ಪಾಕ್ ನಲ್ಲಿ ನಡೆಯುವ SAARC ಸಮ್ಮೇಳನಕ್ಕೆ ಪ್ರಧಾನಿ ಮೋದಿಗೆ ಆಹ್ವಾನ
ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನವು SAARC (ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜಿನಲ್ ಕೋ ಆಪರೇಷನ್) ಸಮ್ಮೇಳನಕ್ಕೆ ಆಹ್ವಾನ ಮಾಡಲಿದೆ ಎಂದು ಅಲ್ಲಿನ ದಿನ ಪತ್ರಿಕೆ 'ಡಾನ್' ವರದಿ ಮಾಡಿದೆ. ವಿದೇಶಾಂಗ ಕಚೇರಿ ವಕ್ತಾರರ ಹೇಳಿಕೆ ಆಧರಿಸಿ ಈ ವರದಿ ಮಾಡಲಾಗಿದೆ.
"ಗಡಿಯಾಚೆಗಿನ ಭಯೋತ್ಪಾದನಾ ದಾಳಿ" ಕಾರಣಕ್ಕೆ 2016ರಲ್ಲಿ ಪಾಕಿಸ್ತಾನದ ಸಾರ್ಕ್ ಸಮ್ಮೇಳನವನ್ನು ಭಾರತ ಬಹಿಷ್ಕರಿಸಿತ್ತು. ಆ ನಂತರ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್ ಕೂಡ ಆ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದವು. ಎಂಟು ರಾಷ್ಟ್ರಗಳ ಪೈಕಿ ಯಾವುದೇ ಒಂದು ದೇಶ ಹಿಂದಕ್ಕೆ ಸರಿದರೆ ಸಾರ್ಕ್ ಸಮ್ಮೇಳನ ಸಾಧ್ಯವಿಲ್ಲ. ಕೊನೆಗೆ ಆ ಸಲ ಸಮ್ಮೇಳನವೇ ರದ್ದಾಗಿತ್ತು.
ಜಮ್ಮು-ಕಾಶ್ಮೀರದ ಉರಿಯಲ್ಲಿ ಸೇನಾ ಕ್ಯಾಂಪ್ ಮೇಲೆ ನಾಲ್ವರು ಉಗ್ರರು ನಡೆಸಿದ ಉಗ್ರರ ದಾಳಿ ಹಾಗೂ ಹದಿನೆಂಟು ಮಂದಿಯ ಹತ್ಯೆಯನ್ನು ಖಂಡಿಸಿ, ಸಮ್ಮೇಳನದಿಂದ ಹಿಂದಕ್ಕೆ ಸರಿದಿತ್ತು. ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುವ ಅಭಿಯಾನಕ್ಕೆ ಚಾಲನೆ ನೀಡುವ ಸಲುವಾಗಿ ಈ ನಿರ್ಧಾರ ಮಾಡಲಾಗಿತ್ತು.

ಪಂಜಾಬ್ ನ ಅಮೃತ್ ಸರ್ ನಲ್ಲಿ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆದು, ಮೂವರು ಮೃತಪಟ್ಟ ಕೆಲ ದಿನಗಳಿಗೆ ಈ ವರ್ಷದ ಸಮ್ಮೇಳನದ ಬಗ್ಗೆ ಮಾತು ಬಂದಿದೆ. ಈ ದಾಳಿಯ ಕಾರಣಕ್ಕೆ ಪಂಜಾಬ್ ನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕರ್ತರ್ ಪುರ್ ಕಾರಿಡಾರ್ ಯೋಜನೆಯ ಶಂಕುಸ್ಥಾಪನೆಗೆ ತೆರಳುವುದಿಲ್ಲ ಎಂದು ಹೇಳಿದ್ದಾರೆ.
ಐದು ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಕೆಲಸ ಇರುವ ಕಾರಣ ಕಾರಣಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಳ್ಳುವುದಿಲ್ಲ. ಹರ್ ಸಿಮ್ರತ್ ಕೌರ್ ಹಾಗೂ ಹರ್ ದೀಪ್ ಸಿಂಗ್ ಪುರಿ ಭಾರತವನ್ನು ಪ್ರತಿನಿಧಿಸಿ ಪಾಕಿಸ್ತಾನದಲ್ಲಿ ನಡೆಯುವ ಕಾರಿಡಾರ್ ಶಂಕುಸ್ಥಾಪನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications