ಮಾಯಾವತಿ ಜೊತೆ ಮತ್ತದೇ ಮಿಸ್ಟೇಕ್ ಮಾಡುತ್ತಿರುವ ರಾಹುಲ್ ಗಾಂಧಿ
ಬೆಂಗಳೂರು, ಅಕ್ಟೋಬರ್ 04 : ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸಘಡ... ಈ ಮೂರು ರಾಜ್ಯಗಳಲ್ಲಿ ಬಹುಜನ ಸಮಾಜವಾದಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ಅಸ್ತಿತ್ವವೇ ಇಲ್ಲ, ಇನ್ನು ಏಕಾಂಗಿಯಾಗಿ ಸರಕಾರ ರಚಿಸುವ ಮಾತು ದೂರವೇ ಉಳಿಯಿತು.
ಆದರೆ, ಈ ಮೂರು ರಾಜ್ಯಗಳಲ್ಲಿಯೂ, ಹಿಂದೆ ಅಧಿಕಾರದಲ್ಲಿದ್ದೂ ಈಗ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಬಹುಜನ ಸಮಾಜವಾದಿ ಪಕ್ಷದ ಅಧಿನಾಯಕಿ ಮಿಸ್ ಮಾಯಾವತಿ ಅವರು ಗಿರಿಗಿಟ್ಲೆ ಆಡಿಸುತ್ತಿದ್ದಾರೆ. ಮೂರೂ ರಾಜ್ಯಗಳಲ್ಲಿ ಮೈತ್ರಿಗೆ ಬೇಡ ಎಂದು ಹೇಳಿ ಭಾರೀ ಹೊಡೆತ ಕೊಟ್ಟಿದ್ದಾರೆ.
ಮಧ್ಯಪ್ರದೇಶದಲ್ಲಿ 227 ಸೀಟುಗಳಲ್ಲಿ ಬಹುಜನ ಸಮಾಜವಾದಿ ಪಕ್ಷ 2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದು ಕೇವಲ 4 ಸೀಟು. ರಾಜಸ್ತಾನದಲ್ಲಿ 200 ಕ್ಷೇತ್ರಗಳಲ್ಲಿ ಬಿಎಸ್ಪಿ ತನ್ನ ಮಡಿಲಿಗೆ ಹಾಕಿಕೊಂಡಿದ್ದು ಕೇವಲ ಒಂದೇ ಒಂದು ಕ್ಷೇತ್ರ. ಛತ್ತೀಸಘಡದಲ್ಲಿಯೂ ಬಿಎಸ್ಪಿದು ಅದೇ ಕಥೆ. 90 ಸೀಟುಗಳಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ಒಂದು ಮಾತ್ರ.
ಕಥೆ ಹೀಗಿರುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಬಹುಜನ ಸಮಾಜವಾದಿ ಪಕ್ಷದೊಡನೆ ಕೈಜೋಡಿಸಲು ಮುಂದಾಗಿದ್ದರು. ಆದರೆ, ರಾಜಕೀಯದಲ್ಲಿ ಚತುರಮತಿಯಾಗಿರುವ ಮಾಯಾವತಿ ಅವರು ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲ ಎಂದು ಹೇಳಿ ಭರ್ಜರಿ ಆಘಾತ ನೀಡಿದ್ದಾರೆ.
ಎಲ್ಲಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ರಾಹುಲ್ ಗಾಂಧಿಯವರು ಹಿಂದೆ ರಾಜಸ್ತಾನ ಮತ್ತು ಮಧ್ಯಪ್ರದೇಶಗಳೆರಡರಲ್ಲಿ ಆಡಳಿತ ನಡೆಸಿಯೂ ಈಗ ಮಾಯಾವತಿ ಅವರ ಪಕ್ಷದೊಡನೆ ಮೈತ್ರಿಗೆ ಮುಂದಾಗಿರುವುದು ಅವರ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ. ಹಾಗೆ ನೋಡಿದರೆ ರಾಜಸ್ತಾನದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸಾಕಷ್ಟು ಪ್ರಬಲವಾಗಿಯೂ ಇದೆ.

ಶತಾಯಗತಾಯ ಮೈತ್ರಿಗೆ ಯತ್ನಿಸುತ್ತಿರುವ ಗಾಂಧಿ
ಹಲವಾರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಮತ್ತು ಅಧಿಕಾರ ಸಿಗದೆ ವಿಲಿವಿಲಿ ಒದ್ದಾಡುತ್ತಿರುವ ಕಾಂಗ್ರೆಸ್ ಗೆ ಈಗ ಅಗತ್ಯವಾಗಿ ಬಹುಜನ ಸಮಾಜವಾದಿ ಮತ್ತಿತರ ಪಕ್ಷದ ಬೆಂಬಲ ಬೇಕೇಬೇಕಾಗಿದೆ. ಈ ಮೂರು ರಾಜ್ಯಗಳ ಚುನಾವಣೆ ಫಲಿತಾಂಶ 2019ರ ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿಯೂ ಆಗಲಿರುವುದರಿಂದ ಶತಾಯಗತಾಯ ಇತರ ಪಕ್ಷಗಳೊಂದಿಗೆ ಮೈತ್ರಿಗೆ ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಅವರಿಗೆ ಬಿಎಸ್ಪಿ ಮೈತ್ರಿ ಅತ್ಯಂತ ಮಹತ್ವದ್ದಾಗಿದೆ.

ಕರ್ನಾಟಕದಲ್ಲಿ ಎಡವಿ ಬಿದ್ದಿದ್ದಾರೆ ರಾಹುಲ್
ಕರ್ನಾಟಕದಲ್ಲಿ ಆಗಿದ್ದೇನೆಂಬುದು ರಾಹುಲ್ ಗಾಂಧಿ ಅವರ ಕಣ್ಣ ಮುಂದೆಯೇ ಇದೆ. ಚುನಾವಣೆಗೂ ಮುನ್ನ ಯಾವುದೇ ಪಕ್ಷದೊಡನೆ ಮೈತ್ರಿಗೆ ಕಾಂಗ್ರೆಸ್ ಮುಂದಾಗಲಿಲ್ಲ. ಏಕಾಂಗಿಯಾಗಿ ಗೆದ್ದೇ ಗೆಲ್ಲುತ್ತೇನೆಂಬ ಅತಿಯಾದ ಆತ್ಮವಿಶ್ವಾಸದಿಂದ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಅಧಿಕಾರ ನೀಡಿ ಮುಗ್ಗರಿಸಿ ಬಿದ್ದರು. ನಂತರ ಬಹುಜನ ಸಮಾಜವಾದಿ ಪಕ್ಷದೊಡನೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷದ ಜೊತೆ ಕೈಜೋಡಿಸಿ ಆಡಳಿತ ನಡೆಸುವ ಅನಿವಾರ್ಯಕ್ಕೂ ಒಳಗಾಗಬೇಕಾಯಿತು. ಈಗ ರಾಹುಲ್ ಗಾಂಧಿ ಅವರು, ಸ್ಥಳೀಯ ನಾಯಕರ ಜಿಗುಟಿಗೆ ಬಿದ್ದು ಅದೇ ತಪ್ಪನ್ನು ಎಸಗುತ್ತಿದ್ದಾರಾ? ಕಾಲವೇ ಉತ್ತರ ನೀಡಲಿದೆ.

ಗಾಯದ ಮೇಲೆ ಉಪ್ಪು ಸುರಿದ ಮಾಯಾವತಿ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತು ಅದರ ನಾಯಕರನ್ನು ತೀವ್ರವಾಗಿ ಟೀಕಿಸುತ್ತಿದ್ದ ಜಾತ್ಯತೀತ ಜನತಾದಳದ ಜೊತೆ ಮಾಯಾವತಿ ಅವರು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ಸಿಗೆ ಟಾಂಗ್ ನೀಡಿದ್ದರು. ಛತ್ತೀಸಘಡದಲ್ಲಿ ಕೂಡ ಕಾಂಗ್ರೆಸ್ ನಿಂದ ಸಿಡಿದುಹೋಗಿರುವ, ಛತ್ತೀಸಘಡದ ಮೊದಲನೇ ಮುಖ್ಯಮಂತ್ರಿ ಅಜಿತ್ ಜೋಗಿ ಅವರೊಂದಿಗೆ ಮಾಯಾವತಿ ಅವರು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಗಾಯದ ಮೇಲೆ ಉಪ್ಪು ಸವರಿದ್ದಾರೆ. ಅಲ್ಲದೆ, ಕಾಂಗ್ರೆಸ್ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನೂ ಸ್ಪಷ್ಟವಾಗಿ ಸಾರಿದ್ದಾರೆ. ಆದರೆ, ಕಾಂಗ್ರೆಸ್ ಮಾಯಾವತಿಯ ಮೈತ್ರಿಗೆ ಪ್ರಯತ್ನಿಸುತ್ತಲೇ ಇದೆ.

ದಿಗ್ವಿಜಯ್ ಮೇಲೆ ಮಾಯಾ ತೀವ್ರ ವಾಗ್ದಾಳಿ
ಕಾಂಗ್ರೆಸ್ ಪಕ್ಷ ಜಾತಿವಾದಿ ಎಂದು ಟೀಕಿಸಿರುವ ಮಾಯಾವತಿ ಅವರು ಕಾಂಗ್ರೆಸ್ ಪಕ್ಷವನ್ನು ದೂರವಿಡುತ್ತಲೇ ಬಂದಿದ್ದಾರೆ. ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಮಾಯಾವತಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದೇ ಮೈತ್ರಿಗೆ ಮುಳುವಾಗಿದೆ. ಇದನ್ನೇ ನೆವವಾಗಿಟ್ಟುಕೊಂಡು ಮಾಯಾವತಿ ಅವರು ದಿಗ್ವಿಜಯ್ ಮೇಲೆ ತೀವ್ರ ವಾಗ್ದಾಳಿ ಮಾಡುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಯಾವುದೇ ಚಕಾರವೆತ್ತುತ್ತಿಲ್ಲ. ಈ ಎಲ್ಲ ಕಾರಣಗಳ ಜೊತೆ ಬಿಜೆಪಿ ನಾಯಕ ಚೌಹಾಣ್ ಇಮೇಜ್ ಅಳಿಯುತ್ತಿರುವುದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ಸಿಗೆ ಮಾಯಾವತಿಯ ಮೈತ್ರಿ ಬೇಕೇಬೇಕಾಗಿದೆ.












Click it and Unblock the Notifications