ಮೌನ ಮುರಿದ ಪ್ರಧಾನಿ ನೀರವ್ ಮೋದಿ ಹಗರಣದ ಬಗ್ಗೆ ಹೇಳಿದ್ದೇನು?
Recommended Video
ನವದೆಹಲಿ, ಫೆಬ್ರವರಿ 24: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಉದ್ಯಮಿ ನೀರವ್ ಮೋದಿ ಎಸಗಿರುವ ವಂಚನೆ ಬಗ್ಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ.
ಹಣಕಾಸಿನ ವ್ಯವಹಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಣವನ್ನು ಲೂಟಿ ಮಾಡುವವರನ್ನು ಬಿಡುವುದಿಲ್ಲ ಎಂದು ಅಬ್ಬರಿಸಿದ್ದಾರೆ. ಮಾತ್ರವಲ್ಲ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ಮೇಲೆ ನಿಗಾ ಇಡುವ ಸಂಸ್ಥೆಗಳು ತಮ್ಮ ಕೆಲಸವನ್ನು ಬದ್ಧತೆಯಿಂದ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
'ಲೂಟಿ ಮಾಡಿ ಪರಾರಿಯಾಗಿ' ಇದು ಮೋದಿ ಸರ್ಕಾರದ ನೀತಿ: ಕಾಂಗ್ರೆಸ್ ಕಿಡಿ
ಕಠಿಣ ಕ್ರಮ ಕೈಗೊಂಡಿದ್ದೇವೆ
"ಹಣಕಾಸಿನ ವ್ಯವಹಾರಗಳ ವಿರುದ್ಧ ನಮ್ಮ ಸರಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಮತ್ತು ಮುಂದೆಯೂ ಈ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ," ಎಂದು ಜಾಗತಿಕ ಉದ್ಯಮ ಶೃಂಗಸಭೆಯಲ್ಲಿ ಅವರು ಹೇಳಿದ್ದಾರೆ.
ಲೂಟಿ ಸಹಿಸುವುದಿಲ್ಲ
ಸಾರ್ವಜನಿಕರ ಹಣವನ್ನು ಲೂಟಿ ಮಾಡುವುದನ್ನು ವ್ಯವಸ್ಥೆ ಸಹಿಸುವುದಿಲ್ಲ ಎಂದು ಅವರು ಕಟುವಾಗಿ ಹೇಳಿದ್ದಾರೆ. ಆದರೆ ಪ್ರಧಾನಿಯಾದಾಗಿನಿಂದಲೂ ಇದೇ ಮಾತನ್ನು ಅವರು ಹೇಳುತ್ತಲೇ ಇದ್ದಾರೆ. ಆದರೆ ನೀರವ್ ಮೋದಿ ಮಾತ್ರ ದೇಶ ಬಿಟ್ಟಿದ್ದಾರೆ.
ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ
ಪರೋಕ್ಷ ಎಚ್ಚರಿಕೆ
ವಂಚಕ ನೀರವ್ ಮೋದಿಯಾಗಲಿ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹೆಸರನ್ನಾಗಲಿ ಉಲ್ಲೇಖಿಸದ ಪ್ರಧಾನಿ ನರೇಂದ್ರ ಮೋದಿ ಹಣಕಾಸು ಸಂಸ್ಥೆಗಳು, ಲೆಕ್ಕಪರಿಶೋಧಕರು, ನಿಯಂತ್ರಕರು ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಬೆಚ್ಚಿ ಬೀಳಿಸುತ್ತಿದೆ ಹಗರಣ
ನೀರವ್ ಮೋದಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ರೊಟೊಮ್ಯಾಕ್ ಪೆನ್ ಕಂಪನಿಯ ಹಗರಣ ಬೆಳಕಿಗೆ ಬಂತು. ಬರೋಬ್ಬರಿ 3,600 ಕೋಟಿಗೂ ಹೆಚ್ಚು ಮೊತ್ತದ ಹಗರಣ ಇದಾಗಿತ್ತು. ಇದೀಗ ಇನ್ನೊಂದು ಕಡೆ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 389.85 ಕೋಟಿ ರೂಪಾಯಿ ವಂಚಿಸಿದ ಮತ್ತೋರ್ವ ವಜ್ರದ ರಫ್ತುದಾರನ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಹೀಗೆ ದಿನಕ್ಕೊಂದು ಹಗರಣಗಳು ಹೊರ ಬೀಳುತ್ತಿವೆ.