗ್ರಾಮದ ಸಮೀಪದ 12 ಸಾವಿರ ಅಡಿ ಎತ್ತರದ ಪರ್ವತ ಪ್ರದೇಶಕ್ಕೆ ತೆರಳಿತ್ತು.

ಮೃತದೇಹ ಹುಡುಕುವುದು ಸವಾಲು
ಈ ತಂಡ ಇನ್ನೂ ಅವಶೇಷ ದೊರಕಿರುವ ಸ್ಥಳವನ್ನು ತಲುಪುವಲ್ಲಿ ಯಶಸ್ವಿಯಾಗಿಲ್ಲ. ಮಳೆಯ ಅಬ್ಬರ ಹಾಗೂ ಅತ್ಯಂತ ಕಠಿಣವಾದ ಗುಡ್ಡಗಾಡು ಹಾದಿಯಲ್ಲಿ ಸಾಗುವುದು ಅವರಿಗೆ ಸುಲಭವಾಗಿಲ್ಲ. ಈ ಸನ್ನಿವೇಶದಲ್ಲಿ ಇಂತಹ ಪ್ರದೇಶದಲ್ಲಿ ಯಾರೂ ಬದುಕಿರಲು ಸಾಧ್ಯವಿಲ್ಲ ಎಂದು ಐಎಎಫ್ ಹೇಳಿದೆ. ಜತೆಗೆ ಎಲ್ಲ 13 ಸಿಬ್ಬಂದಿಯ ಕುಟುಂಬದವರಿಗೂ ಮಾಹಿತಿ ನೀಡಿದೆ. ತಂಡವು ಅಲ್ಲಿಗೆ ತಲುಪಿ ಮೃತದೇಹಗಳ ಪತ್ತೆ ಕಾರ್ಯ ಮಾಡಬೇಕಿದೆ. ಈಗಿನ ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗಲಾರದು ಎನ್ನಲಾಗಿದೆ.












Click it and Unblock the Notifications