ಇಂದು ಮಹತ್ವದ ತ್ರಿವಳಿ ತಲಾಖ್ ತೀರ್ಪು
ನವದೆಹಲಿ, ಆಗಸ್ಟ್ 22: ಇಂದು ಸುಪ್ರಿಂ ಕೋರ್ಟ್ ಮಹತ್ವದ ತ್ರಿವಳಿ ತಲಾಖ್ ತೀರ್ಪು ನೀಡಲಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪಂಚ ಸದಸ್ಯರ ಸುಪ್ರಿಂ ಕೋರ್ಟ್ ನ್ಯಾಯಪೀಠ ಮೇ 18ರಂದು ವಿಚಾರಣೆ ಕೊನೆಗೊಳಿಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಸುಮಾರು 6 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.
Recommended Video

ಮೊದಲ ಬಾರಿಗೆ ಸುಪ್ರಿಂ ಕೋರ್ಟ್ ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಮೂಲಭೂತ ಹಕ್ಕು ಹೌದೋ, ಹೌದಾದರೆ ಅದಕ್ಕೆ ಕಾನೂನಿನ ಮಾನ್ಯತೆ ಇದೆಯೇ ಎಂಬ ವಿಚಾರದ ಬಗ್ಗೆ ವಿಚಾರಣೆ ನಡೆಸಿದೆ. ಈ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿ ನ್ಯಾ. ಖೇಹರ್, ಕುರಿಯನ್ ಜೋಸೆಫ್, ರೋಹಿಂಗ್ಟನ್ ಎಫ್ ನಾರಿಮನ್, ಉದಯ್ ಲಲಿತ್, ಎಸ್ ಅಬ್ದುಲ್ ನಜೀರ್ ಇದ್ದರು. ಇವರೆಲ್ಲಾ ಐದು ಬೇರೆ ಬೇರೆ ಧರ್ಮಕ್ಕೆ ಸೇರಿದವರು ಎಂಬುದು ವಿಶೇಷ.

ವಿಚಾರಣೆ ವೇಳೆ ಸರಕಾರ ಯಾಕೆ ತ್ರಿವಳಿ ತಲಾಖ್ ನಿಷೇಧ ಮಾಡಿಲ್ಲ ಎಂದೂ ಕೋರ್ಟ್ ಪ್ರಶ್ನೆ ಮಾಡಿತ್ತು.
ಇನ್ನು ಕೋರ್ಟ್ ಮಧ್ಯೆ ಪ್ರವೇಶಕ್ಕೆ ಆಕ್ಷೇಪ ಎತ್ತಿದ್ದ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ನಮಗೂ ತಲಾಖ್ ಬೇಕಾಗಿಲ್ಲ. ತಲಾಖ್ ನೀಡದಂತೆ 'ನಿಖಾನಾಮ' (ಮದುವೆ) ಸಂದರ್ಭದಲ್ಲೇ ಸಲಹೆ ನೀಡುತ್ತೇವೆ. ಈ ಕ್ಷೇತ್ರದ ಸುಧಾರಣೆಗೆ ನಾವೂ ಶ್ರಮಿಸುತ್ತಿದ್ದೇವೆ ಎಂದು ಹೇಳಿತ್ತು.
ಈ ಹಿಂದೆ ಮಂಡಳಿ ಇದೊಂದು ಪಾಪದ ಕೃತ್ಯ ಮತ್ತು ಅನಪೇಕ್ಷಿತ ಎಂದು ಹೇಳಿತ್ತಾದರೂ ಕಳೆದ 1400 ವರ್ಷಗಳಿಂದ ಇದು ನಡೆದು ಬಂದಿದೆ ಎಂದು ತಲಾಖ್ ಪರವಾಗಿಯೇ ವಾದಿಸಿತ್ತು.
ಇನ್ನು ಸರಕಾರ ಮಹಿಳೆಯರ ವಾದವನ್ನು ಬೆಂಬಲಿಸಿತ್ತು. ತ್ರಿವಳಿ ತಲಾಖ್ ಮಹಿಳೆಯರಿಗೆ ಮಾಡುವ ಅನ್ಯಾಯ, ಸಂವಿಧಾನ ವಿರೋಧಿ ಎಂದು ಹೇಳಿತ್ತಲ್ಲದೆ, ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಹಿರಂಗ ಭಾಷಣಗಳಲ್ಲೇ ಇದನ್ನು ಪ್ರಸ್ತಾಪಿಸಿದ್ದರು.












Click it and Unblock the Notifications