ಪೊರಕೆ ಪಕ್ಷ 100 ಕೋಟಿ, ಕಮಲ ಪಕ್ಷ 250 ಕೋಟಿ
ಬೆಂಗಳೂರು, ಜ.17: ಪೊರಕೆ ಹಿಡಿದುಕೊಂಡು ಆಮ್ ಆದ್ಮಿ ಪಕ್ಷ 19 ಕೋಟಿ ರು ಪಾರ್ಟಿ ಫಂಡ್ ಪಡೆದು ದೆಹಲಿ ಗದ್ದುಗೆಗೇರಿದ ಮೇಲೆ ಕಮಲ ಪಕ್ಷ ಕೂಡಾ ತನ್ನ ಚುನಾವಣಾ ನೀತಿ ಬದಲಾಯಿಸಿಕೊಂಡಿದೆ. ಇತ್ತೀಚೆಗೆ ಶುರುಮಾಡಿದ 'ಪ್ರಧಾನಿ ಪಟ್ಟಕ್ಕೆ ಮೋದಿ' ಎಂಬ ಪಕ್ಷಕ್ಕೆ ದೇಣಿಗೆ ಸಂಗ್ರಹ ಮಾಡುವ ಪ್ರಕ್ರಿಯೆಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಮೂಲಗಳ ಪ್ರಕಾರ ಬಿಜೆಪಿ ಸರಿ ಸುಮಾರು 250 ಕೋಟಿ ರು ಗಳನ್ನು ಸಾರ್ವಜನಿಕರಿಂದ ಪಡೆಯುವ ಯೋಜನೆ ಹಾಕಿಕೊಂಡಿದೆಯಂತೆ.
'ಒಂದು ನೋಟು ಒಂದು ಮತ' ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಪಾರ್ಟಿ ಫಂಡ್ ಗಾಗಿ 10 ರಿಂದ 1000 ರು ತನಕ ನಿಮ್ಮಚ್ಛೆಯಂತೆ ದೇಣಿಗೆ ನೀಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದರು. ಹಣ ನೀಡಿದ ಮೇಲೆ ಮತದಾರರಿಗೆ ಎಸ್ಎಂಎಸ್ ಹಾಗೂ ಇಮೇಲ್ ಮೂಲಕ ರಸೀತಿ ನೀಡಲಾಗುತ್ತದೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ವೆಂಕಯ್ಯ ನಾಯ್ಡು ಹೇಳಿದ್ದರು.
ನಿಧಿ ಸಂಗ್ರಹಣೆ, ಪ್ರಚಾರ ತಂಡ ರಚನೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಬಿಜೆಪಿ ಅನುಸರಿಸುತ್ತಿದೆ ಎಂಬ ಮಾತನ್ನು ಬಿಜೆಪಿ ಹಿರಿಯ ನಾಯಕರು ಅಲ್ಲಗೆಳೆದಿದ್ದಾರೆ.[ಪ್ರೇರೇಪಿಸುವ ನರೇಂದ್ರ ಮೋದಿ ನುಡಿಮುತ್ತು]

ನಮಗೆ ಎಎಪಿ ಮಾದರಿಯಲ್ಲ: ಬಿಜೆಪಿ ಸ್ಪಷ್ಟನೆ
ದೆಹಲಿ ಪಟ್ಟಕ್ಕೇರಲು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ 19 ಕೋಟಿ ರು ವ್ಯಯಿಸಿತ್ತು. ಕಾಂಗ್ರೆಸ್ 35 ಕೋಟಿ ರು ಖರ್ಚು ಮಾಡಿತ್ತು. ಬಿಜೆಪಿ 24 ಕೋಟಿ ರು ಸುರಿದರೂ ಕುರ್ಚಿ ಗಿಟ್ಟಲಿಲ್ಲ. ಎಎಪಿ ದೇಣಿಗೆ ಸಂಗ್ರಹ ಮಾದರಿಯನ್ನೇ ಈಗ ಬಿಜೆಪಿ ಅನುಸರಿಸುತ್ತಿರುವ ಬಗ್ಗೆ ಸುದ್ದಿ ಹಬ್ಬಿದೆ.
ಆದರೆ, ನಿಧಿ ಸಂಗ್ರಹಣೆ ಅಭಿಯಾನದಲ್ಲಿ ಎಎಪಿ ಮಾದರಿಯಲ್ಲ ಎಂದು ಬಿಜೆಪಿ ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.ಇದು ಎಎಪಿಯಿಂದ ಕಾಪಿ ಹೋಡೆದಿದ್ದಲ್ಲ. ಆರೆಸ್ಸೆಸ್ ನಲ್ಲಿ ಈ ರೀತಿ ದೇಣಿಗೆ ಸಂಗ್ರಹ ಮಾಡಿ ನಮಗೆ ಅಭ್ಯಾಸವಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಹಣ ಸಂಗ್ರಹಕ್ಕೆ ಐಐಟಿಯ ಹಳೆ ವಿದ್ಯಾರ್ಥಿಗಳು
ಬಿಜೆಪಿ ಈಗ ಹಣ ಸಂಗ್ರಹಕ್ಕೆ ಐಐಟಿಯ ಹಳೆ ವಿದ್ಯಾರ್ಥಿಗಳ ಗುಂಪನ್ನು ಬಳಸಿಕೊಳ್ಳುತ್ತಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನಗದು ರೂಪದಲ್ಲಿ ಬೇಕಾದರೂ ದಾನ ನೀಡಿ ಎಂದು ಅಭಿಯಾನ ನಡೆಸಲಾಗುತ್ತಿದೆ. ಇದರ ಜತೆಗೆ ಎಎಪಿ ಗೆ ಬಲ ತಂದ ಮನೆ ಮನೆ ಪ್ರಚಾರದ ಮಾದರಿಯಲ್ಲೇ ಬಿಜೆಪಿ ಕೂಡಾ ತನ್ನ ಶಾಸಕರು, ಸ್ಥಳೀಯ ಮುಖಂಡರನ್ನು ಬಡಿದೆಬ್ಬಿಸಿದೆ. ಮನೆ ಮನೆಗೆ ತೆರಳಿ ಮುಂದಿನ ಪ್ರಧಾನಿ ಮೋದಿಗಾಗಿ ದೇಣಿಗೆ ಸಂಗ್ರಹ ಮಾಡುವಂತೆ ಸೂಚಿಸಿದೆ.

ಹೊಸ ತಂಡ ಕಟ್ಟುತ್ತಿರುವ ಬಿಜೆಪಿ
ಬಿಜೆಪಿ ಈಗ ತನ್ನ ರಾಜ ತಾಂತ್ರಿಕ ಘಟಕ(Technicrat cell)ಕ್ಕೆ ಐಐಟಿ ರೂರ್ಕಿ ಅಲುಮ್ನಿ ಸುಬೋಧ್ ಶರ್ಮರನ್ನು ಸೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ಅವರ ಸಹ ಐಐಟಿ ಅಲುಮ್ನಿ ಕೆಕೆ ಶರ್ಮ, ಎ2ಜಡ್ ಸಮೂಹದ ಸಿಇಒ ಅಶೋಕ್ ಸೈನಿ, ತಾಂತ್ರಿಕ ಸಲಹೆಗಾರ ವಿಕಾಸ್ ಜಿ, ಐಐಟಿಯನ್, ಉದ್ಯಮಿ ಶಲಾಬ್ ಶರ್ಮ ಮುಂತಾದ ಖ್ಯಾತನಾಮರನ್ನು ಬಿಜೆಪಿ ಸೆಳೆದುಕೊಂಡಿದೆ.
ಇವರ ಜತೆಗೆ ಏರ್ ವೈಸ್ ಮಾರ್ಷಲ್ ಆರ್ ಕೆ ಮೋಹನ್, ಎ ಮೊಹಂತಿ, ಮಾಜಿ ಐಪಿಎಸ್ ಅಧಿಕಾರಿ ಆರ್ ಡಿ ಗುಪ್ತ ಕೂಡಾ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ.
ಚುನಾವಣೆಗೆ ಎಎಪಿ ಗುರಿ 100 ಕೋಟಿ ರು?
ಸುಮಾರು 309 ಜಿಲ್ಲಾ ಘಟಕಗಳನ್ನು ಹೊಂದಿರುವ ಆಮ್ ಆದ್ಮಿ ಪಕ್ಷ ದೆಹಲಿ ಅಸೆಂಬ್ಲಿ ಚುನಾವಣೆಗೆ ಖರ್ಚು ಮಾಡಿದ ಮೊತ್ತ(ಸುಮಾರು 20 ಕೋಟಿ ರು)ದ ಐದು ಪಟ್ಟು ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ. ಸುಮಾರು 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, 100 ಕೋಟಿ ರು ಖರ್ಚು ವೆಚ್ಚಕ್ಕೆ ಎಎಪಿ ಮುಂದಾಗಿದೆ ಎಂದು ಆಮ್ ಆದ್ಮಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ನಿಯಮ
ಅಂದ ಹಾಗೆ, ಕೇಂದ್ರ ಚುನಾವಣಾ ಆಯೋಗದ ನಿಯಮದ ಪ್ರಕಾರ ಲೋಕಸಭೆ ಚುನಾವಣೆಯ ಅಭ್ಯರ್ಥಿ 25 ರಿಂದ 40 ಲಕ್ಷ ರು ತನಕ ಮಾತ್ರ ಚುನಾವಣೆಗೆ ಖರ್ಚು ಮಾಡಬಹುದಾಗಿದೆ. ಆದರೆ, ಜನ ಸಾಮಾನ್ಯರ ಪಕ್ಷವೇ ಒಬ್ಬ ಅಭ್ಯರ್ಥಿಗೆ 1 ಕೋಟಿ ರು ನಂತೆ ಹಣ ಎತ್ತಿಡಲು ಸಿದ್ದತೆ ನಡೆಸಿದೆ ಎಂದ ಮೇಲೆ ಬಿಜೆಪಿ, ಕಾಂಗ್ರೆಸ್ ನಿಧಿ ಸಂಗ್ರಹಣೆ ಜೋರಾಗುವುದರಲ್ಲಿ ಆಶ್ಚರ್ಯವೇನಿಲ್ಲ.












Click it and Unblock the Notifications