ಅವಿಶ್ವಾಸ ನಿರ್ಣಯ : ವಿರೋಧಿಗಳ ದೌರ್ಬಲ್ಯ ಬಯಲು ಮಾಡಲು ಎನ್ಡಿಎ ಸನ್ನದ್ಧ!
ಬೆಂಗಳೂರು, ಜುಲೈ 19 : ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಅವಿಶ್ವಾಸ ನಿರ್ಣಯದ ಸವಾಲನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳು, ತಮ್ಮ ಬಲವನ್ನು ತೋರಿಸುವುದು ಮಾತ್ರವಲ್ಲ ವಿರೋಧಿಗಳ ದೌರ್ಬಲ್ಯವನ್ನು ಬಯಲು ಮಾಡಲು ಸನ್ನದ್ಧವಾಗಿವೆ.
ತಮ್ಮ ಬಳಿಯೇನೋ ಸಂಖ್ಯಾಬಲವಿದೆ ಎಂದು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಬೀಗುತ್ತಿದ್ದರೂ, ಭಾರತೀಯ ಜನತಾ ಪಕ್ಷ ಮತ್ತು ಎನ್ಡಿಎದ ಅಂಗಪಕ್ಷಗಳು ಸಾಕಷ್ಟು ಬಲ ಹೊಂದಿವೆ. ಅಲ್ಲದೆ, ಎನ್ಡಿಎ ಮತ್ತು ಯುಪಿಎ ಎರಡೂ ಬಣಗಳನ್ನು ಬೆಂಬಲಿಸದ, ಮೈತ್ರಿಕೂಟಗಳಿಂದ ಹೊರಗಿರುವ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಕೂಡ ಬಿಜೆಪಿ ಯತ್ನ ನಡೆಸಿದೆ.
ಒಂದು ವೇಳೆ ಯಾವುದೇ ರಾಷ್ಟ್ರೀಯ ಪಕ್ಷದ ಜೊತೆ ಗುರುತಿಸಿಕೊಂಡಿರದ ಪ್ರಾದೇಶಿಕ ಪಕ್ಷಗಳು ಎನ್ಡಿಎಗೆ ಬೆಂಬಲ ನೀಡಿದರೆ ಅಥವಾ ಅವಿಶ್ವಾಸ ಗೊತ್ತುವಳಿಯಿಂದ ದೂರವುಳಿದರೆ, ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ಭಾರೀ ಮುಖಭಂಗವಾಗುವುದು ನಿಶ್ಚಿತ. ಈಗ ಚೆಂಡು ಯುಪಿಎ ಅಂಗಳದಲ್ಲಿದೆ.
ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳು, ಅವಿಶ್ವಾಸ ನಿರ್ಣಯ ಮಂಡನೆಯಾಗಲಿರುವ ಶುಕ್ರವಾರದಂದೆ ಎಲ್ಲ ಸದಸ್ಯರು ಹಾಜರಿರತಕ್ಕದ್ದೆಂದು ವಿಪ್ ನೀಡಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಬಲಾಬಲಕ್ಕೆ ಅಖಾಡ ಸಿದ್ದವಾಗಿದೆ. ಯಾರ್ಯಾರ ಬಳಿ ಎಷ್ಟೆಷ್ಟು ಸಂಖ್ಯೆಗಳಿವೆ ನೋಡೋಣ ಬನ್ನಿ.

ಗೆಲುವಿಗೆ ಎಷ್ಟು ಮತಗಳ ಅಗತ್ಯವಿದೆ?
ಬಿಜೆಪಿಯ 271 ಸೀಟುಗಳನ್ನು ಹಿಡಿದುಕೊಂಡು ಎನ್ಡಿಎ ಒಟ್ಟು 314 ಸೀಟುಗಳನ್ನು ಹೊಂದಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ನ 48 ಸೀಟು ಸೇರಿದಂತೆ ಮೈತ್ರಿಪಕ್ಷಗಳ ಒಟ್ಟಾರೆ ಸಂಖ್ಯೆ 66 ಮಾತ್ರವಿದೆ. ಪಕ್ಷೇತರ 3 ಮತ್ತು 9 ಸ್ಥಾನಗಳು ಖಾಲಿಯಿವೆ. ಬಹುಮತ ಸಾಬೀತುಪಡಿಸಲು ಬೇಕಾಗಿರುವುದು 268 ಸ್ಥಾನಗಳು. ಎಲ್ಲೂ ಅಡ್ಡಮತದಾನವಾಗದಿದ್ದರೆ ಅಥವಾ ಮೈತ್ರಿಕೂಟದಿಂದ ಹೊರಗಿರುವ ಪಕ್ಷಗಳು ತಟಸ್ಥವಾದರೆ ಯುಪಿಎಗೆ ಸೋಲು ಕಟ್ಟಿಟ್ಟ ಬುತ್ತಿ.

ಯುಪಿಎಯನ್ನು ಸೋಲಿಸಲು ಇಷ್ಟು ಸಾಕೆ?
ಯುಪಿಎದಲ್ಲಿ 66 ಸದಸ್ಯರ ಸಂಖ್ಯೆಯಷ್ಟೇ ಇದ್ದರೂ ತೃಣಮೂಲ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷದಂಥ ದೊಡ್ಡ ಪಕ್ಷಗಳು ವಿರೋಧ ಪಕ್ಷಗಳನ್ನು ಬೆಂಬಲಿಸುತ್ತಿವೆ. ಇದರಿಂದ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವ ಸದಸ್ಯರ ಸಂಖ್ಯೆ 147ಕ್ಕೆ ಊದಿಕೊಂಡಿದೆ. ಆಡಳಿತ ಪಕ್ಷವನ್ನು ಸೋಲಿಸಲು ಈ ಸಂಖ್ಯೆಗಳಿಂದ ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ನಂತರ ಅತಿದೊಡ್ಡ ಪಕ್ಷವಾಗಿರುವ ಎಐಎಡಿಎಂಕೆ (37) ಯುಪಿಎ ಬದಲಿಗೆ ಎನ್ಡಿಎಯನ್ನು ಬೆಂಬಲಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾದರೆ ಅವಿಶ್ವಾಸ ಮತಕ್ಕೆ ಸೋಲು ಗ್ಯಾರಂಟಿ.

ಪರೀಕ್ಷೆಯಲ್ಲಿ ಖಂಡಿತ ಗೆಲ್ಲುತ್ತೇವೆ : ಅನಂತ್
ಕಳೆದ ಚುನಾವಣೆಯಲ್ಲಿ ಎನ್ಡಿಎಗೆ ಅಭೂತಪೂರ್ವ ಬಹುಮತ ದಕ್ಕಿದೆ, 21 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಗೊತ್ತಿದ್ದರೂ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ಅಚ್ಚರಿಯ ಸಂಗತಿ. ಇದಕ್ಕೆ ನಾವು ಹೆದರುವುದಿಲ್ಲ, ಹಿಂಜರಿಯುವುದಿಲ್ಲ. ಎಲ್ಲ ಸದಸ್ಯರಿಗೆ ಗುರುವಾರ ಮತ್ತು ಶುಕ್ರವಾರ ಹಾಜರಿರತಕ್ಕದ್ದೆಂದು ವ್ಹಿಪ್ ಜಾರಿ ಮಾಡಲಾಗಿದ್ದು, ಈ ಪರೀಕ್ಷೆಯಲ್ಲಿ ಖಂಡಿತ ಗೆಲುವು ಸಾಧಿಸುತ್ತೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೆಲ್ಲ ರಾಜಕೀಯ ಗಿಮಿಕ್ ಅಂದ ಟಿಆರ್ಎಸ್
ಈ ಅವಿಶ್ವಾಸ ಗೊತ್ತುವಳಿಗೆ ನಮ್ಮ ಬೆಂಬಲ ಇಲ್ಲ, ಇದೆಲ್ಲ ರಾಜಕೀಯ ಗಿಮಿಕ್. ನಮ್ಮ ಮತ್ತು ಕೇಂದ್ರದ ಜೊತೆ ಸಂಬಂಧ ಚೆನ್ನಾಗಿಯೇ ಇದೆ. ನಾವೇಕೆ ಯಾವುದೇ ಬಣಕ್ಕೆ ಬೆಂಬಲ ಸೂಚಿಸಬೇಕು ಎಂದು 11 ಲೋಕಸಭಾ ಸದಸ್ಯರನ್ನು ಹೊಂದಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ (ಕೆ. ಚಂದ್ರಶೇಖರ ರಾವ್) ಎಂದು ಹೇಳಿದ್ದು, ವಿರೋಧಿಗಳಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ಎಐಎಡಿಎಂಕೆ ಮತ್ತು ಬಿಜೆಡಿ ಕೂಡ ಇದೇ ಹಾದಿ ತುಳಿಯುವ ಲಕ್ಷಣಗಳಿವೆ. ಮೈತ್ರಿಯಿಂದ ಹೊರಗಿರುವ ಪಕ್ಷಗಳನ್ನು ಸೆಳೆಯಲು ಎರಡೂ ಪಂಗಡಗಳು ಭಾರೀ ಪ್ರಯತ್ನವಂತೂ ನಡೆಸಿವೆ.

ಲೋಕಸಭೆಗೂ ಮುನ್ನ ಎನ್ಡಿಎಗೆ ಪರೀಕ್ಷೆ
ಮೂರು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅವಿಶ್ವಾಸ ನಿರ್ಣಯವನ್ನು ತಮ್ಮ ಬಲ ತೋರಿಸಲು ವೇದಿಕೆಯನ್ನಾಗಿಸಲು ವಿರೋಧ ಪಕ್ಷಗಳೇನೋ ಯತ್ನ ನಡೆಸಿವೆ. ಮುಂಗಾರು ಅಧಿವೇಶನದಲ್ಲಿ ತನ್ನ ಬಲ ತೋರಲು ಯಶಸ್ವಿಯಾಗುತ್ತಾ ಯುಪಿಎ? ಅಥವಾ ಎನ್ಡಿಎಗೆ ಇನ್ನಷ್ಟು ಬಲ ತೋರಲು ಅವಕಾಶ ಮಾಡಿಕೊಡುತ್ತದಾ? ಇದು ಶುಕ್ರವಾರ, ಜುಲೈ 20ರಂದು ನಡೆಯಲಿರುವ ಅವಿಶ್ವಾಸ ಗೊತ್ತುವಳಿಯ ನಿರ್ಣಯದಲ್ಲಿ ತಿಳಿದುಬರಲಿದೆ. ಇದು ಲೋಕಸಭೆಗೂ ಮುನ್ನ ಎನ್ಡಿಎಗೆ ಪೂರ್ವಸಿದ್ಧತಾ ಪರೀಕ್ಷೆಯೂ ಹೌದು.











Click it and Unblock the Notifications