ಕಳೆದ ಮೂರು ವರ್ಷಗಳಲ್ಲಿ 9 ಕಾಶ್ಮೀರಿ ಪಂಡಿತರ ಹತ್ಯೆ: ಸಂಸತ್ತಿಗೆ ತಿಳಿಸಿದ ಕೇಂದ್ರ ಸರ್ಕಾರ
ಶ್ರೀನಗರ, ಡಿಸೆಂಬರ್ 14: ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂಬತ್ತು ಕಾಶ್ಮೀರಿ ಪಂಡಿತರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದೆ ರಾಜಮಣಿ ಪಟೇಲ್ ಅವರ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಈ ಹೇಳಿಕೆ ನೀಡಿದ್ದಾರೆ.
2020ರಲ್ಲಿ ಒಬ್ಬ ಕಾಶ್ಮೀರಿ ಪಂಡಿತರನ್ನು, 2021 ಮತ್ತು 2022ರಲ್ಲಿ ತಲಾ ನಾಲ್ವರು ಪಂಡಿತರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಇದರಲ್ಲಿ ಕಾಶ್ಮೀರಿ ರಜಪೂತ ಸಮುದಾಯದ ಒಬ್ಬರು ಹತ್ಯೆಯಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
'ಸರ್ಕಾರವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ' ಎಂದು ರೈ ಹೇಳಿದ್ದಾರೆ.
'2018 ರಲ್ಲಿ 417 ದಾಳಿಗಳನ್ನು ಉಗ್ರರು ನಡೆಸಿದ್ದಾರೆ. ಇದು 2021 ರಲ್ಲಿ 229 ಕ್ಕೆ ಗಣನೀಯ ಇಳಿಕೆ ಕಂಡಿದೆ' ಎಂದು ರೈ ನುಡಿದಿದ್ದಾರೆ.

ಪೊಲೀಸ್ ಭದ್ರತೆಗೆ ಸಂಬಂಧಿಸಿದ ವೆಚ್ಚಕ್ಕಾಗಿ ಕೇಂದ್ರವು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ 2,814.095 ಕೋಟಿ ರೂಪಾಯಿ ಮೌಲ್ಯದ ಹಣವನ್ನು ಮರುಪಾವತಿ ಮಾಡಿದೆ ಎಂದು ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಯಾವುದೇ ಕಾಶ್ಮೀರಿ ಪಂಡಿತರು ಕಣಿವೆಯಿಂದ ಹೊರಗೆ ವಲಸೆ ಹೋಗಿಲ್ಲ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಅಕ್ಟೋಬರ್ 16 ರಂದು ಉಗ್ರಗಾಮಿಗಳಿಂದ ಹತ್ಯೆಗೀಡಾದ ಅಶ್ವನಿ ಕುಮಾರ್ ಭಟ್ ಅವರ ಸಹೋದರ ಪುರಾನ್ ಕ್ರಿಶನ್ ಭಟ್ ಅವರ ಕುಟುಂಬವು ಎಂದಿಗೂ ಕಾಶ್ಮೀರಕ್ಕೆ ಹಿಂತಿರುಗುವುದಿಲ್ಲ ಎಂದು ಹೇಳಿತ್ತು. ಆ ನಂತರ ಅಕ್ಟೋಬರ್ನಲ್ಲಿ ಕಾಶ್ಮೀರಿ ಪಂಡಿತರು ಶೋಪಿಯಾನ್ ಜಿಲ್ಲೆಯಿಂದ ವಲಸೆ ಹೋಗಿದ್ದಾರೆ ಎಂಬ ವರದಿಗಳಾಗಿದ್ದವು.
2008 ರಲ್ಲಿ ಪ್ರಧಾನ ಮಂತ್ರಿಗಳ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಗುಂಪು ಮೇ ತಿಂಗಳಿನಿಂದ ಪ್ರತಿಭಟನೆಗಳನ್ನು ನಡೆಸುತ್ತಿದೆ. ತಮ್ಮನ್ನು ಕಣಿವೆಯಿಂದ ಹೊರಗಿರುವ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಕಾಶ್ಮೀರಿ ಪಂಡಿತರು ಒತ್ತಾಯಿಸುತ್ತಿದ್ದಾರೆ.
ಮೇ 12 ರಂದು ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಕೊಂದ ನಂತರ ಪ್ರತಿಭಟನೆಗಳು ಪ್ರಾರಂಭವಾಗಿವೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಆರ್ಟಿಕಲ್ 370 ಅನ್ನು ಹಿಂಪಡೆದುಕೊಂಡಿದೆ. ಆಗಿನಿಂದ ಕಾಶ್ಮೀರದಲ್ಲಿ ಉಗ್ರವಾದದ ಕೃತ್ಯಗಳು ಹೆಚ್ಚಿವೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಾದ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ.












Click it and Unblock the Notifications