ಎರಡು ವಾರವಾದರೂ ಪತ್ತೆಯಾಗದ ಮೇಘಾಲಯದ ಗಣಿ ಕಾರ್ಮಿಕರು
ಗುವಾಹಟಿ, ಡಿಸೆಂಬರ್ 25 : ಇಡೀ ದೇಶ ಕ್ರಿಸ್ಮಸ್ ಹಬ್ಬ ಮತ್ತು ವರ್ಷಾಂತ್ಯದ ಸಂಭ್ರಮ, ಸಡಗರದಲ್ಲಿ ಮುಳುಗಿರುವಾಗ ಕಳೆದೆರಡು ವಾರಗಳಿಂದ ಮೇಘಾಲಯದ ಗಣಿಯಲ್ಲಿ ಸಿಲುಕಿರುವ 15 ಜನರು ಜೀವಂತವಾಗಿ ಸಿಗಲೆಂಬ ಆಶಯದಿಂದ ಹುಡುಕಾಟ ಭರದಿಂದ ಸಾಗಿದೆ.
ರಾಜ್ಯದ ಪೂರ್ವ ಭಾಗದಲ್ಲಿರುವ ಜೈಂಟಿಯಾ ಹಿಲ್ಸ್ ನಲ್ಲಿರುವ ಅಕ್ರಮವಾಗಿ ಆರಂಭಿಸಲಾಗಿರುವ ಗಣಿಯಲ್ಲಿ ಡಿಸೆಂಬರ್ 13ರಿಂದಲೇ 15 ಜನರು ನಾಪತ್ತೆಯಾಗಿದ್ದಾರೆ. ಹತ್ತಿರವಿರುವ ನದಿಗಳು ತುಂಬಿ ಹರಿಯುತ್ತಿದ್ದು, ಗಣಿಯಲ್ಲಿ ನುಗ್ಗಿದ್ದರಿಂದ ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
25 ಹಾರ್ಸ್ ಪವರ್ ಇರುವ 2 ಪಂಪ್ ಗಳನ್ನು ನೀರೆತ್ತಲು ಬಳಸಲಾಗಿದೆಯಾದರೂ ಅವು ನಿಷ್ಪ್ರಯೋಜಕವಾಗಿವೆ. ಹೀಗಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (ಎನ್ಡಿಆರ್ಎಫ್) 100 ಹಾರ್ಸ್ ಪವರ್ ಇರುವ ಪಂಪ್ ಗಳಿಗಾಗಿ ಕಾಯುತ್ತಿವೆ. ಇವನ್ನು ರಾಜ್ಯ ಇನ್ನೂ ಕಳುಹಿಸಬೇಕಾಗಿದೆ.

ಬದುಕಿದವರಾಗಲಿ, ಸತ್ತವರಾಗಲಿ ಯಾರನ್ನೂ ಇಲ್ಲಿಯವರೆಗೆ ನಾವು ಪತ್ತೆ ಮಾಡಿಲ್ಲ. ಈ ರಕ್ಷಣಾ ಕಾರ್ಯದಲ್ಲಿ ರಾಜ್ಯದ ಸಹಕಾರವೂ ಅಗತ್ಯವಾಗಿ ಬೇಕಾಗಿದೆ ಎಂದು ಎನ್ಡಿಆರ್ಎಫ್ನ 1ನೇ ಬಟಾಲಿಯನ್ ನ ಎಸ್ಕೆ ಶಾಸ್ತ್ರಿ ಎಂಬುವವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲಿ ಸಿಲುಕಿರುವ ಕಾರ್ಮಿಕರನ್ನು ಸಂಪರ್ಕಿಸಲು ಕೂಡ ಸಾಧ್ಯವಾಗಿಲ್ಲ. ಆದರೆ, ಆ ಕಾರ್ಮಿಕರ ಕುಟುಂಬದವರು ಆತಂಕದಿಂದ ಕಾಯುತ್ತಿದ್ದಾರೆ. ಗಣಿಯಲ್ಲಿ ಈಗಾಗಲೆ 70 ಅಡಿಗಳಷ್ಟು ನೀರು ತುಂಬಿದೆ. ರಕ್ಷಣೆಯಲ್ಲಿ ತೊಡಗಿರುವವರು 40 ಅಡಿ ಇರುವ ನೀರಿನಲ್ಲಿ ಇಳಿದು ರಕ್ಷಣಾ ಕಾರ್ಯದಲ್ಲಿ ತೊಡಗಲು ಸಾಧ್ಯವಿರುವುದರಿಂದ ನೀರನ್ನು ಹೊರತೆಗೆಯಲು ಭಾರೀ ಪ್ರಯತ್ನ ನಡೆದಿದೆ.
ಇಲಿಯ ಬಿಲದಂಥ ಗಣಿಯ ಬಗ್ಗೆ ಯಾವುದೇ ನಕ್ಷೆ ಇಲ್ಲದಿರುವ ಕಾರಣ ರಕ್ಷಣಾ ಕಾರ್ಯ ಕುಂಠಿತವಾಗಿ ಸಾಗುತ್ತಿದೆ. ಈ ದುರ್ಘಟನೆಯ ನಡೆದಿದ್ದಾಗಲೇ 21 ವರ್ಷದ ಗಣಿಗಾರನೊಬ್ಬ, ನೀರು ನುಗ್ಗಿದ್ದರೂ ಭೂಮಿಯಿಂದ ಕೇವಲ 5 ಅಡಿ ದೂರದಲ್ಲಿದ್ದಾಗ ಪವಾಡಸದೃಶ ಪಾರಾಗಿ ಬಂದಿದ್ದ.
ಗಣಿಗಾರಿಕೆಯಿಂದ ನದಿಯ ನೀರು ಕಲುಷಿತವಾಗುತ್ತಿದ್ದ ಕಾರಣ 2014ರಲ್ಲಿಯೇ ರಾಷ್ಟ್ರೀಯ ಹಸಿರು ಟ್ರಿಬ್ಯುನಲ್ ಗಣಿಗಾರಿಕೆಯನ್ನು ನಿಷೇಧಿಸಿತ್ತು. ಆದರೆ, ಸ್ಥಳೀಯರು ಭಾರೀ ಅಪಾಯಕಾರಿ ಆಗಿರುವ ಈ ಇಲಿ ಬಿಲದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಲೇ ಇದ್ದಾರೆ.
ಜುಲೈನಲ್ಲಿ ಥೈಲ್ಯಾಂಡ್ ನಲ್ಲಿ ಸ್ಥಳೀಯ ಜ್ಯೂನಿಯರ್ ಫುಟ್ಬಾಲ್ ತಂಡದ ಆಟಗಾರರು ಇಲ್ಲದ ಸಾಹಸ ಮಾಡಲು ಹೋಗಿ ಗುಹೆಯೊಂದರಲ್ಲಿ ಸಿಲುಕಿದ್ದರು. ಅಲ್ಲಿ ಕೂಡ ನೀರು ನುಗ್ಗಿದ್ದರಿಂದ ಎರಡು ವಾರಗಳ ಕಾಲ ಆಹಾರವಿಲ್ಲದೆಯೂ, ಯೋಗದ ಸಹಾಯದಿಂದ ಬದುಕಿ ಉಳಿದಿದ್ದರು. ಈಜುಪಟುಗಳಿಂದ ಅವರನ್ನು ಪಾರು ಮಾಡಲಾಗಿತ್ತು. ಈಗ ಇಲ್ಲಿಯೂ ಇಂಥದೇ ಪವಾಡ ನಡೆಯಬೇಕಿದೆ.












Click it and Unblock the Notifications