ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಮಲ್ಲಿಕಾರ್ಜುನ ಖರ್ಗೆ ಅವರಲ್ಲ: ಸತ್ಯ ಬಿಚ್ಚಿಟ್ಟ ದೊಡ್ಡಗೌಡ್ರು
ದೆಹಲಿ, ಫೆಬ್ರವರಿ 09: 2018 ರ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ್ರು ಮಾತನಾಡಿದ್ದಾರೆ. ಅವತ್ತು ಹದಿಮೂರು ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿ ಆಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕೆಳಗೆ ಇಳಿಸಿದ್ದು ಯಾರು? ಆ ಕೆಲಸ ಮಾಡಿದ್ದು ಮಲ್ಲಿಕಾರ್ಜುನ್ ಖರ್ಗೆ ಅವರಲ್ಲ ಎಂದು ದೊಡ್ಡಗೌಡ್ರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಪ್ರಾಮಾಣಿಕ ವ್ಯಕ್ತಿ. ಆದರೆ, ಅದೇ ಪಕ್ಷದ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತೆಗೆದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಆಕ್ರೋಶ ವ್ಯಕ್ತಪಡಿಸಿದರು.

ನಾನೆಂದೂ ಪಕ್ಷದಿಂದ ಪಕ್ಷವನ್ನು ಬದಲಿಸಿಲ್ಲ. ರಾಜಕೀಯ ನೈತಿಕತೆ ಕಳೆದುಕೊಂಡಿಲ್ಲ. ಆದರೆ, ಕಾಂಗ್ರೆಸ್ ನಾಯಕರು ನನ್ನ ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಿದ್ದಾಗ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಆ ವ್ಯಕ್ತಿಗಳ ಹೆಸರುಗಳನ್ನು ನಾನು ಇಲ್ಲಿ ಪ್ರಸ್ತಾಪ ಮಾಡುವುದಿಲ್ಲ, ಏಕೆಂದರೆ ಅವರು ಈ ಸದನರ ಸದಸ್ಯರು ಅಲ್ಲ. ನನ್ನ ಮಿತಿ ನನಗೆ ಗೊತ್ತಿದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.
ಹಿಂದೆ ರಾಜ್ಯಸಭೆ ಚುನಾವಣೆ ಪ್ರಸಂಗವನ್ನು ನೆನಪಿಸಿಕೊಂಡ ದೇವೇಗೌಡ್ರು, ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ, ಖರ್ಗೆ ಅವರು ದೇವೇಗೌಡರು ಸೋಲಬಾರದು. ಒಂದು ವೇಳೆ ಹಾಗೆ ಆಗುವುದೇ ಆಗಿದ್ದರೆ ನಾನು ಚುನಾವಣೆ ಕಣದಲ್ಲಿಯೇ ಇರುವುದಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು. ಅದಕ್ಕಾಗಿ ನಾನು ಖರ್ಗೆ ಅವರಿಗೆ ಆಭಾರಿ ಆಗಿದ್ದೇನೆ. ಇಂತಹ ಖರ್ಗೆ ಅವರನ್ನು, ಅದರಲ್ಲೂ 30ರಿಂದ 40 ವರ್ಷ ಸ್ವಚ್ಚ ರಾಜಕೀಯ ಮಾಡಿರುವ ಅವರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಆಗಲು ನೀಡುತ್ತದೆಯೇ? ಎಂದು ಅವರು ನೇರವಾಗಿ ಪ್ರಶ್ನಿಸಿದರು.

ನಿಮ್ಮ ಹೆಸರನ್ನು ಪ್ರಧಾನಿ ಹುದ್ದೆಗೆ ನಿಮ್ಮದೇ ಮೈತ್ರಿಕೂಟದ ಕೆಲ ನಾಯಕರು ಪ್ರಸ್ತಾಪ ಮಾಡಿದರು. ಆದರೆ, I.N.D.I.A. ಮೈತ್ರಿಕೂಟದ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಈ ವ್ಯಕ್ತಿ ಸಿಎಂ ಆಗಬೇಕು ಎಂದು ನಾನು ಬಯಸಿದೆ. ನನ್ನ ಮಗ ಕುಮಾರಸ್ವಾಮಿ ಅವರ ಬದಲಿಗೆ ಖರ್ಗೆ ಅವರೇ ಸಿಎಂ ಆಗಬೇಕು ಎಂದು ನಾನು ಹೇಳಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್, ಖರ್ಗೆ ಬೇಡ, ನಿಮ್ಮ ಮಗನೇ ಸಿಎಂ ಆಗಲಿ ಎಂದು ಪಟ್ಟು ಹಿಡಿದರು.
ಗುಲಾಂ ನಬಿ ಆಜಾದ್ ಹಾಗೂ ರಾಜಸ್ತಾನದ ಅಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅಂದು ನನ್ನ ಮನೆಗೆ ಬಂದು ಹಠ ಹಿಡಿದರು. ನನ್ನ ಮಗನನ್ನು ಸಿಎಂ ಮಾಡುವುದು ನನಗೆ ಇಷ್ಟ ಇರಲಿಲ್ಲ. ಖರ್ಗೆ ಅವರೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಅವರೇ ಅವರೇ ಸಿಎಂ ಆಗಬೇಕು ಎಂದರು. ಖರ್ಗೆ ಅವರು ಈ ಸದನದಲ್ಲಿಯೇ ಇದ್ದಾರೆ ಎಂದು ದೇವೇಗೌಡರು ಗಟ್ಟಿ ದನಿಯಲ್ಲಿ ಹೇಳಿದರು.
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಅದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಪ್ರಜಾಪ್ರಭುತ್ವ ಈ ದೇಶದ ಜನರ ಹೃದಯದಲ್ಲಿ ಇದೆ. ಈ ದೇಶದಲ್ಲಿ ಸರ್ವಾಧಿಕಾರ ಎನ್ನುವುದು ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಪ್ರಧಾನಿಗಳು ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿದರು.
ಮನಮೋಹನ್ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿದ್ದಾಗ ಈ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು ಎನ್ನುವುದು ನನಗೆ ಗೊತ್ತಿದೆ. 130 ಟನ್ ಬಂಗಾರವನ್ನು ಭಾರತ ಸರ್ಕಾರ ವಿದೇಶಿ ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿತ್ತು. ಆ ಸಂದರ್ಭದಲ್ಲಿ ನರಸಿಂಹರಾವ್ ಅವರ ನೇತೃತ್ವದಲ್ಲಿ ದೇಶವನ್ನು ಉಳಿಸಲು ಮನಮೋಹನ್ ಸಿಂಗ್ ಏನೆಲ್ಲಾ ಮಾಡಿದರು ಎನ್ನುವುದು ನನಗೆ ಬಹಳ ಚೆನ್ನಾಗಿ ಗೊತ್ತಿದೆ. ಅಂತಹ ಮನಮೋಹನ್ ಸಿಂಗ್ ಅವರು ಈ ಸದನದಲ್ಲಿ ಕಣ್ಣೀರು ಹಾಕಿದರು ಎಂದು ದೇವೇಗೌಡರು ಹೇಳಿದರು.












Click it and Unblock the Notifications