Bangladesh Protest: ಬಾಂಗ್ಲಾದೇಶದಿಂದ ಹಿಂದಿರುಗಿದ ಸುಮಾರು 1,000 ಭಾರತೀಯ ವಿದ್ಯಾರ್ಥಿಗಳು
ನವದೆಹಲಿ, ಜುಲೈ. 20: ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯ ವಿರುದ್ಧ ನೆರೆಯ ದೇಶ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆ ಅಧಿಕಾರಿಗಳು ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಿದ್ದಾರೆ. ಇದರಿಂದ ಸುಮಾರು 1,000 ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಮರಳಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನಾಕಾರರು ಮತ್ತು ಪೊಲೀಸರು ಮತ್ತು ಸರ್ಕಾರದ ಪರ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಈವರೆಗೂ 115 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನು, ಬಾಂಗ್ಲಾದೇಶದ ಪರಿಸ್ಥಿತಿಯನ್ನು ಆಂತರಿಕ ವಿಷಯ ಎಂದು ಕರೆದಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), 778 ಭಾರತೀಯ ವಿದ್ಯಾರ್ಥಿಗಳು ವಿವಿಧ ಬಂದರುಗಳ ಮೂಲಕ ಭಾರತಕ್ಕೆ ಮರಳಿದ್ದಾರೆ ಎಂದು ಮಾಹಿತಿ ನೀಡಿದೆ.

ಇದಲ್ಲದೆ, ಸುಮಾರು 200 ವಿದ್ಯಾರ್ಥಿಗಳು ಢಾಕಾ ಮತ್ತು ಚಿತ್ತಗಾಂಗ್ ವಿಮಾನ ನಿಲ್ದಾಣಗಳ ಮೂಲಕ ಸಾಮಾನ್ಯ ವಿಮಾನ ಸೇವೆಗಳ ಮೂಲಕ ದೇಶಕ್ಕೆ ಮರಳಿದ್ದಾರೆ. "ಢಾಕಾದಲ್ಲಿರುವ ಭಾರತದ ಹೈಕಮಿಷನ್ ಮತ್ತು ನಮ್ಮ ಸಹಾಯಕ ಹೈಕಮಿಷನ್ಗಳು ಬಾಂಗ್ಲಾದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉಳಿದಿರುವ 4000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿವೆ ಮತ್ತು ಅಗತ್ಯ ನೆರವು ನೀಡುತ್ತಿವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಹೈಕಮಿಷನ್, ಗಡಿ ಭದ್ರತಾ ಪಡೆ (BSF) ಮತ್ತು ಬ್ಯೂರೋ ಆಫ್ ಇಮಿಗ್ರೇಷನ್ನ ಜಂಟಿಯಾಗಿ, ಬೆನಾಪೋಲ್ - ಪೆಟ್ರಾಪೋಲ್, ಗೆಡೆ-ದರ್ಶನ ಮತ್ತು ಅಖೌರಾ - ಅಗರ್ತಲಾ ಮುಂತಾದ ಗಡಿ ದಾಟುವಿಕೆಗಳ ಮೂಲಕ ಈ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ನಿರತವಾಗಿವೆ.
"ನಾವು ಬಾಂಗ್ಲಾದೇಶದ ಪ್ರತಿಭಟನೆಯನ್ನು ದೇಶದ ಆಂತರಿಕ ವಿಷಯವಾಗಿ ನೋಡುತ್ತೇವೆ" ಎಂದು ಜೈಸ್ವಾಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬಾಂಗ್ಲಾದೇಶದಲ್ಲಿರುವ ಭಾರತೀಯರ ಸುರಕ್ಷತೆಯನ್ನು ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಲು ಮತ್ತು ಮನೆಯೊಳಗೆ ಉಳಿಯಲು ಸಲಹೆ ನೀಡಿದೆ.
ಬಾಂಗ್ಲಾದೇಶದಲ್ಲಿ ಪ್ರಾಥಮಿಕವಾಗಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳು ಶೇಖ್ ಹಸೀನಾ ನೇತೃತ್ವದ ಸರ್ಕಾರದ ಉದ್ಯೋಗ ಕೋಟಾ ವ್ಯವಸ್ಥೆಯ ವಿರುದ್ಧವಾಗಿವೆ. ಇದು ಸರ್ಕಾರಿ ಉದ್ಯೋಗಗನ್ನು ಕೆಲವು ಗುಂಪುಗಳಿಗೆ ಮೀಸಲಿಡುತ್ತದೆ. ಈ ವ್ಯವಸ್ಥೆಯು ತಾರತಮ್ಯದಿಂದ ಕೂಡಿದೆ ಮತ್ತು ಅರ್ಹ ಅಭ್ಯರ್ಥಿಗಳು ಸರ್ಕಾರಿ ಸ್ಥಾನಗಳನ್ನು ಪಡೆದುಕೊಳ್ಳುವುದನ್ನು ತಡೆಯುತ್ತದೆ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ.

ಕಳೆದ ತಿಂಗಳು, ಬಾಂಗ್ಲಾದೇಶದ ಹೈಕೋರ್ಟ್ ತನ್ನ ನಿರ್ಧಾರವನ್ನು ರದ್ದುಗೊಳಿಸಿದೆ. 1971 ರ ವಿಮೋಚನಾ ಯುದ್ಧದ ಸಂಬಂಧಿಕರು ಅರ್ಜಿಗಳನ್ನು ಸಲ್ಲಿಸಿದ ನಂತರ ಕೋಟಾಗಳನ್ನು ಮರುಸ್ಥಾಪಿಸಿದೆ. ಇದು ಪ್ರತಿಭಟನೆಗೆ ಪ್ರಚೋದಿಸಿದೆ. ಈ ಘರ್ಷಣೆಗಳು ಬಾಂಗ್ಲಾದೇಶದ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುವಂತೆ ಮಾಡಿದೆ. ಇದರಿಂದ ಭಾರತ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಬಾಂಗ್ಲಾದೇಶದಿಂದ ಭಾರತೀಯರ ಸ್ಥಳಾಂತರ
ಭಾರತ, ನೇಪಾಳ ಮತ್ತು ಭೂತಾನ್ನ ನಾಗರಿಕರು ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಮೇಘಾಲಯಕ್ಕೆ ಬರುತ್ತಿದ್ದಾರೆ. ಈಗಾಗಲೇ ಮೇಘಾಲಯದಲ್ಲಿ ಆಶ್ರಯ ಪಡೆದ ಒಟ್ಟು ಜನರ ಸಂಖ್ಯೆ 670ಕ್ಕಿಂತ ಹೆಚ್ಚಿದೆ. ಮೇಘಾಲಯ ಸರ್ಕಾರವು ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದ ಪೀಡಿತ ನಾಗರಿಕರಿಗೆ ಸಹಾಯ ಮಾಡಲು ಸಹಾಯವಾಣಿಯನ್ನು ಸ್ಥಾಪಿಸಿದೆ.
ಪ್ರತಿಭಟನೆ ಹಿನ್ನೆಲೆ ಜನ ಜೀವನ ಅಸ್ತವ್ಯಸ್ತಗೊಂಡಿದೆ ಮಾತ್ರವಲ್ಲದೆ ಸಂವಹನ ಜಾಲಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅನೇಕ ಪ್ರದೇಶಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಿದೆ. ಭಾರತೀಯ ಹೈಕಮಿಷನ್ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ಹಗಲಿರುಳು ಕಾರ್ಯನಿರ್ವಹಿಸುವ ಹಲವು ಸಹಾಯವಾಣಿಗಳನ್ನು ಸಕ್ರಿಯಗೊಳಿಸಿದೆ.












Click it and Unblock the Notifications