ಮನ್ ಕಿ ಬಾತ್: ಪದ್ಮ ಪುರಸ್ಕೃತ ಸಾಮಾನ್ಯರ ಮಾತು, ರಾಜ್ಯದ ಸೀತವ್ವನ ಸ್ಮರಣೆ
ನವದೆಹಲಿ, ಜನವರಿ 28: ಕಳೆದ ಮೂರು ವರ್ಷಗಳಲ್ಲಿ ಪದ್ಮ ಪ್ರಶಸ್ತಿ ವಿತರಣೆಯಲ್ಲಿ ಪಾರದರ್ಶಕತೆ ತರಲಾಗಿದ್ದು, ಅಸಾಮಾನ್ಯ ಕಾರ್ಯ ಮಾಡಿದ ದೇಶದ ಸಾಮಾನ್ಯರಿಗೆ ಪದ್ಮ ಪುರಸ್ಕಾರ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ನಲ್ಲಿ ಹೇಳಿದರು.
ಈ ಬಾರಿ ಪದ್ಮ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಬೆಳಗಾವಿಯ ಸೀತವ್ವ ಜೋಡಟ್ಟಿ ಅವರನ್ನು ತಮ್ಮ ಮಾತಿನಲ್ಲಿ ಸ್ಮರಿಸಿದ ಪ್ರಧಾನಿ ಅವರು 'ಸೀತವ್ವ ದೇವದಾಸಿಯರ ಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಟ್ಟವರು, ದಲಿತ ಮಹಿಳೆಯರ ಅಭಿವೃದ್ಧಿಗೆ ಅವರ ಕಾರ್ಯ ಅನನ್ಯ' ಎಂದು ಕೊಂಡಾಡಿದರು.
ಪದ್ಮ ಪ್ರಶಸ್ತಿಗೆ ಪರಿಗಣಿಸುವವರ ಹೆಸರು ಮುಖ್ಯ ಅಲ್ಲ, ಅವರ ಕಾರ್ಯ ಮುಖ್ಯ ಎಂದು ಹೇಳಿದ ಅವರು, ಸಾಮಾನ್ಯ ಜನರೂ ಕೂಡ ತಮ್ಮ ಸುತ್ತಲಿನ ಅಸಾಮಾನ್ಯ ವ್ಯಕ್ತಿಗಳನ್ನು ಪದ್ಮ ಪ್ರಶಸ್ತಿಗೆ ಸೂಚಿಸುವಂತೆ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತೋರ್ವ ಯುವಕ ಮೈಸೂರಿನ ದರ್ಶನ್ ಅವರ ಬಗ್ಗೆಯೂ ಮನ್ ಕಿ ಬಾತ್ನಲ್ಲಿ ಉಲ್ಲೇಖಿಸಿದ ಪ್ರಧಾನಿ ಅವರು ಮೈಸೂರಿನ ದರ್ಶನ್ ಅವರು ಪ್ರಧಾನಮಂತ್ರಿ ಜನ ಔಷದ ಕೇಂದ್ರದಿಂದ ಪ್ರತಿ ತಿಂಗಳು ಆರು ಸಾವಿರ ಉಳಿಸುತ್ತಿದ್ದಾರೆಂದು ನನಗೆ ಪತ್ರ ಬರೆದಿದ್ದಾರೆ ಎಂದರು.
ಮನ್ ಕಿ ಬಾತ್ನ ಮುಕ್ಯಾಂಶಗಳು ಇಂತಿವೆ
* ಆದಿವಾಸಿ ಕಲ್ಯಾಣಕ್ಕಾಗಿ ಎಲ್ಲರೂ ಒಟ್ಟಿಗೆ ಶ್ರಮಿಸುವ ಅಗತ್ಯವಿದೆ.
* ಪ್ರಧಾನ ಮಂತ್ರಿ ಜನ ಔಷದ ಕೇಂದ್ರದಲ್ಲಿ ಇತರೆಡೆಗಿಂತ ಶೇ 50 -90 ಪ್ರತಿಶತ ಕಡಿಮೆ ದರಕ್ಕೆ ಔಷದಗಳು ಲಭ್ಯವಿದೆ.
* ದೇಶದಲ್ಲಿ ಈ ವರೆಗೆ 30000 ಜನ ಔಷದ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಇಲ್ಲಿ ಮಾರಾಟವಾಗುವ ಔಷದಗಳು WHO ಪ್ರಮಾಣಿತವಾಗಿವೆ.
* ಸ್ವಚ್ಛ ಭಾರತ ಅಭಿಯಾನಕ್ಕೆ ಸಾರ್ವಜನಿಕರ ಬೆಂಬಲ ಅತ್ಯಂತ ಅವಶ್ಯಕ.
* ಮೋರನಾ ನದಿ ಸ್ವಚ್ಛತೆಗೆ 6000 ಮಂದಿ ಕೊಂಟ ಕಟ್ಟಿದ್ದಾರೆ. 100 ಎನ್ಜಿಒ ಗಳು, ಸಹಸ್ರಾರು ವಿದ್ಯಾರ್ಥಿಗಳು ಪ್ರತಿ ಶನಿವಾರ ನದಿ ಸ್ವಚ್ಛತೆ ಮಾಡುತ್ತಿದ್ದಾರೆ.
* ಫೆಬ್ರವರಿ 1ಕ್ಕೆ ಕಲ್ಪನಾ ಚಾವ್ಲಾ ಪುಣ್ಯಸ್ಮರಣೆ. ಕಲ್ಪನಾ ಚಾವ್ಲಾ ಭಾರತದ ಹಿರಿಮೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ಆಕೆ ಲಕ್ಷಾಂತರ ಜನಕ್ಕೆ ಸ್ಪೂರ್ತಿ.
* ಮಹಿಳೆಯರು ಹಲವು ಕ್ಷೇತ್ರದಲ್ಲಿ ಗುರುತರವಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಮಹಿಳೆಯರು ನಾಯಕರಾಗಿ ಬೆಳೆಯುತ್ತಿದ್ದಾರೆ.
* ಭಾವನಾ ಕಾಂತ್, ಮೋಹನಾ ಸಿಂಗ್, ಅವನಿ ಚತುರ್ವೇದಿ ಅವರುಗಳು ಮೊದಲ ಮಹಿಳಾ ಫೈಟರ್ ಫ್ಲೈಟ್ ಫೈಲೆಟ್ಗಳಾಗಿದ್ದಾರೆ ಅವರು ಸುಖೋಯ್ ಯುದ್ಧ ವಿಮಾನ ಹಾರಾಟದ ತರಬೇತಿ ಪಡೆಯುತ್ತಿದ್ದಾರೆ.
* ಮುಂಬೈನ ಮಾತುಂಗಾ ರೈಲು ನಿಲ್ದಾಣ ಸಂಪೂರ್ಣ ಮಹಿಳೆಯರ ಆಡಳಿತದಲ್ಲೇ ಇರುವ ರೈಲು ನಿಲ್ದಾಣ. ಅಲ್ಲಿನ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಎಲ್ಲರೂ ಮಹಿಳೆಯರೇ.
* ಚತ್ತೀಸ್ಘಡದ ದಂತೇವಾಡದ ಮಹಿಳೆಯರನ್ನು ಪ್ರಶಂಸಿಸುತ್ತೇನೆ. ಅದು ಮಾವೋವಾದಿಗಳ ಉಪಟಳ ಹೆಚ್ಚಿರುವ ಪ್ರದೇಶವಾದರೂ ಅಲ್ಲಿನ ಮಹಿಳೆಯರು ಹೆದರದೆ ಆಟೋಗಳನ್ನು ಓಡಿಸಿ ಸಂಸಾರ ನಿಭಾಯಿಸುತ್ತಿದ್ದಾರೆ. ಜೊತೆಗೆ ಅಲ್ಲಿನ ಭಯದ ವಾತಾವರಣವನ್ನು ಹೋಗಲಾಡಿಸುತ್ತಿದ್ದಾರೆ.
* ಮಧ್ಯ ಪ್ರದೇಶದ ಅರವಿಂದ ಗುಪ್ತಾ ಅವರು ತ್ಯಾಜ್ಯದಿಂದ ಮಕ್ಕಳಿಗೆ ಬೊಂಬೆಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ. ಹೊಸ ವಿಷಯಗಳ ಬಗ್ಗೆ ಮಕ್ಕಳಿಗೆ ಜ್ಞಾನ ತುಂಬುತ್ತಾರೆ.
* ಕೇರಳದ ಲಕ್ಷ್ಮಿ ಕುಟ್ಟಿ ಈಗಲೂ ಗುಡಿಸಲೊಂದರಲ್ಲಿ ವಾಸಿಸುತ್ತಾರೆ ಅವರು 500 ಕ್ಕೂ ಹೆಚ್ಚು ಆಯುರ್ವೇದ ಮದ್ದುಗಳನ್ನು ತಯಾರಿಸುತ್ತಾರೆ. ಹಾವು ಕಚ್ಚಿದರೂ ಅವರ ಬಳಿ ಔಷದವಿದೆ.
* ಇದೇ ತಿಂಗಳಲ್ಲಿ ಮಹಾತ್ಮಾ ಗಾಂಧಿ ಅವರು ದ.ಆಫ್ರಿಕಾದಿಂದ ಭಾರತಕ್ಕೆ ವಾಪಾಸ್ಸಾಗಿದ್ದರು. ಅವರ ದಾರಿಯಲ್ಲಿ ನಾವೂ ನಡೆಯಬೇಕಿದೆ.












Click it and Unblock the Notifications