ಬೆಂಗಳೂರಿಗೆ ಬಂದ ಕೇಜ್ರಿವಾಲ್ ಮೇಲೆ ಸ್ವಪಕ್ಷೀಯರು ಗರಂ
ಬೆಂಗಳೂರು, ಮೇ 24: ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪದಗ್ರಹಣ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳೆಲ್ಲಾ ಬೆಂಗಳೂರಿನಲ್ಲಿ ಒಂದೇ ವೇದಿಕೆಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಉಪಸ್ಥಿತರಿದ್ದರು.
ಆದರೆ ಕಾಂಗ್ರೆಸ್ ಮೈತ್ರಿ ಸರಕಾರದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಕಾಂಗ್ರೆಸ್ ಅಧ್ಯಕ್ಷರ ಜೊತೆ ಕೇಜ್ರಿವಾಲ್ ವೇದಿಕೆ ಹಂಚಿಕೊಂಡಿದ್ದು ಅವರ ಪಕ್ಷದವರಿಗೇ ಪಥ್ಯವಾಗಿಲ್ಲ.
"ನನ್ನ ನಿಲುವು ಸ್ಪಷ್ಟವಾಗಿದೆ. ನಾನು ಕಾಂಗ್ರೆಸ್ ಜೊತೆಗೆ ಯಾವುದೇ ಸಂಬಂಧ ಹೊಂದಲು ಸಾಧ್ಯವಿಲ್ಲ. ಕಾರಣ ನನಗೆ 1984ರ ಗಲಭೆ ಅತೀ ದೊಡ್ಡದು ಮತ್ತು ನಾನು ಇದರ ಜೊತೆಗೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಂದಾಳತ್ವದ ಮೈತ್ರಿಕೂಟಕ್ಕೆ ಪಕ್ಷ (ಎಎಪಿ) ಸೇರಿದ್ದೇ ಆದಲ್ಲಿ ಮುಂದಿನ ಕ್ಷಣಕ್ಕೇ ನಾನು ರಾಜೀನಾಮೆ ನೀಡುತ್ತೇನೆ," ಎಂದು ಎಎಪಿ ನಾಯಕ ಎಚ್.ಎಸ್. ಫೂಲ್ಕಾ ಎಚ್ಚರಿಕೆ ನೀಡಿದ್ದಾರೆ.

"1984ರ ಗಲಭೆ ನನಗೆ ಬಹಳ ಮುಖ್ಯವಾದುದು. ಒಂದೊಮ್ಮೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಆದರೆ ಸಿಖ್ಖರು 1984ರ ಘಟನೆಗೆ ಕಾಂಗ್ರೆಸ್ ನ್ನು ಕ್ಷಮಿಸಿದ್ದಾರೆ ಎಂಬ ಸಂದೇಶ ನೀಡಿದಂತಾಗುತ್ತದೆ. ಇದು ನಡೆಯಬಾರದು," ಎಂದಿದ್ದಾರೆ.
ಈ ಮೂಲಕ ಮಹಾಮೈತ್ರಿಕೂಟಕ್ಕೆ ಅಡಿಪಾಯ ಹಾಕುವಾಗಲೇ ಪಕ್ಷಗಳ ಒಳಗೆ ಆಂತರಿಕ ಸಂಘರ್ಷ ಭುಗಿಲೆದ್ದಿದೆ.












Click it and Unblock the Notifications