ಮನ್ ಕಿ ಬಾತ್: GST ಯಶಸ್ವಿಗೊಳಿಸಿದ ದೇಶದ ಜನತೆಗೆ ಮೋದಿಯಿಂದ ಧನ್ಯವಾದ
ನವದೆಹಲಿ, ಜುಲೈ 30: 34ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಿದರು. ಈ ವೇಳೆ ಅವರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಗುಜರಾತ್, ರಾಜಸ್ತಾನ ಮತ್ತು ಅಸ್ಸಾಂ ರಾಜ್ಯಗಳ ಜನರಿಗೆ ಸಾಂತ್ವನ ಹೇಳಿದರು. ಅಷ್ಟೇ ಅಲ್ಲದೆ ಜಿಎಸ್ಟಿ ಜಾರಿಗೆ ಸಹಕರಿಸಿದ್ದಕ್ಕೆ ದೇಶದ ಜನತೆಗೆ ಧನ್ಯವಾದಗಳನ್ನೂ ಸಮರ್ಪಿಸಿದರು.
ಮೋದಿ ಮನದ ಮಾತು ಪೋಗ್ರಾಂನಿಂದ 10 ಕೋಟಿ ರು ಆದಾಯ
ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಿ, "ಒಬ್ಬ ಬಡ ವ್ಯಕ್ತಿ ಜಿಎಸ್ಟಿ ಜಾರಿಯಿಂದ ಯಾವ ರೀತಿ ಲಾಭಗಳಾಗಿವೆ ಎಂಬುದರ ಬಗ್ಗೆ ಪತ್ರ ಬರೆದಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಜಿಎಸ್ಟಿ ಜಾರಿಯಾಗಿ ತಿಂಗಳಾಗುತ್ತಾ ಬಂದಿದ್ದು, ಅದರ ಲಾಭಗಳನ್ನು ನಾವು ನೋಡುತ್ತಿದ್ದೇವೆ. ಜಿಎಸ್ಟಿ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸಿದೆ. ಜತೆಗೆ ಒಕ್ಕೂಟ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರಕ್ಕೆ ಇದು ಅತ್ಯುತ್ತಮ ಉದಾಹರಣೆ," ಎಂದು ಹೇಳಿದ ಮೋದಿ ಜಿಎಸ್ಟಿ ಯಶಸ್ವಿಯಾಗಿ ಜಾರಿಗೊಳ್ಳುವಂತೆ ಮಾಡಿದ ದೇಶದ ಜನತೆಗೆ ಧನ್ಯವಾದ ಹೇಳಿದರು.
ಬೀಕರ ಪ್ರವಾಹದ ಬಗ್ಗೆ ಪ್ರಸ್ತಾಪ
ನಂತರ ಅವರು, "ಪ್ರವಾಹ ಪೀಡಿತ ರಾಜ್ಯಗಳನ್ನು ಗಮನಿಸುತ್ತಿದ್ದೇನೆ. ಪ್ರವಾಹಕ್ಕೊಳಗಾಗಿರುವ ರಾಜ್ಯಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ಈ ವಿಕೋಪದ ಸಂದರ್ಭದಲ್ಲಿ ವಿಮಾ ಕಂಪನಿಗಳು ಸಕ್ರಿಯವಾಗಿ ಕೆಲಸ ಮಾಡಬೇಕಿದ್ದು, ರೈತರಿಗೆ ತ್ವರಿತವಾಗಿ ವಿಮೆ ಹಣವನ್ನು ನೀಡಬೇಕಿದೆ," ಎಂದು ನರೇಂದ್ರ ಮೋದಿ ಹೇಳಿದರು.
"ಪ್ರವಾಹ ಪೀಡಿತ ರಾಜ್ಯಗಳಿಗಾಗಿ ವಾರದ 7 ದಿನ 24 ಗಂಟೆಯೂ ಪ್ರವಾಹ ನಿಯಂತ್ರಣ ಸಹಾಯವಾಣಿ ಸಂಖ್ಯೆ 1078 ಕಾರ್ಯನಿರ್ವಹಿಸುತ್ತಿವೆ. ಹವಾಮಾನ ಮುನ್ಸೂಚನಾ ವರದಿಗಳು ಲಭಿಸುತ್ತಿವೆ. ಇವುಗಳ ಬಳಕೆಯನ್ನು ನಾವು ಕಲಿಯಬೇಕಿದೆ," ಎಂದು ಹೇಳಿದ ಪ್ರಧಾನಿ, ಪ್ರವಾಹ ಪೀಡಿತ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ಈಗಾಗಲೇ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳು ಸಿದ್ಧಗೊಂಡಿವೆ ಎಂದು ಮಾಹಿತಿ ನೀಡಿದರು.
ಪ್ರವಾಹ ಪೀಡಿತ ಗುಜರಾತಿಗೆ ಮೋದಿಯಿಂದ ರೂ. 500 ಕೋಟಿ ಪರಿಹಾರ
'ಆಗಸ್ಟ್ ಕ್ರಾಂತಿ'
ನಂತರ 'ಭಾರತ ಬಿಟ್ಟು ತೊಲಗಿ' ಚಳುವಳಿ ಕುರಿತಂತೆ ಪ್ರಧಾನಿ ಮಾತನಾಡಿದರು. "ಈ ಚಳವಳಿ ಆಗಸ್ಟ್ 9ರಂದು ಆರಂಭವಾಗಿತ್ತು. ಇದನ್ನು 'ಆಗಸ್ಟ್ ಕ್ರಾಂತಿ' ಎಂದೂ ಕರೆಯುತ್ತಾರೆ. ಆದರೆ, ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಬಂದಿದ್ದು ಡಾ.ಯೂಸುಫ್ ಮೆಹೆರ್ ಅಲಿ ಅವರಿಂದ ಎಂಬುದು ಕೇಲವರಿಗಷ್ಟೇ ಗೊತ್ತಿದೆ," ಎಂದ ಪ್ರಧಾನಿ 1857ರಿಂದ 1945 ವರೆಗಿನ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
"ನಾವು ಈ ಸಂದರ್ಭದಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯ ನೇತೃತ್ವವಹಿಸಿದ್ದ ಮಹಾತ್ಮ ಗಾಂಧೀಜಿಯವನ್ನು ನೆನೆಯುತ್ತೇವೆ. ಜತೆಗೆ ಅದರಲ್ಲಿ ಭಾಗವಹಿಸಿದ್ದ ಲೋಕ ನಾಯಕ್ ಜಯ ಪ್ರಕಾಶ್ ನಾರಾಯಣ್ ಮತ್ತು ಡಾ. ರಾಮ ಮನೋಹರ್ ಲೋಹಿಯಾ ಅವರನ್ನೂ ನೆನೆಯುತ್ತೇವೆ. 1920ರಿಂದ 1942 ರವರೆಗೆ ಗಾಂಧೀಜಿ ನಡೆಸಿದ ಹಲವು ಚಳುವಳಿಗಳನ್ನು ನಾವು ನೋಡಿದ್ದೇವೆ," ಎಂದು ಪ್ರಧಾನಿ ಹೇಳಿದರು.
2017 ಸಂಕಲ್ಪ ವರ್ಷ
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆಯುತ್ತಿವೆ. 2017ನೇ ವರ್ಷವನ್ನು ನಾವು ಸಂಕಲ್ಪ ವರ್ಷವಾಗಿಸಬೇಕು. ಇದಕ್ಕಾಗಿ ಆಗಸ್ಟ್ ತಿಂಗಳಿನಲ್ಲಿ ನಾವು ಸಂಕಲ್ಪ ಮಾಡಬೇಕು. ಮುಂದಿನ 5 ವರ್ಷಗಳಲ್ಲಿ ನವ ಭಾರತ ನಿರ್ಮಾಣಕ್ಕಾಗಿ ಏನಾದರೂ ಮಾಡಲೇಬೇಕೆಂಬ ಸಂಕಲ್ಪವನ್ನು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ದೇಶಕ್ಕಾಗಿ ಸಾಯಬೇಕಿಲ್ಲ; ಬದುಕಬೇಕಿದೆ
ಇದೇ ವೇಳೆ ಅವರು, "ನಾವಿಂದು ದೇಶಕ್ಕಾಗಿ ಸಾಯಬೇಕಿಲ್ಲ; ಬದುಕಬೇಕಿದೆ. ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ," ಎಂದು ಹೇಳಿದರು. "ಆಗಸ್ಟ್ 15 ರಂದು ದೇಶದ ಪ್ರಧಾನ ಸೇವಕನಾಗಿ ನಾನು ಕೆಂಪು ಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಲಿದ್ದು ಜನತೆಯ ದನಿಯನ್ನು ಪ್ರತಿಧ್ವನಿಸುತ್ತೇನೆ. ಈ ಬಾರಿ 40 - 50 ನಿಮಿಷಗಳಲ್ಲಿ ನನ್ನ ಭಾಷಣವನ್ನು ಮುಗಿಸುತ್ತೇನೆ," ಎಂದು ನರೇಂದ್ರ ಮೋದಿ ವಾಗ್ದಾನ ನೀಡಿದರು.
ಹಬ್ಬಗಳ ಬಗ್ಗೆ ಪ್ರಸ್ತಾಪ
ರಕ್ಷಾಬಂಧನ, ಜನ್ಮಾಷ್ಠಮಿ, ಗಣೇಶ ಚತುರ್ಥಿ, ಅನಂತ ಚತುರ್ದಶಿ, ದುರ್ಗಾ ಪೂಜೆ, ದೀಪಾವಳಿ ಹೀಗೆ ಒಂದಾದ ನಂತರ ಒಂದು ಹಬ್ಬಗಳು ಬರಲಿವೆ. ಈ ಹಬ್ಬಗಳು ಬಡ ಜನರಿಗೆ ಆರ್ಥಿಕ ಅವಕಾಶಗಳನ್ನು ತೆರೆದಿಡುತ್ತವೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಮಹಿಳೆಯರು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ
"ಇತ್ತೀಚೆಗೆ ನಾನು ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರನ್ನು ಭೇಟಿ ಮಾಡಿದ್ದೆ. ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಗೆಲುವು ಸಾಧಿಸದ್ದಕ್ಕೆ ಅವರಲ್ಲಿ ಬೇಸರವಿತ್ತು. ಆದರೆ, ಇಡೀ ದೇಶದ ಜನತೆ ಅವರ ಸೋಲನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಅವರು ದೇಶದ ಜನತೆಯ ಹೃದಯ ಗೆದ್ದಿದ್ದಾರೆ. ಇದಕ್ಕಿಂತ ದೊಡ್ಡ ಗೆಲುವು ಬೇರೊಂದಿಲ್ಲ. ನಮ್ಮ ದೇಶದ ಮಹಿಳಾಮಣಿಗಳು ದೇಶವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ," ಎಂದು ಹೇಳಿದ ನರೇಂದ್ರ ಮೋದಿ "ನಮ್ಮ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂಬುದನ್ನು ಮತ್ತೊಮ್ಮೆ ಹೇಳಲು ಇಚ್ಛಿಸುತ್ತೇನೆ," ಎಂದು ಹೇಳಿ ತಮ್ಮ ಭಾಷಣವನ್ನು ಮುಗಿಸಿದರು.