Jharkhand Assembly Election 2024: ಜಾರ್ಖಂಡ್ನಲ್ಲಿ ಯಾರ ಸರ್ಕಾರ, ಮಾಜಿ ಸಿಎಂ ಕೊಟ್ಟ ಸುಳಿವು
ನವದೆಹಲಿ, ನವೆಂಬರ್ 13: ಜಾರ್ಖಂಡ್ ವಿಧಾನಸಭೆ ಚುನಾವಣೆ 2024ರ ಮೊದಲ ಹಂತದ ಮತದಾನ ಬುಧವಾರ ನಡೆಯುತ್ತಿದೆ. 43 ಸೀಟುಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಮಧ್ಯಾಹ್ನ 1 ಗಂಟೆಯ ತನಕ ಶೇ 46.25ರಷ್ಟು ಮತದಾನವಾಗಿದೆ. ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದ್ದು, ಯಾರಿಗೆ ಅಧಿಕಾರ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬುಧವಾರ ವಿಧಾನಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಮಾತನಾಡಿದರು, "ರಾಜ್ಯದಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಈ ಕುರಿತು ನನಗೆ ಸಂಪೂರ್ಣ ಭರವಸೆ ಇದೆ" ಎಂದು ಹೇಳಿದರು. ಈ ಬಾರಿಯ ಚುನಾವಣೆಗೆ ಅವರು, ಸರಿಕೆಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಚಂಪೈ ಸೊರೆನ್, "ನಾವು ನಮ್ಮ ಭೂಮಿಯನ್ನು ಕಾಪಾಡಿಕೊಳ್ಳಬೇಕು. ಬಾಂಗ್ಲಾದೇಶದ ವಲಸಿಗರಿಂದ ನಮ್ಮ ಭೂಮಿಯನ್ನು ಕಾಪಾಡಿಕೊಳ್ಳಬೇಕು. ರಾಜ್ಯದಲ್ಲಿ ಬಾಗ್ಲಾ ವಲಸಿಗರು, ನಿರುದ್ಯೋಗ, ನೀರಾವರಿ ಪ್ರಮುಖ ಸಮಸ್ಯೆಯಾಗಿದೆ" ಎಂದು ಹೇಳಿದರು.
ಜಾರ್ಖಂಡ್ನ ಮಾಜಿ ಸಿಎಂ ಚಂಪೈ ಸೊರೆನ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜೊತೆ ಅಸಮಾಧಾನ ಹೊಂದಿದ್ದರು. ಚುನಾವಣೆಗೂ ಮೊದಲೇ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ತೊರೆದರು, ಬಿಜೆಪಿ ಸೇರಿದರು.
ಹೇಮಂತ್ ಸೊರೆನ್ ಜೈಲು ಸೇರಿದ್ದಾಗ ಚಂಪೈ ಸೊರೆನ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ ಜಾಮೀನು ಮೇಲೆ ಬಿಡುಗಡೆಗೊಂಡ ಹೇಮಂತ್ ಸೊರೆನ್ ಮತ್ತೆ ಮುಖ್ಯಮಂತ್ರಿಯಾಗುವಾಗ ಚಂಪೈ ಸೊರೆನ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಆದ್ದರಿಂದ ಅಸಮಾಧಾನಗೊಂಡ ಅವರು ಪಕ್ಷ ತೊರೆದು ಬಿಜೆಪಿ ಸೇರಿದರು.
ಈ ಕುರಿತು ಮಾತನಾಡಿದ್ದ ಚಂಪೈ ಸೊರೆನ್, "ರಾಜ್ಯ ಸರ್ಕಾರದ ಈಗಿನ ಕಾರ್ಯವೈಖರಿ ಮತ್ತು ಅದರ ನೀತಿಗಳು ತಾನು ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಪಕ್ಷವನ್ನು ತೊರೆಯುವಂತೆ ಒತ್ತಾಯಿಸಿದೆ" ಎಂದು ಹೇಳುವ ಮೂಲಕ ಹೇಮಂತ್ ಸೊರೆನ್ ಆಡಳಿತವನ್ನು ಟೀಕಿಸಿದ್ದರು.
ಜಾರ್ಖಂಡ್ನಲ್ಲಿ ಬುಧವಾರ ನಡೆಯುತ್ತಿರುವ 43 ಕ್ಷೇತ್ರಗಳ ಪೈಕಿ 17 ಸಾಮಾನ್ಯ, 20 ಎಸ್ಟಿ, 6 ಎಸ್ಸಿ. 43 ಕ್ಷೇತ್ರಗಳಲ್ಲಿ 73 ಮಹಿಳೆಯರು ಸೇರಿದಂತೆ 638 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 20ರಂದು ರಾಜ್ಯದ ಉಳಿದ 38 ಕ್ಷೇತ್ರಗಳ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಕಳೆದ ಚುನಾವಣೆಯಲ್ಲಿ ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 30, ಬಿಜೆಪಿ 25, ಕಾಂಗ್ರೆಸ್ 16 ಸೀಟುಗಳಲ್ಲಿ ಜಯಗಳಿಸಿದ್ದವು. ಜೆಎಂಎಂ, ಕಾಂಗ್ರೆಸ್ ಮತ್ತು ಆರ್ಜೆಡಿ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದ್ದವು. ಹೇಮಂತ್ ಸೊರೆನ್ ಮುಖ್ಯಮಂತ್ರಿಯಾಗಿದ್ದರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹಗರಣದಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದ ಬಳಿಕ ಬಿಜೆಪಿ ಅದನ್ನು ಚುನಾವಣಾ ಅಸ್ತ್ರವಾಗಿ ಮಾಡಿಕೊಂಡು ಹೇಮಂತ್ ಸೊರೆನ್ ವಿರುದ್ಧ ಪ್ರಚಾರವನ್ನು ಮಾಡಿದೆ. ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications