ಬಿಜೆಪಿಯಿಂದ ನನ್ನ ಫೇಸ್ಬುಕ್ ಖಾತೆ ಹ್ಯಾಕ್: ಲಾಲೂ ಪುತ್ರನ ಆರೋಪ
ಪಾಟ್ನಾ, ಜುಲೈ 3: ಬಿಜೆಪಿ ಮತ್ತು ಆರ್.ಎಸ್.ಎಸ್ ತಮ್ಮ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಕುಟುಂಬದಲ್ಲಿ ಒಡಕು ಮೂಡಿಸಲು ಬಿಜೆಪಿ ಯತ್ನಿಸಿದೆ ಎಂದವರು ದೂರಿದ್ದಾರೆ.
'ಬಿಹಾರದಲ್ಲಿ ನಿತೀಶ್ಗೆ ಶಾಶ್ಚತವಾಗಿ ಮುಚ್ಚಿದ ಮೈತ್ರಿ ಬಾಗಿಲು'
ಈ ಕುರಿತು ಸೋಮವಾರ ರಾತ್ರಿ ಫೇಸ್ಬುಕ್ ಪೋಸ್ಟ್ ಹಾಕಿರುವ ತೇಜ್ ಪ್ರತಾಪ್ ಯಾದವ್, "ನನ್ನ ಖಾತೆಯನ್ನು ಬಿಜೆಪಿ ಮತ್ತು ಆರ್.ಎಸ್.ಎಸ್ ಐಟಿ ಸೆಲ್ ನವರು ಹ್ಯಾಕ್ ಮಾಡಿದ್ದಾರೆ. ಮತ್ತು ಅವರು ನಮ್ಮ ಕುಟುಂಬದ ಬಗ್ಗೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೆ ನನ್ನ ತಂದೆಯ ಫೇಸ್ಬುಕ್ ಪೇಜ್ ಒಂದನ್ನು ಬಿಜೆಪಿ ಬೆಂಬಲಿಗ ಹ್ಯಾಕ್ ಮಾಡಿದ್ದ. ಇದಕ್ಕಾಗಿ ಆತ ಜೈಲು ಶಿಕ್ಷೆಗೆ ಗುರಿಯಾದ. ಆರಂಭದಲ್ಲಿ ನನ್ನ ವಿರುದ್ಧ ಕೆಟ್ಟ ವಿಷಯಗಳನ್ನು ಬರೆದ ನಂತರ ಇದೀಗ ನನ್ನ ತಾಯಿ ವಿರುದ್ಧ ಬರೆಯಲಾಗಿದೆ. ನಮ್ಮ ಯಶಸ್ಸನ್ನು ನೋಡಿ, ನಮ್ಮ ಎದುರಾಳಿಗಳು ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ," ಎಂದವರು ಕಿಡಿಕಾರಿದ್ದಾರೆ.
ಅವರು ಹ್ಯಾಕರ್ ಗಳನ್ನು ಜನಾಭಿಪ್ರಾಯದ ಕಳ್ಳರು ಎಂದು ಜರೆದಿದ್ದು, ನನಗೆ ನನ್ನ ಕುಟುಂಬವೇ ಜೀವನ, ಸಹೋದರ ತೇಜಸ್ವೀ ಯಾದವ್ ಅವರೇ ನನ್ನ ಶಕ್ತಿ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ತೇಜ್ ಪ್ರತಾಪ್ ಯಾದವ್ ಅವರ ಫೇಸ್ಬುಕ್ ಪೋಸ್ಟ್ ನಲ್ಲಿ, ಪಕ್ಷದ ನಾಯಕರ ಬಗ್ಗೆ ಹತಾಶೆಗೊಂಡಿರುವುದಾಗಿ, ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ರಾಷ್ಟ್ರೀಉ ಉಪಾಧ್ಯಕ್ಷೆ ರಾಬ್ರಿ ದೇವಿ ತಮ್ಮ ದೂರುಗಳ ಬಗ್ಗೆ ಕಿವುಡರಾಗಿದ್ದಾರೆ ಎಂದು ದೂರುವ ಪೋಸ್ಟ್ ಒಂದನ್ನು ಹಾಕಲಾಗಿತ್ತು.
ಆದರೆ ಇದು ನನ್ನ ಪೋಸ್ಟ್ ಅಲ್ಲ, ನನ್ನ ಅಕೌಂಟನ್ನು ಬಿಜೆಪಿ-ಆರ್.ಎಸ್.ಎಸ್ ನವರು ಹ್ಯಾಕ್ ಮಾಡಿದ್ದಾರೆ ಎಂದು ತೇಜ್ ಪ್ರತಾಪ್ ಆರೋಪಿಸಿದ್ದಾರೆ. ಜೊತೆಗೆ ಈ ಪೋಸ್ಟ್ ನ್ನು ಅರ್ಧ ಗಂಟೆಯೊಳಗೆ ಡಿಲೀಟ್ ಮಾಡಲಾಗಿತ್ತು.
ಇನ್ನು ಮಂಗಳವಾರ ಬೆಳಿಗ್ಗೆ ತೇಜ್ ಪ್ರತಾಪ್ ಯಾದವ್ ತಮ್ಮ ತಾಯಿ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮನೆ ಮುಂದೆ ನೋ ಎಂಟ್ರಿ ನಿತೀಶ್ ಚಾಚಾ ಎಂಬ ಬೋರ್ಡ್ ಪ್ರದರ್ಶಿಸಿದ್ದಾರೆ. ಜೊತೆಗೆ ಹ್ಯಾಕ್ ಮಾಡಿದವರ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.