ದೇಶದ ಒಳಗೆ ನುಸುಳಲು ಯತ್ನಿಸುತ್ತಿದ್ದ ಪಾಕ್ ನ 10 ಉಗ್ರರ ಹತ್ಯೆ
ಕಾಶ್ಮೀರ, ಸೆ.20: ಪಾಕಿಸ್ತಾನದಿಂದ ಒಳ ನುಸುಳಸಲು ಯತ್ನಿಸುತ್ತಿದ್ದ ಹದಿನೈದು ಉಗ್ರರ ಪೈಕಿ ಹತ್ತು ಮಂದಿಯನ್ನು ಭಾರತೀಯ ಯೋಧರು ಕೊಂದಿದ್ದಾರೆ. ಮಂಗಳವಾರ ಮಧ್ಯಾಹ್ನ ಉರಿ ಸೆಕ್ಟರ್ ನ ಲಚೀಪುರ ಪ್ರದೇಶದಲ್ಲಿ ನಡೆದ ಆಪರೇಷನ್ ನಲ್ಲಿ ಉಗ್ರರನ್ನು ಕೊಲ್ಲಲಾಗಿದೆ. ಇತರ ಐವರಿಗಾಗಿ ಶೋಧ ಮುಂದುವರಿದಿದೆ.
ಉರಿ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಎರಡು ದಿನ ಕಳೆದಿದೆ. ಆ ದಾಳಿ ವೇಳೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಹದಿನೆಂಟು ಯೋಧರು ಹುತಾತ್ಮರಾಗಿದ್ದರು. ಇದಕ್ಕೂ ಮುನ್ನ ಉರಿ ಸೆಕ್ಟರ್ ನ ಗಡಿನಿಯಂತ್ರಣ ರೇಖೆ ಬಳಿ ಗುಂಡಿನ ದಾಳಿ ನಡೆಸಿತ್ತು. ಆ ನಂತರ ಉಗ್ರರು ಭಾರತದೊಳಗೆ ನುಸುಳುವುದು ಹೆಚ್ಚಾಗಿದೆ.[ಉರಿ ಭಯೋತ್ಪಾದಕ ದಾಳಿ, ಅಜರ್ ಮೇಲೆ ಎನ್ಐಎ ಟಾರ್ಗೆಟ್]
ಭಾನುವಾರ ಉರಿ ಸೆಕ್ಟರ್ ನ ಸೇನಾ ಕ್ಯಾಂಪ್ ಮೇಲೆ ದಾಳಿಯಾದ ನಂತರ ಹಲವು ಉಗ್ರಗಾಮಿಗಳು ದೇಶದ ಗಡಿಯೊಳಗೆ ನುಸುಳಲು ಹೊಂಚು ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ. ಬುರ್ಹಾನ್ ವನಿ ಎನ್ ಕೌಂಟರ್ ಆದ ಜುಲೈ 9ರಿಂದ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿತ್ತು. ಆ ನಂತರ ರಾಜ್ಯದೊಳಗೆ ನುಸುಳಿರುವ ಉಗ್ರರನ್ನು ಹೇಳ ಹೆಸರಿಲ್ಲದಂತೆ ಮಾಡುವುದಕ್ಕೆ ಸೇನೆ ಹಾಗೂ ಗುಪ್ತಚರ ದಳ ಒಟ್ಟಾಗಿ ಕೆಲಸ ಮಾಡುತ್ತಿದೆ.
ಉರಿ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಎಫ್ ಐಆರ್ ದಾಖಲಿಸಿದೆ. ಮೃತ ಉಗ್ರಗಾಮಿಗಳ ಡಿಎನ್ ಎ ಮಾದರಿಯನ್ನು ಸಂಗ್ರಹಿಸಿದೆ. ಜತೆಗೆ ಉಗ್ರರು ಬಳಸಿದ ಜಿಪಿಎಸ್ ಅನ್ನು ಅಮೆರಿಕಾದ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇದರಿಂದ ಉಗ್ರರು ಬಳಸಿದ ದಾರಿ ತಿಳಿಯುತ್ತದೆ.[ಬಂದರು, ಕೊಂದರು, ಸತ್ತರು: ಉಗ್ರರನ್ನು ಕೊಂದದ್ದು 12 ನಿಮಿಷದಲ್ಲಿ]
ಪಾಕಿಸ್ತಾನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ಮಾಡಲು ಭಾರತ ಸೋಮವಾರ ನಿರ್ಧರಿಸಿದೆ. ಅದರ ಮೊದಲ ಹೆಜ್ಜೆಯಾಗಿ ವಿದೇಶಾಂಗ ಸಚಿವರು ಸೆ.26ರಂದು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಬಲವಾದ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ.