ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಶಿವನ ವಿಗ್ರಹ ನೀಡಿದ ಮುಸ್ಲಿಂ ಮಹಿಳೆ
ನವದೆಹಲಿ, ಡಿಸೆಂಬರ್ 23: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಇಂದು ಹರಿಯಾಣದಲ್ಲಿ ಕೊನೆಗೊಳ್ಳಲಿದೆ. ನಾಳೆ (ಡಿಸೆಂಬರ್ 24) ಬೆಳಿಗ್ಗೆ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲಿದೆ. ದೆಹಲಿಯ ಪ್ರಮುಖ ಮಾರ್ಗಗಳಲ್ಲಿ ವ್ಯಾಪಕ ಬಂದೋಬಸ್ತ್ ಅನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಗೆ ಪ್ರವೇಶಿಸುತ್ತಿರುವ ಯಾತ್ರೆಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುವುದು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಕೋವಿಡ್ನ ಹೊಸ ತಳಿಯ ಆತಂಕದ ನಡುವೆಯೇ, ಯಾತ್ರೆಗೆ ಜನಬೆಂಬಲ ದೊರೆಯುತ್ತಿದೆ. ದೇಶದಾದ್ಯಂತ ಹಲವು ರಾಜಕೀಯ ನಾಯಕರು, ಸಿನಿ ಕಲಾವಿದರು, ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಬರಹಗಾರರು ಸೇರಿದಂತೆ ಸಾವಿರಾರು ಮಂದಿ ರಾಹುಲ್ ಜೊತೆ ಹೆಜ್ಜೆ ಹಾಕಿದ್ದಾರೆ.
ಇಂದು ಮುಂಜಾನೆ ಹರಿಯಾಣದ ಸೋಹ್ನಾದ ಖೇರ್ಲಿ ಲಾಲಾದಿಂದ ಯಾತ್ರೆ ಆರಂಭವಾಗಿದೆ. ಇದರಲ್ಲಿ ಎಲ್ಲ ಜಾತಿ ಧರ್ಮದವರೂ ಭಾಗವಹಿಸಿದ್ದಾರೆ. ವಿಶೇಷವೆಂದರೆ, ಬುರ್ಖಾಧಾರಿ ಮುಸ್ಲಿಂ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ 'ಶಿವನ ವಿಗ್ರಹ'ವನ್ನು ನೀಡಿದ್ದಾರೆ. ಇದನ್ನು ರಾಹುಲ್ ಗಾಂಧಿ ನಗುತ್ತಲೇ ಪಡೆದುಕೊಂಡಿದ್ದಾರೆ. ಈ ಕ್ಷಣಗಳಿಗೆ ಡಿಎಂಕೆ ನಾಯಕಿ, ಸಂಸದೆ ಕನ್ನಿಮೋಳಿ ಸಾಕ್ಷಿಯಾಗಿದ್ದಾರೆ.
ईश्वर-अल्लाह तेरो नाम...#BharatJodoYatra pic.twitter.com/fiLvSJVZBi
— Congress (@INCIndia) December 23, 2022
ಈ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ಫೋಟೊವನ್ನು ಕಾಂಗ್ರೆಸ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 'ಈಶ್ವರ ಅಲ್ಲಾ ತೆರೋ ನಾಮ್' ಎಂದು ಬರೆಯಲಾಗಿದೆ.
ರಾಹುಲ್ ಜೊತೆ ಹೆಜ್ಜೆ ಹಾಕಿದ ಡಿಎಂಕೆ ನಾಯಕಿ
ಇಂದು ಹರಿಯಾಣದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಡಿಎಂಕೆ ನಾಯಕಿ ಕನ್ನಿಮೋಳಿ ಹೆಜ್ಜೆ ಹಾಕಿದ್ದಾರೆ. ನಗುತ್ತಲೇ ಜನರತ್ತ ಕೈಬೀಸಿದ್ದಾರೆ. ಖ್ಯಾತ ನಟ ಕಮಲ್ ಹಾಸನ್ ಅವರು ದೆಹಲಿಯಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಪ್ಯಾರಾ ಒಲಂಪಿಕ್ ಕ್ರೀಡಾಪಟು ಕಂಚನ್ ಲಖನಿ ಅವರು ರಾಹುಲ್ ಗಾಂಧಿಗೆ ಇಂದು ಜೊತೆಯಾಗಿದ್ದಾರೆ. ವೀಲ್ಚೇರ್ನಲ್ಲಿಯೇ ರಾಹುಲ್ ಜೊತೆ ಸಾಗಿದ್ದಾರೆ. ಅವರೊಂದಿಗೆ ರಾಹುಲ್ ತೆಗೆಸಿಕೊಂಡಿರುವ ಫೋಟೊಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಶ್ರೀನಗರದ ವರೆಗೂ ಸಾಗಲಿದೆ ಯಾತ್ರೆ
ತಮಿಳು ನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕಾಶ್ಮೀರದ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳಲಿದೆ. ಸುಮಾರು 3500 ಕಿಮೀ ದೂರವನ್ನು ಯಾತ್ರೆ ಕ್ರಮಿಸಲಿದೆ. ಈಗಾಗಲೇ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣಗಳಲ್ಲಿ ಯಾತ್ರೆ ಕ್ರಮಿಸಿದೆ.