Manipur: ರಾಜೀನಾಮೆ ಪತ್ರ ಹರಿದುಹಾಕಿದ ಬೆಂಬಲಿಗರು- ರಾಜೀನಾಮೆ ಸಲ್ಲಿಸಲ್ಲವೆಂದ ಮಣಿಪುರ ಸಿಎಂ- ನಾಟಕವೆಂದ ನೆಟ್ಟಿಗರು
ಇಂಪಾಲ, ಜೂನ್ 30: ಹಿಂಸಾಪೀಡಿತ ಮಣಿಪುರದಲ್ಲಿ ಗಲಭೆಗಳು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂಬ ವರದಿಗಳು ಪ್ರಕಟವಾಗಿದ್ದರು. ಆದರೆ, ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಮಣಿಪುರ ಸರ್ಕಾರದ ವಕ್ತಾರರು ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ರಾಜೀನಾಮೆ ಸಲ್ಲಿಸಲು ಬಿರೇನ್ ಸಿಂಗ್ ಸಿಂಗ್ ಅವರು ರಾಜ್ಯಪಾಲರನ್ನು ಭೇಟಿಯಾಗಲು ತೆರಳಿದ್ದರು. ಆ ಸಮಯದಲ್ಲಿ ಅವರ ರಾಜೀನಾಮೆ ಪತ್ರವನ್ನು ಬೆಂಬಲಿಗರು ಹರಿದುಹಾಕಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿಯಬಾರದು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿರೇನ್ ಸಿಂಗ್ ರಾಜೀನಾಮೆ ಸಲ್ಲಿಸದೇ ಇರಲು ನಿರ್ಧಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಧ್ಯಾಹ್ನ 2:20 ರ ಸುಮಾರಿಗೆ, ಅವರು ಸುಮಾರು 20 ಶಾಸಕರ ನಿಯೋಗದೊಂದಿಗೆ ತಮ್ಮ ನಿವಾಸದಿಂದ ರಾಜ್ಯಪಾಲರ ನಿವಾಸದ ಕಡೆಗೆ ತೆರಳಿದರು. ಆದರೆ, ಹೊರಗೆ ಜನಸಂದಣಿ ಸೇರಿತ್ತು. ಅವರ ಬೆಂಬಲಿಗರು ಹೆಚ್ಚಾಗಿ ನೆರದಿದ್ದರು. ಈ ಹಿನ್ನೆಲೆಯಲ್ಲಿ ಅವರು ಮತ್ತೆ ತಮ್ಮ ಮನೆಗೆ ಹಿಂತಿರುಗಬೇಕಾಯಿತು ಎಂದು ವರದಿಯಾಗಿದೆ.
ಸ್ವಲ್ಪ ಸಮಯದ ನಂತರ, ಪಿಡಬ್ಲ್ಯೂಡಿ ಸಚಿವರ ನೇತೃತ್ವದಲ್ಲಿ ಕೆಲವು ಸಚಿವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಹೊರಬಂದರು. ಸಚಿವ ಸುಸಿಂದ್ರೋ ಮೈತೆಯ್ ಅವರು ರಾಜ್ಯಪಾಲರಿಗೆ ಸಲ್ಲಿಸಬೇಕಾಗಿದ್ದ ರಾಜೀನಾಮೆ ಪತ್ರವನ್ನು ಓದಿದರು. ಇದಾದ ಬಳಿಕ ಅಲ್ಲಿ ನೆರೆದಿದ್ದ ಕೆಲ ಮಹಿಳೆಯರಿಗೆ ಪೇಪರ್ ಹಸ್ತಾಂತರಿಸಲಾಗಿದ್ದು, ಅವರು ಅದನ್ನು ಹರಿದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

'ನಾವು ಸಿಎಂ ನಿವಾಸಕ್ಕೆ ಮರಳಿದ ನಂತರ, ಜನರ ಇಚ್ಛೆಯಂತೆ ರಾಜೀನಾಮೆಯನ್ನು ಮರುಪರಿಶೀಲಿಸುವಂತೆ ನಾವು ಅವರಿಗೆ ಮನವಿ ಮಾಡಿದ್ದೇವೆ. ಸಿಎಂಗೆ ಮನವರಿಕೆ ಮಾಡಿದ ನಂತರ ಕೆಲವು ಸಚಿವರು ರಾಜೀನಾಮೆ ನೀಡದಿರಲು ಒಪ್ಪಿಕೊಂಡಿದ್ದಾರೆ' ಎಂದು ಸರ್ಕಾರದ ವಕ್ತಾರ ಮತ್ತು ಸಚಿವ ಸಪಂ ರಂಜನ್ ಸಿಂಗ್ ಹೇಳಿದರು.
'ಮುಖ್ಯಮಂತ್ರಿಯವರು ನಿವಾಸದಿಂದ ಹೊರಹೋಗಲು ಮತ್ತು ರಾಜಭವನಕ್ಕೆ ತೆರಳಲು ಬೆಂಬಲಿಗರು ಅವಕಾಶ ನೀಡಲಿಲ್ಲ' ಎಂದು ಸಚಿವರು ತಿಳಿಸಿದರು.

ಲೀಮಾಖೋಂಗ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯ ನಂತರ ನಿನ್ನೆ ಸಂಜೆ ಮೈತೆಯ್ ಸಮದಾಯಕ್ಕೆ ಸೇರಿದ ವ್ಯಕ್ತಿಯ ಶವವನ್ನು ಇಂಫಾಲ್ಗೆ ಕರೆತರಲಾಯಿತು. ಶವಕ್ಕೆ ಗೌರವ ಸಲ್ಲಿಸಲು ನೆರೆದಿದ್ದ ಅಪಾರ ಸಂಖ್ಯೆಯ ಜನರು ಪ್ರತಿಭಟಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸಿಂಗ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಈ ವೇಳೆ, ಪ್ರತಿಭಟನಾಕಾರರು ಮೇಲೆ ಮಣಿಪುರ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಚದುರಿಸಿದರು.
'ನಿನ್ನೆಯ ಘಟನೆಯ ನಂತರ ಮುಖ್ಯಮಂತ್ರಿಗಳು ತುಂಬಾ ಭಾವುಕರಾಗಿದ್ದರು. ವಿಶೇಷವಾಗಿ ಅವರ ರಾಜೀನಾಮೆಗೆ ಒತ್ತಡ ಹೇರಲಾಗಿತ್ತು. ಜನರು ಅವರ ವಿರುದ್ಧ ಸಾಕಷ್ಟು ಘೋಷಣೆಗಳನ್ನು ಕೂಗುತ್ತಿದ್ದರು. ಜನರ ನಂಬಿಕೆ ಕಳೆದುಕೊಂಡಿದ್ದೇ ಆದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ' ಎಂದು ಅವರು ಅಭಿಪ್ರಾಯಪಟ್ಟಿದ್ದರು. ಅದೇ ಅವರ ರಾಜೀನಾಮೆ ನಿರ್ಧಾರಕ್ಕೆ ಪ್ರೇರೇಪಿಸಿತು' ಎಂದು ಸಚಿವ ಸಪಂ ರಂಜನ್ ಸಿಂಗ್ ಹೇಳಿದ್ದಾರೆ.












Click it and Unblock the Notifications