ಪರಿಕ್ಕರ್ ಪ್ರಮಾಣ ವಚನಕ್ಕೆ ಅಮಿತ್ ರಾಜನಾಥ್ ನಿತಿನ್
ಪಣಜಿ, ಮಾರ್ಚ್ 13 : ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಅವರು ಮಂಗಳವಾರ ಸಂಜೆ 5.30ಕ್ಕೆ ಗೋವಾದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಬಿಜೆಪಿಯ ಹಿರಿಯ ನಾಯಕರುಗಳಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮನೋಹರ್ ಪರಿಕ್ಕರ್ ಅವರು ತಿಳಿಸಿದ್ದಾರೆ.[ಗೋವಾ ಮುಖ್ಯಮಂತ್ರಿಯಾಗಿ ಪರಿಕ್ಕರ್ ಮಂಗಳವಾರ ಪ್ರಮಾಣ]
ಕೇಂದ್ರದಲ್ಲಿ ಅತ್ಯಂತ ಮಹತ್ವದ ಹುದ್ದೆ ಅಲಂಕರಿಸಿದ್ದ ಮನೋಹರ್ ಪರಿಕ್ಕರ್ ಅವರು ರಾಜೀನಾಮೆ ಸಲ್ಲಿಸಿದ ನಂತರ, ಪಣಜಿಗೆ ಬಂದು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಡನೆ ಓಕುಳಿಯಾಟ ಆಡಿದ್ದಾರೆ. ಹಣೆಗೆ ತಿಲಕವಿಟ್ಟು ಬಣ್ಣದಾಟವಾಡಿದ ಅವರು, ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. [ಅಂತಿಮ ಫಲಿತಾಂಶ: ಗೋವಾ ಅತಂತ್ರ, ಮುಂದೇನಾಗಬಹುದು?]
2000ರಲ್ಲಿ ಮೊದಲನೇ ಬಾರಿ (ಒಂದೂವರೆ ವರ್ಷ) ಮತ್ತು 2012ರಲ್ಲಿ ಎರಡನೇ ಬಾರಿ (ಎರಡು ವರ್ಷ) ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಈಗ ಮೂರನೇ ಬಾರಿ ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ.
ಪರಿಕ್ಕರ್ ಅವರು ಕೇಂದ್ರ ರಕ್ಷಣಾ ಸಚಿವರಾಗಿ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಮುಂದಿನ ರಕ್ಷಣಾ ಸಚಿವರಾರು ಎಂಬ ಪ್ರಶ್ನೆ ಉದ್ಭವವಾಗಿದೆ. ನರೇಂದ್ರ ಮೋದಿ ಸರಕಾರದಲ್ಲಿ ಪರಿಕ್ಕರ್ ಅವರಿಗೂ ಮೊದಲು ವಿತ್ತ ಸಚಿವರಾಗಿರುವ ಅರುಣ್ ಜೇಟ್ಲಿಯವರು ಆ ಹುದ್ದೆಯನ್ನು ಅಲಂಕರಿಸಿದ್ದರು. ಇದೀಗ ಬಂದ ಮಾಹಿತಿ ಪ್ರಕಾರ, ಜೇಟ್ಲಿ ಅವರಿಗೆ ರಕ್ಷಣಾ ಖಾತೆಯ ಹುಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. [ಗೋವಾದಲ್ಲಿ ಬಿಜೆಪಿ ಬಂದ್ರೆ ಮುಖ್ಯಮಂತ್ರಿ ಯಾರು? ಪರಿಕ್ಕರ್ ನಡೆ ನಿಗೂಢ]
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಗೋವಾದಲ್ಲಿ ಹಣಬಲವೇ ಗೆದ್ದಿದೆ ಮತ್ತು ಜನರ ಶಕ್ತಿಯನ್ನು ಹೊಸಕಿ ಹಾಕಿದೆ ಎಂದು ಗೋವಾದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ವಿಶ್ಲೇಷಿಸಿದ್ದಾರೆ.