ಖಲೀಸ್ತಾನಿಗಳನ್ನು ಸೊಳ್ಳೆಗಳಂತೆ ತುಳಿದು ಹಾಕಿದ್ದು ಇಂದಿರಾ ಗಾಂಧಿ: ನಟಿ ಕಂಗನಾ ರಣಾವತ್
ನವದೆಹಲಿ, ನವೆಂಬರ್ 20: ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸದ್ದು ಮಾಡುವ ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್, ದೇಶದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಕುರಿತು ಮಾತನಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇದೇ ನವೆಂಬರ್ ತಿಂಗಳಿನಲ್ಲಿ ಪದ್ಮ ಶ್ರೀ ಪ್ರಶಸ್ತಿ ಪಡೆದ ಅವರು, ಇಂದಿರಾ ಗಾಂಧಿಯವರನ್ನು ಸ್ಮರಿಸಿದ್ದಾರೆ. ಇಂದಿರಾ ಗಾಂಧಿಯವರು ಖಲೀಸ್ತಾನಿಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಅಂದಿನ ಕಾಲದಲ್ಲಿ ತೆಗೆದುಕೊಂಡಿದ್ದರು. ಖಲಿಸ್ತಾನಿಗಳನ್ನು ಮಟ್ಟ ಹಾಕುವುದಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು ಎಂದು ರಣಾವತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಉಲ್ಲೇಖಿಸದೇ, "ಭಾರತವನ್ನು ಇಬ್ಭಾಗ ಮಾಡುವುದಕ್ಕೆ ನೋಡುತ್ತಿದ್ದವರ ಅವಳು ತಮ್ಮ ಕಾಲಿನ ಕೆಳಗೆ ಹಾಕಿಕೊಂಡು ಸರಿಯಾಗಿ ತುಳಿದು ಹಾಕಿದ್ದಾಳೆ", ಎಂದು ರಣಾವತ್ ಬರೆದುಕೊಂಡಿದ್ದಾರೆ.

ಆ ಮಹಿಳಾ ಪ್ರಧಾನಿಯನ್ನು ಮರೆಯುವಂತಿಲ್ಲ:
"ಖಲೀಸ್ತಾನಿಗಳು ಇಂದು ಸರ್ಕಾರದ ಕೈಗಳನ್ನು ತಿರುವುವ ಕೆಲಸವನ್ನು ಮಾಡುತ್ತಿರಬಹುದು. ಆದರೆ ಆ ಒಬ್ಬ ಮಹಿಳೆಯನ್ನು ಯಾರೊಬ್ಬರೂ ಮರೆಯುವಂತಿಲ್ಲ. ಅದೊಬ್ಬ ಮಹಿಳಾ ಪ್ರಧಾನಮಂತ್ರಿಯು ಅಂಥವರನ್ನು ತಮ್ಮ ಕಾಲಿನ ಕೆಳಗೆ ಹಾಕಿಕೊಂಡು ಸರಿಯಾಗಿ ತುಳಿದಿದ್ದಾರೆ. ಅವರನ್ನು ಸೊಳ್ಳೆಗಳಂತೆ ತುಳಿದು ಹಾಕುವುದಕ್ಕೆ ತಮ್ಮ ಜೀವವನ್ನೂ ಪಣಕ್ಕಿಟ್ಟಿದ್ದರು. ಆದರೆ ದೇಶವು ಇಬ್ಭಾಗವಾಗುವುದಕ್ಕೆ ಬಿಡಲಿಲ್ಲ. ಖಲೀಸ್ತಾನಿಗಳು ಇಂದಿಗೂ ಆಕೆಯ ಹೆಸರನ್ನು ಕೇಳಿದರೆ ಸಾಕು ಬೆವರುತ್ತಾರೆ, ಅವರಿಗೆ ಅಂಥ ಗುರು ಬೇಕು," ಎಂದು ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.

ಇಂದಿರಾ ಗಾಂಧಿ ಜೀವನಾಧಾರಿತ ಚಿತ್ರ:
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನಾಧಾರಿತ "ಎಮರ್ಜೆನ್ಸಿ" ಎಂಬ ಚಲನಚಿತ್ರವನ್ನು ಮಾಡುವುದಾಗಿ ನಟಿ ಕಂಗನಾ ರಣಾವತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ತಮ್ಮ ಎಮರ್ಜೆನ್ಸಿ ಚಿತ್ರದ ಬಗ್ಗೆ ಮಾತನಾಡುತ್ತಾ, ಕಂಗನಾ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಮತ್ತು ರಿತೇಶ್ ಷಾ ಚಿತ್ರದ ಸ್ಕ್ರಿಪ್ಟ್ ಬರೆಯಲಿದ್ದಾರೆ ಎಂದು ಹೇಳಿದ್ದರು.
ಎಮರ್ಜೆನ್ಸಿ ಚಿತ್ರವು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಬಯೋಪಿಕ್ ಆಗುವುದಿಲ್ಲ. ಆದರೂ, ರಾಜಕೀಯ ಬೆಳವಣಿಗೆಗಳನ್ನು ಕೇಂದ್ರೀಕರಿಸುವ ರಾಜಕೀಯ ನಾಟಕವಾಗಲಿದ್ದು, ಈ ಪೀಳಿಗೆಗೆ ಪ್ರಸ್ತುತ ಭಾರತದ ಸಾಮಾಜಿಕ-ರಾಜಕೀಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕಂಗನಾ ಹೇಳಿದ್ದಾರೆ.
ಕೃಷಿ ಕಾಯ್ದೆ ರದ್ದು ದುಃಖದ ವಿಷಯ:
ದೇಶದಲ್ಲಿ ಪ್ರತಿಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಯಲ್ಲಿರುವ ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್, ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ರದ್ದು ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. "ದುಃಖಕರ, ನಾಚಿಕೆಗೇಡಿನ, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಸಂಸತ್ತಿನಲ್ಲಿ ಆಯ್ಕೆಯಾದ ಸರ್ಕಾರ ಯಾಕೆ. ಆಗ ಇದು ಕೂಡ ಜಿಹಾದಿ ರಾಷ್ಟ್ರವಾಗಿದೆ. ಇದನ್ನು ಬಯಸಿದ ಎಲ್ಲರಿಗೂ ಅಭಿನಂದನೆಗಳು," ಎಂದು ಕಂಗನಾ ರಣಾವತ್ ಬರೆದಿದ್ದಾರೆ ಎನ್ನುವ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಸ್ವಾತಂತ್ರ್ಯ ಸಿಕ್ಕಿದ್ದೇ ಭಿಕ್ಷೆ ಎಂದು ಕರೆದಿದ್ದ ಕಂಗನಾ:
ಈ ಹಿಂದೆ "1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ [ಭಿಕ್]' ಎಂದು ಹೇಳುವ ಮೂಲಕ ನಟಿ ಕಂಗನಾ ರಣಾವತ್ ವಿವಾದ ಹುಟ್ಟುಹಾಕಿದ್ದರು. ಮಹಾತ್ಮ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ" ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು.












Click it and Unblock the Notifications