ಮತ ಯಂತ್ರಗಳ ದೋಷದಿಂದ ಬಿಜೆಪಿಗೆ ಜಯ: ಮಾಯಾವತಿ ದೂರು
ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಮಟ್ಟದ ಯಶಸ್ಸು ದಾಖಲಿಸಿರುವ ಬಿಜೆಪಿಯ ವಿಜಯದ ವಿರುದ್ಧ ಮಾಜಿ ಮುಖ್ಯಮಂತ್ರಿ ಅನುಮಾನ.
ಲಖನೌ, ಮಾರ್ಚ್ 11: ಈ ಬಾರಿಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಉಪಯೋಗಿಸಲ್ಪಟ್ಟಿರುವ ಮತ ಯಂತ್ರಗಳು ದೋಷಪೂರಿತವಾಗಿದ್ದರಿಂದಲೇ ಉತ್ತರ ಪ್ರದೇಶದ ಮುಸ್ಲಿಮರ ಹಾಗೂ ಇತರ ಹಿಂದುಳಿದ ವರ್ಗಗಳ ಮತಗಳು ಬಿಜೆಪಿಗೆ ಹರಿದುಬರಲು ಸಾಧ್ಯವಾಯಿತು ಎಂದು ಮಾಯಾವತಿ ಚುನಾವಣಾ ಆಯೋಗಕ್ಕೆ ದೂರಿತ್ತಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿ ಜಯ ಗಳಿಸುವ ಮೂಲಕ 15 ವರ್ಷಗಳ ನಂತರ ಆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದೆ. ಆ ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷಗಳಾಗಿದ್ದ ಸಮಾಜವಾದಿ ಹಾಗೂ ಬಹುಜನ ಸಮಾಜ ಪಾರ್ಟಿ ಧೂಳಿಪಟವಾಗಿವೆ. ಒಟ್ಟು 403 ವಿಧಾನ ಸಭಾ ಕ್ಷೇತ್ರಗಳಲ್ಲಿ 313ರಲ್ಲಿ ವಿಜಯ ದುಂದುಭಿ ಮೊಳಗಿಸಿರುವ ಬಿಜೆಪಿ ಅಧಿಕಾರ ಗದ್ದುಗೆಯತ್ತ ದಾಪುಗಾಲಿಟ್ಟಿದೆ.

ಆದರೆ, ಈ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಯಾವತಿ, ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ.
ಹಾಲು, ನೀರಿನ ವ್ಯತ್ಯಾಸ ತಿಳಿಯುತ್ತೆ: ಭಾರತೀಯ ಜನತಾ ಪಾರ್ಟಿಗೆ ಅತ್ಯಧಿಕ ಬೆಂಬಕ ಕೊಟ್ಟು ಅವರನ್ನು ಅಧಿಕಾರದಲ್ಲಿ ಕೂರಿಸಿದ ಉತ್ತರ ಪ್ರದೇಶದ ಜನತೆಗೆ ಶೀಘ್ರವೇ ಹಾಲು, ನೀರಿನ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ ಎಂದು ಮಾಯಾವತಿ, ಇದೇ ವೇಳೆ ಮತದಾರರಿಗೆ ಟಾಂಗ್ ನೀಡಿದ್ದಾರೆ.
ತಮ್ಮ ಪಕ್ಷವನ್ನು ಕಡೆಗಣಿಸಿದ್ದರೂ ಬಿಜೆಪಿಗೆ ಅಧಿಕಾರ ಕೊಟ್ಟಿರುವುದು ಸರಿಯಲ್ಲ ಎಂಬ ಧಾಟಿಯಲ್ಲೇ ಮಾತನಾಡಿರುವ ಮಾಯಾವತಿ, ''ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಜಾ ತಂತ್ರ ವ್ಯವಸ್ಥೆಯನ್ನು ಕೊಲೆ ಮಾಡಿದ್ದಾರೆ'' ಎಂದು ಆರೋಪಿಸಿದರು.
''ಶೀಘ್ರದಲ್ಲೇ ಉತ್ತರ ಪ್ರದೇಶದ ಜನತೆಗೆ ಹಾಲು ಯಾವುದು, ನೀರು ಯಾವುದು ಎಂಬುದರ ಸತ್ಯ ಅರ್ಥವಾಗುತ್ತದೆ'' ಎಂದು ತಿಳಿಸಿದರು.












Click it and Unblock the Notifications