"ಹೊರಡುವುದೇ ಒಳ್ಳೇದು"; ಅತಂತ್ರದ ನಡುವೆ ನಗರ ಬಿಡುತ್ತಿರುವ ಕಾರ್ಮಿಕರು
ನವದೆಹಲಿ, ಏಪ್ರಿಲ್ 8: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಎರಡು ವಾರಗಳಿಂದೀಚೆ ಕೊರೊನಾ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡಿದೆ. ಎರಡು ದಿನಗಳಿಂದ ದಿನನಿತ್ಯದ ಕೊರೊನಾ ಪ್ರಕರಣ ಲಕ್ಷ ಮೀರುತ್ತಿದೆ. ಕೆಲವು ರಾಜ್ಯಗಳು ಒಂದೊಂದಾಗಿ ನೈಟ್ ಕರ್ಫ್ಯೂ, ಲಾಕ್ ಡೌನ್ ನಿಷೇಧ ಹೇರುತ್ತಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ದೆಹಲಿ, ಮುಂಬೈನಲ್ಲಿನ ವಲಸೆ ಕಾರ್ಮಿಕರಿಗೆ ಮತ್ತೆ ಅತಂತ್ರ ಕಾಡತೊಡಗಿದೆ. ಯಾವ ಸಮಯದಲ್ಲಾದರೂ ಲಾಕ್ಡೌನ್ ಹೇರಬಹುದು ಎಂಬ ಭೀತಿಯಿಂದ ಮತ್ತೆ ತಮ್ಮ ತಮ್ಮ ಊರು ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ರೈಲುಗಳು, ಬಸ್ಗಳಲ್ಲಿ ಕಾರ್ಮಿಕರು ಊರುಗಳಿಗೆ ಮರಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಮುಂದೆ ಓದಿ...

ಕಾರ್ಮಿಕರನ್ನು ಕಾಡುತ್ತಿರುವ ಲಾಕ್ಡೌನ್ ಭಯ
ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ದೆಹಲಿಯಲ್ಲಿಯೂ ಬುಧವಾರ ನೈಟ್ ಕರ್ಪ್ಯೂ ವಿಧಿಸಿದೆ. ಯಾವಾಗ ಬೇಕಾದರೂ ಲಾಕ್ಡೌನ್ ವಿಧಿಸಬಹುದಾದ ಸಂಭವವಿದೆ ಎಂದು ಊಹಿಸಿರುವ ಕಾರ್ಮಿಕರು ಮುನ್ನವೇ ಊರುಗಳಿಗೆ ಮರಳುತ್ತಿದ್ದಾರೆ. ಕಳೆದ ಬಾರಿಯಂತೆ ಹಣ, ಆಹಾರವಿಲ್ಲದಂಥ ಪರಿಸ್ಥಿತಿಗೆ ಸಿಲುಕಲು ಸಾಧ್ಯವಿಲ್ಲ. ಹೀಗಾಗಿ ಅಂಥ ಪರಿಸ್ಥಿತಿ ಬರುವ ಮುನ್ನವೇ ಎಚ್ಚೆತ್ತುಕೊಂಡು ಊರಿನತ್ತ ಮುಖ ಮಾಡಿದ್ದೇವೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

ಆಹಾರ, ಹಣವಿಲ್ಲದೇ ಪರದಾಡುವ ಸ್ಥಿತಿ ಬೇಡವೇ ಬೇಡ
ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಪಂಜಾಬ್ ಹಾಗೂ ಇನ್ನಿತರ ರಾಜ್ಯಗಳು ನೈಟ್ ಕರ್ಫ್ಯೂ ಹೇರಿವೆ. ಕೊರೊನಾ ಸೋಂಕಿಗಿಂತ, ತಾವು ಎಲ್ಲಿ ಲಾಕ್ಡೌನ್ ನಡುವೆ ಸಿಲುಕಿಕೊಳ್ಳುತ್ತೇವೆಯೋ ಎಂಬ ಭೀತಿಯೇ ಕಾರ್ಮಿಕರನ್ನು ಹೆಚ್ಚುಕಾಡುತ್ತಿದೆ. ಆಹಾರ, ಹಣವಿಲ್ಲದೇ ಪರದಾಡುವ ಸ್ಥಿತಿ ಬೇಡವೇ ಬೇಡ ಎನ್ನುತ್ತಿರುವ ಕಾರ್ಮಿಕರು ಕಳೆದ ವರ್ಷದ ಅನುಭವವನ್ನು ಮುಂದಿಟ್ಟುಕೊಂಡು ಬೇಗ ಬೇಗ ಊರುಗಳಿಗೆ ತೆರಳುತ್ತಿದ್ದಾರೆ.

"ಊರು ಬಿಡುವುದೇ ಒಳ್ಳೆಯದು"
ಲಾಕ್ಡೌನ್ ಆಗುತ್ತದೋ ಇಲ್ಲವೋ ತಿಳಿದಿಲ್ಲ. ಆದರೆ ಮತ್ತೆ ಇಲ್ಲಿ ಸಿಲುಕಿಕೊಂಡು ಒದ್ದಾಡುವುದಕ್ಕಿಂತ ಊರು ಬಿಡುವುದೇ ಲೇಸು ಎಂದು ಕಾರ್ಮಿಕರು ದೆಹಲಿಯ ಆನಂದ ವಿಹಾರ ಟರ್ಮಿನಲ್ನಲ್ಲಿ ಊರಿಗೆ ಹೊರಡಲು ನಿಂತಿದ್ದಾರೆ. ಈ ನಡುವೆ ಪುಣೆಯಲ್ಲಿ ಹೋಟೆಲ್, ರೆಸ್ಟೊರೆಂಟ್ಗಳನ್ನು ಮುಚ್ಚಲು ಆದೇಶಿಸುತ್ತಿದ್ದಂತೆ ಸುಮಾರು 50% ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ ಎಂದು ಪುಣೆ ಹೋಟೆಲ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ ತಿಳಿಸಿದ್ದಾರೆ.

ನಡೆದುಕೊಂಡೇ ಊರು ತಲುಪಿದ್ದ ಕಾರ್ಮಿಕರು
ಕಳೆದ ವರ್ಷ ದೇಶಾದ್ಯಂತ ಇದ್ದಕ್ಕಿದ್ದಂತೆ ಲಾಕ್ಡೌನ್ ಹೇರಿದ ಕಾರಣ ಸಾವಿರಾರು ಕಾರ್ಮಿಕರು ನೂರಾರು ಕಿ.ಮೀ ದೂರವನ್ನು ನಡೆದುಕೊಂಡೇ ಕ್ರಮಿಸಿದ್ದರು. ತಮ್ಮ ಕೆಲಸವನ್ನೂ ಕಳೆದುಕೊಂಡು ಕುಟುಂಬ ಸಮೇತ ಕಾಲ್ನಡಿಗೆಯಲ್ಲೇ ಹೊರಟಿದ್ದರು.
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಎರಡನೇ ದಿನವೂ ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ 1,26,789 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ 59,258 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೂ 1,18,51,393 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 685 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,66,862 ಆಗಿದೆ.












Click it and Unblock the Notifications