ಲೋಕಸಭೆ-ವಿಧಾನಸಭೆಗೆ ಒಟ್ಟಿಗೆ ಚುನಾವಣೆ; ಯಾರು-ಏನೆಂದರು?

ಲೋಕಸಭೆ- ವಿಧಾನಸಭೆಗೆ ಒಟ್ಟಿಗೇ ಚುನಾವಣೆ ಆಗಬೇಕು ಎಂಬ ನರೇಂದ್ರ ಮೋದಿ ನೇತೃತ್ವದ ಸರಕಾರ ಇಟ್ಟಿರುವ ಪ್ರಸ್ತಾವವನ್ನು ಕಾನೂನು ಆಯೋಗದ ಮಂಡಳಿ ಅನುಮೋದಿಸಿದ್ದು, ಅಂತಿಮ ತೀರ್ಮಾನಕ್ಕೂ ಬರುವ ಮುನ್ನ ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಹೇಳಿದೆ.

ಆಗಸ್ಟ್ 31ಕ್ಕೆ ಈಗಿನ ಕಾನೂನು ಆಯೋಗ ಮಂಡಳಿಯ ಮೂರು ವರ್ಷದ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ. ಅದಕ್ಕೂ ಮುನ್ನ ಕರಡು ಸಿದ್ಧಪಡಿಸಿ ಸಲ್ಲಿಸಿರುವ ಮಂಡಳಿ, ಸದ್ಯದ ಸಂವಿಧಾನ ವ್ಯವಸ್ಥೆಯಲ್ಲಿ ಒಟ್ಟಿಗೆ ಚುನಾವಣೆ ನಡೆಸುವ ಅವಕಾಶ ಇಲ್ಲ. ಅದರಲ್ಲಿ ಮಾರ್ಪಾಟುಗಳನ್ನು ಮಾಡಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

"ಒಟ್ಟಿಗೇ ಚುನಾವಣೆಗಳು ನಡೆಯುವುದರಿಂದ ಸಾರ್ವಜನಿಕರ ಹಣ ಉಳಿತಾಯ ಆಗುತ್ತದೆ. ಆಡಳಿತ ಹಾಗೂ ಭದ್ರತಾ ಪಡೆಗಳ ಮೇಲಿನ ಹೊರೆ ಇಳಿಯುತ್ತದೆ. ಸರಕಾರದ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬಹುದು.. ಒಟ್ಟಿಗೆ ಚುನಾವಣೆಗಳು ನಡೆಯುವುದರಿಂದ ಮಧ್ಯೆ ಮಧ್ಯೆ ಚುನಾವಣೆಯಲ್ಲಿ ತೊಡಗುವ ಬದಲು ದೇಶದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಗಮನ ಕೇಂದ್ರೀಕರಿಸಬಹುದು" ಎಂದು ಮಂಡಳಿ ತಿಳಿಸಿದೆ.

ಜಮ್ಮು-ಕಾಶ್ಮೀರ ಹೊರತುಪಡಿಸಿ, ಎಲ್ಲ ರಾಜ್ಯ ಹಾಗೂ ಸಂಸತ್ ಮುಂದೆಯೂ ವರದಿಯನ್ನು ಮಂಡಿಸಿ ಅದಕ್ಕೆ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಯಾವ ಪಕ್ಷ ಅಥವಾ ಮುಖಂಡರು ಏನು ಅಭಿಪ್ರಾಯ ಪಡುತ್ತಾರೆ ಎಂಬುದನ್ನು ಮುಂದೆ ಓದಿ.

ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

ವೈಯಕ್ತಿಕವಾಗಿ ಕೇಳಿದರೆ ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಿಗೇ ಚುನಾವಣೆ ಆಗುವುದು ಉತ್ತಮ. ಒಂದು ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದರಿಂದ ಸಂಸತ್ ಅಭ್ಯರ್ಥಿಗೆ ಶ್ರಮ ಕಡಿಮೆ ಆದಂತಾಗುತ್ತದೆ, ವಿಧಾನಸಭೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಂದ ಒಂದಿಷ್ಟು ನೆರವು ಸಿಕ್ಕಂತಾಗುತ್ತದೆ. ಜತೆಗೆ ಚುನಾವಣೆ ನಡೆಸಲು ಆಗುವ ಖರ್ಚು- ವೆಚ್ಚ, ಶ್ರಮ ಕೂಡ ಕಡಿಮೆ ಆಗುತ್ತದೆ.

ರವಿಕೃಷ್ಣಾ ರೆಡ್ಡಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ

ರವಿಕೃಷ್ಣಾ ರೆಡ್ಡಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ

ಮೇಲ್ನೋಟಕ್ಕೆ ಈ ಪ್ರಸ್ತಾವದಿಂದ ಅನುಕೂಲ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ರಾಜಕೀಯ ಅನುಕೂಲವನ್ನೇ ಗುರಿಯಾಗಿರಿಸಿಕೊಳ್ಳಲಾಗಿದೆ. ಈಗ ದೇಶದಲ್ಲಿ ಬಹುತೇಕ ಕಡೆ ಮೈತ್ರಿ ಸರಕಾರಗಳೇ ಬರುತ್ತಿವೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದಾಗ ವರ್ಷಗಟ್ಟಲೆ ರಾಷ್ಟ್ರಪತಿ ಆಳ್ವಿಕೆ ಹೇರಿದರೆ ಗತಿ ಏನು? ಉಪ ಚುನಾವಣೆಗಳನ್ನು ತಡೆಯುವುದಕ್ಕೆ ಮೊದಲು ಕಾನೂನು ಮಾರ್ಪಾಟುಗಳನ್ನು ಮಾಡಲಿ. ಆ ನಂತರ ಚುನಾವಣೆ ವ್ಯವಸ್ಥೆಯಲ್ಲಿನ ಲೋಪ-ದೋಷ ಸರಿಪಡಿಸಲು ಯತ್ನಿಸಲಿ. ಆ ಮೇಲೆ ಈಗಿನ ಪ್ರಸ್ತಾವದ ಬಗ್ಗೆ ಯೋಚನೆ ಮಾಡಲಿ.

ಕಿಮ್ಮನೆ ರತ್ನಾಕರ, ಮಾಜಿ ಶಾಸಕ-ವಕೀಲ

ಕಿಮ್ಮನೆ ರತ್ನಾಕರ, ಮಾಜಿ ಶಾಸಕ-ವಕೀಲ

ಒಟ್ಟಿಗೇ ಚುನಾವಣೆ ನಡೆಯಬೇಕು ಎಂಬುದೇನೋ ಸರಿ. ಆದರೆ ಅದರಿಂದ ಉದ್ಭವಿಸುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಹೀಗೆ ಒಟ್ಟಿಗೆ ಚುನಾವಣೆ ಆಗುವುದರಿಂದ ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲ ಆಗುತ್ತದೆ. ಆದರೆ ಪ್ರಾದೇಶಿಕ ಪಕ್ಷಗಳಿಗೆ ಹೊಡೆತವಾಗುತ್ತದೆ. ಅತಂತ್ರ ವಿಧಾನಸಭೆ ಅಥವಾ ಲೋಕಸಭೆ ಸೃಷ್ಟಿಯಾದಾಗ ಏನು ಮಾಡಬೇಕು? ಸರಕಾರ ಬಿದ್ದುಹೋದ ಅಥವಾ ಬೀಳಿಸಿದ ಸಂದರ್ಭದಲ್ಲಿ ಉಳಿದ ಅವಧಿಗೆ ಏನು ಮಾಡಬೇಕು? ಆಗ ಪಕ್ಷಗಳು ಪಡೆದ ಮತ ಪ್ರಮಾಣ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿ ಬರುತ್ತದೆ. ಹೀಗೆ ಅನೇಕ ವಿಚಾರಗಳು ಈ ನಿರ್ಧಾರದ ಹಿಂದಿದೆ. ಅವೆಲ್ಲಕ್ಕೂ ಉತ್ತರ ಕಂಡುಕೊಳ್ಳಬೇಕು ಅಂದರೆ ಸಾರ್ವಜನಿಕ ಚರ್ಚೆಗೆ ಈ ವಿಚಾರವನ್ನು ತಂದು, ಆ ನಂತರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಡಿ.ಎಚ್.ಶಂಕರಮೂರ್ತಿ, ಬಿಜೆಪಿ ಹಿರಿಯ ಮುಖಂಡ

ಡಿ.ಎಚ್.ಶಂಕರಮೂರ್ತಿ, ಬಿಜೆಪಿ ಹಿರಿಯ ಮುಖಂಡ

ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ಆಗುವುದು ಒಳ್ಳೆಯದು. ವರ್ಷ ವರ್ಷ ಚುನಾವಣೆ ಮಾಡುತ್ತಾ ಇರುವುದು ಉತ್ತಮವಲ್ಲ. ಎರಡೂ ಒಟ್ಟಿಗೆ ಈ ಹಿಂದೆ ಆಗುತ್ತಿತ್ತು. ಆ ನಂತರ ಕೆಲ ಬದಲಾವಣೆಗಳಾಗಿ ಸರಕಾರಗಳು ಬಿದ್ದುಹೋದವು. ಹಣಕಾಸಿನ ಸಮಸ್ಯೆ ಅಂತಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲ್ಲ. ಏಕೆಂದರೆ, ಚುನಾವಣೆ ನೀತಿಸಂಹಿತೆ ಇದ್ದರೆ ಅಭಿವೃದ್ಧಿ ಕೆಲಸಗಳು ಆಗಲ್ಲ. ಯಾವುದಾದರೂ ಸಮಸ್ಯೆ ಎದುರಾದರೆ ಅದಕ್ಕೆ ಪರಿಹಾರ ಕಂಡುಕೊಂಡು, ದೇಶ ಮತ್ತು ರಾಜ್ಯಕ್ಕೆ ಹಿತವೋ ಅಂಥ ತೀರ್ಮಾನ ತೆಗೆದುಕೊಳ್ಳಬೇಕು.

ಡಾ.ಅಶ್ವಥ್ ನಾರಾಯಣ್, ಶಾಸಕ

ಡಾ.ಅಶ್ವಥ್ ನಾರಾಯಣ್, ಶಾಸಕ

ಲೋಕಸಭೆಗೆ ಹಾಗೂ ವಿಧಾನಸಭೆಗೆ ಒಟ್ಟಿಗೇ ಚುನಾವಣೆ ನಡೆದರೆ ಈಗ ಆಗುತ್ತಿರುವ ಖರ್ಚು ಕಡಿಮೆಯಾಗುತ್ತದೆ. ಒಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಾ ಮುಂದೆ ಸಾಗುವ ಆರೋಗ್ಯಕರ ಸಂಸ್ಕೃತಿ ಬೆಳೆಯುತ್ತದೆ. ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಇಂಥ ಪ್ರಯತ್ನ ಆಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+