ರೈಲಿಗೆ ಬೆಂಕಿ ತಗುಲಿದಾಗ ಏನು ಮಾಡಬೇಕು?: ಭಾರತೀಯ ರೈಲ್ವೆ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ
ನವದೆಹಲಿ, ಜೂ. 15: ಚಲಿಸುತ್ತಿರುವ ರೈಲಿಗೆ ಬೆಂಕಿ ತಗುಲಿದಾಗ ಅದನ್ನು ನಿಯಂತ್ರಿಸುವುದು ಹಾಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುವ ಬಗ್ಗೆ ಭಾರತೀಯ ರೈಲ್ವೆ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ಇತ್ತೀಚೆಗೆ, ಈ ವರ್ಷದ ಮಾರ್ಚ್ನಲ್ಲಿ ಶತಾಬ್ದಿ ಎಕ್ಸ್ಪ್ರೆಸ್ ಸೇರಿದಂತೆ ಹಲವಾರು ರೈಲುಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದೆ. ಈ ಹಿನ್ನೆಲೆ ರೈಲ್ವೆ ಸಚಿವಾಲಯವು ಮಾರ್ಗಸೂಚಿಯನ್ನು ಪರಿಷ್ಕರಿಸಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಂದರ್ಭಗಳನ್ನು ನಿಭಾಯಿಸಲು ತನ್ನ ಸಿಬ್ಬಂದಿಗಳಿಗೆ ತರಬೇತಿ ನೀಡಲು ಸಚಿವಾಲಯ ನಿರ್ಧರಿಸಿದೆ.
ಈ ಪರಿಷ್ಕೃತ ಮಾರ್ಗಸೂಚಿಯಲ್ಲಿ ಮಾಡಬೇಕಾದ ಹಾಗೂ ಮಾಡಬಾರದಾದ ವಿಚಾರಗಳ, ಕಾರ್ಯಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಪ್ರಾಣಹಾನಿಯನ್ನು ತಡೆಗಟ್ಟುವುದು ಮತ್ತು ಆಸ್ತಿಗೆ ಆಗುವ ಹಾನಿಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

''ತೆವಳಿಕೊಂಡು ಹೋಗಿ'' - ಪ್ರಯಾಣಿಕರಿಗೆ ಸಿಬ್ಬಂದಿಗಳ ಸೂಚನೆ
ಈ ಹೊಸ ಮಾರ್ಗಸೂಚಿ ಪ್ರಕಾರ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ರೈಲಿನ ನಿಯಂತ್ರಕರು ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಹಾಗೆಯೇ ಸಿಬ್ಬಂದಿಗಳು ಪ್ರಯಾಣಿಕರು ಭಯದಿಂದ ರೈಲಿನಲ್ಲಿ ಓಡದಂತೆ ನೋಡಿಕೊಳ್ಳಬೇಕು. ಹಾಗೆಯೇ ಪ್ರಯಾಣಿಕರು ತೆವಳಿಕೊಂಡು ರೈಲಿನ ಸುರಕ್ಷಿತ ಬೋಗಿಗೆ ಹೋಗುವಂತೆ ಸಿಬ್ಬಂದಿಗಳು ತಿಳಿಸಬೇಕು. ಜನರು ಓಡುವುದು ಹೆಚ್ಚು ಅಪಾಯಕಾರಿ. ಬದಲಾಗಿ ತೆವಳಿಕೊಂಡು ಹೋದರೆ ಹೆಚ್ಚು ಸುರಕ್ಷಿತ ಎನ್ನಲಾಗಿದೆ.

ಜನರು ಭಯದಿಂದ ''ಓಡಬಾರದು'', ಯಾಕೆ?
ಇನ್ನು ಜನರು ಸಾಮಾನ್ಯವಾಗಿ ಯಾವುದೇ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗಿ ಓಡಲು ಆರಂಭಿಸುತ್ತಾರೆ. ಆದರೆ ಈ ಮಾರ್ಗಸೂಚಿಯಲ್ಲಿ ಸಿಬ್ಬಂದಿಗಳು ಜನರು ತೆವಳಿಕೊಂಡು ಸುರಕ್ಷಿತ ಭೋಗಿಗೆ ತೆರಳುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಹೆಚ್ಚಾಗಿ ರೈಲಿನಲ್ಲಿ ಆಗಲಿ ಅಥವಾ ಯಾವುದೇ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಜನರು ಸುಟ್ಟು ಮೃತರಾಗುವುದಕ್ಕಿಂತ ಉಸಿರುಗಟ್ಟಿ ಸಾವನ್ನಪ್ಪುವುದು ಅಧಿಕ. ಬೆಂಕಿ ಉರಿಯುವ ಸಂದರ್ಭದಲ್ಲಿ CO, CO2 ನಂತಹ ವಿಷಕಾರಿ ಅನಿಲಗಳು ಹಗುರವಾಗಿರುವುದರಿಂದ ಮೇಲಿನ ಭಾಗದಲ್ಲಿ ಹರಡುತ್ತವೆ. ಈ ಸಂದರ್ಭದಲ್ಲಿ ಆಮ್ಲಜನಕವು ಕೆಳಭಾಗದಲ್ಲಿ ಉಳಿಯುತ್ತದೆ. ಜನರು ಓಡಾಡಿದಾಗ ಈ ವಿಷಕಾರಿ ಅನಿಲಗಳಿಂದಾಗಿ ಸಾವನ್ನಪ್ಪುವ ಸಾಧ್ಯತೆ ಅಧಿಕವಾಗಿರುತ್ತದೆ. ಜನರ ಉಸಿರಾಟ ಅಗತ್ಯವಾದ ಆಮ್ಲಜನಕವು ಕೆಳಭಾಗದಲ್ಲಿ ಇರುವ ಕಾರಣ ಜನರು ತೆವಳಿಕೊಂಡು ಹೋದರೆ ಉಸಿರಾಟದ ಸಮಸ್ಯೆ ಉಂಟಾಗುವುದಿಲ್ಲ. ಇನ್ನು ಪ್ರಯಾಣಿಕರು ತಮ್ಮ ಮೂಗಿಗೆ ಒದ್ದೆಯಾದ ಬಟ್ಟೆಯನ್ನು ಮುಚ್ಚಲು ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಚಿಸಲು ಕೂಡಾ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸಮಯಕ್ಕೆ ಸರಿಯಾಗಿ ಕ್ರಮಕೈಗೊಳ್ಳದಿದ್ದರೆ 5 ನಿಮಿಷದಲ್ಲೇ ಸಾವು
''ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಜನರನ್ನು ರಕ್ಷಿಸಲು ಕೇವಲ ಕೆಲವೇ ನಿಮಿಷಗಳು ಲಭ್ಯವಿರುತ್ತದೆ. ಕೆಲವೇ ನಿಮಿಷಗಳಲ್ಲಿ ಹೊಗೆ ತುಂಬುವುದರಿಂದ ಪ್ರಯಾಣಿಕರು ದಿಗ್ಭ್ರಮೆಗೊಳ್ಳುತ್ತಾರೆ. ಕೇವಲ 2 ನಿಮಿಷಗಳಲ್ಲಿ ಹೊಗೆ ಉಸಿರುಗಟ್ಟುವಿಕೆಗೆ ಹಾಗೂ ಪ್ರಜ್ಞೆ ಕಳೆದುಕೊಳ್ಳಲು ಕಾರಣವಾಗಬಹುದು. ಹಾಗೆಯೇ ಮೈ ಮೇಲೆ ಬೆಂಕಿ ತಗುಲಿದರೆ 10-15 ಸೆಕೆಂಡುಗಳಲ್ಲಿ ಪ್ರಜ್ಞೆ ತಪ್ಪಬಹುದು. ಸಮಯಕ್ಕೆ ತಕ್ಕಂತೆ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ, ಅದು 5 ನಿಮಿಷಗಳಲ್ಲಿ ಸಾವು ಉಂಟಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಕ್ರಮಕೈಗೊಳ್ಳಬೇಕು,'' ಎಂದು ಮಾರ್ಗಸೂಚಿಯಲ್ಲಿ ಸಿಬ್ಬಂದಿಗಳಿಗೆ ಆದೇಶಿಸಲಾಗಿದೆ. ಇನ್ನು ಗಾಯಾಳುಗಳಿಗೆ ಚಿಕಿತ್ಸೆ ವಿಳಂಭವಾದರೆ ಒಆರ್ಎಸ್ ಹೊರತಾಗಿ ಬೇರೆ ಯಾವುದೇ ಪಾನೀಯ, ಆಹಾರ ನೀಡದಂತೆ ಸಿಬ್ಬಂದಿಗಳಿಗೆ ಸೂಚಿಸಿಲಾಗಿದೆ.

ಈ ಕಾರ್ಯಚರಣೆಯಲ್ಲಿ ಒಳಗೊಳ್ಳುವವರು ಯಾರು?
ಪ್ರತಿ ರೈಲಿನಲ್ಲಿ ಅಗ್ನಿ ಅವಘಡ ತ್ವರಿತ ಕ್ರಿಯಾ ತಂಡವನ್ನು ರಚಿಸಲು ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ತಂಡದಲ್ಲಿ ಚಾಲಕರು, ಸಿಬ್ಬಂದಿ, ಟಿಟಿಇ ಮತ್ತು ಇತರ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ. ಶೌಚಾಲಯ ಅಥವಾ ರೈಲಿನ ಇತರೆ ಸ್ಥಳಗಳನ್ನು ಸ್ವಚ್ಛಗೊಳಿಸುವ ಸಿಬ್ಬಂದಿಗಳು ಕೂಡ ಕ್ರಿಯಾ ತಂಡದ ಭಾಗವಾಗಲಿದ್ದಾರೆ. ಈ ''ಸಿಬ್ಬಂದಿಗಳ ಮೊಬೈಲ್ ಸಂಖ್ಯೆಗಳು ಪ್ರತಿ ರೈಲು ಪ್ರಯಾಣದ ಸಂದರ್ಭದಲ್ಲೂ ರೈಲ್ವೆ ಅಧಿಕಾರಿಗಳೊಂದಿಗೆ ಇರಬೇಕು. ಇದರಿಂದಾಗಿ ಅಗ್ನಿ ಅವಘಡ ಸಂಭವಿಸಿದಾಗ ತ್ವರಿತವಾಗಿ ಸಂಪರ್ಕಿಸಲು ಸಾಧ್ಯವಾಗಲಿದೆ,'' ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಚಾಲನೆಯಲ್ಲಿರುವ ಪ್ರತಿ ರೈಲಿನಲ್ಲಿ 18 ಅಗ್ನಿಶಾಮಕ ಯಂತ್ರಗಳಿದ್ದು ಅವುಗಳನ್ನು ಬಳಸಲು ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications