ಈ ಮೂರು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ
ನವದೆಹಲಿ, ಆಗಸ್ಟ್ 28: ದೇಶದಲ್ಲಿ ಮುಂಗಾರು ಪ್ರಭಾವ ಮುಂದುವರೆದಿದ್ದು, ಶನಿವಾರದಿಂದ ಮೂರು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಶನಿವಾರದಿಂದ ಆಗಸ್ಟ್ 30ರವರೆಗೂ ಅಧಿಕ ಮಟ್ಟದಲ್ಲಿ ಮಳೆಯಾಗುವುದೆಂದು ಮುನ್ಸೂಚನೆ ನೀಡಿದೆ.
ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳವರೆಗೆ ವ್ಯಾಪಕ ಮಳೆಯಾಗಲಿದೆ. ತಮಿಳುನಾಡು, ಕೇರಳದ ಘಾಟಿ ಪ್ರದೇಶಗಳಲ್ಲಿ ಶನಿವಾರ ಹಾಗೂ ಭಾನುವಾರ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ. ಮುಂದೆ ಓದಿ...
ಆಗಸ್ಟ್ 30ರವರೆಗೆ ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ; IMD
ಕೇರಳದಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಕೇರಳದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಸೂಚನೆಯನ್ನು ನೀಡಲಾಗಿದ್ದು, ಆಗಸ್ಟ್ 28 ಹಾಗೂ 29ರಂದು ರಾಜ್ಯದ ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಹಾಗೂ ಕಣ್ಣೂರಿನಲ್ಲಿ ಶನಿವಾರ ಅಧಿಕ ಮಟ್ಟದಲ್ಲಿ ಮಳೆಯಾಗುವುದಾಗಿ ತಿಳಿಸಿದೆ. ಭಾನುವಾರ ಕೊಟ್ಟಾಯಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ ಹಾಗೂ ವಯನಾಡ್ನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನೈಋತ್ಯ ಮುಂಗಾರು ಕೇರಳದ ಮೇಲೆ ತೀವ್ರವಾಗಲಿದೆ ಎಂದು ಹೇಳಿದೆ. ತೆಲಂಗಾಣದಲ್ಲಿಯೂ ಆಗಸ್ಟ್ 29ರವರೆಗೆ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕದ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 30ರವರೆಗೂ ಭಾರೀ ಮಳೆ ಸೂಚನೆಯನ್ನು ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಒಟ್ಟು ಹದಿನಾರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶನಿವಾರ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸೂಚನೆ ನೀಡಲಾಗಿದೆ.
ವಾಯುಭಾರ ಕುಸಿತ: ರಾಜ್ಯದ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಈಶಾನ್ಯ ರಾಜ್ಯಗಳಲ್ಲಿ ಮುಂದುವರೆಯಲಿದೆ ಮಳೆ
ಈಶಾನ್ಯ ರಾಜ್ಯಗಳಲ್ಲಿ ಆಗಸ್ಟ್ 30ರವರೆಗೂ ಮಳೆ ಮುಂದುವರೆಯಲಿದ್ದು, ಉತ್ತರಾಖಂಡ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕ ಮಳೆಯಾಗಲಿದೆ. ಆಗಸ್ಟ್ 29ರಂದು ಉತ್ತರಾಖಂಡದಲ್ಲಿ ಹಾಗೂ ಆಗಸ್ಟ್ 28ರಂದು ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ಸೂಚನೆ ನೀಡಿದೆ. ದೆಹಲಿಯಲ್ಲಿಯೂ ಸದ್ಯ ಮಳೆಯಾಗುತ್ತಿದ್ದು, ವಾಯವ್ಯ ರಾಜ್ಯಗಳಲ್ಲಿ ಮುಂಗಾರು ವಿರಾಮ ಪಡೆದುಕೊಳ್ಳುವುದಾಗಿ ತಿಳಿಸಿದೆ. ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯದಲ್ಲಿಯೂ ಮಳೆಯಾಗುವುದಾಗಿ ಹೇಳಿದೆ.
ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತಕ್ಕೆ ಪ್ರಬಲ ಆಗ್ನೇಯ/ ನೈಋತ್ಯ ಮಾರುತಗಳು ಬೀಸಲಿದ್ದು, ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
Recommended Video
ಹಿಮಾಚಲ ಪ್ರದೇಶದಲ್ಲಿ ಮುಂದಿನ ಮೂರ್ನಾಲ್ಕು ದಿನ ಮಳೆ
ಹಿಮಾಚಲ ಪ್ರದೇಶದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಅಧಿಕ ಮಳೆಯಾಗಲಿದೆ. ಆನಂತರ ಮಳೆ ಪ್ರಮಾಣ ತಗ್ಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಚಂಬಾ, ಕಂಗ್ರಾ, ಮಂಡಿ, ಸಿರಮೌರ್ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ. ಆಗಸ್ಟ್ 28ರಿಂದ 30ರವರೆಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಪೂರ್ವ ಭಾರತದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ನೈಋತ್ಯ ಹಾಗೂ ಮಧ್ಯ ಭಾರತದಲ್ಲಿ ಮುಂದಿನ ಎರಡು ದಿನಗಳವರೆಗೆ ಚದುರಿದ ಮಳೆಯಾಗುತ್ತದೆ ಎಂದು ತಿಳಿಸಿದೆ.
ವಾಯವ್ಯ ಹಾಗೂ ಕೇಂದ್ರ ಭಾರತದಲ್ಲಿ ಆಗಸ್ಟ್ 28ರವರೆಗೆ ಕಡಿಮೆ ಮಟ್ಟದ ಮಳೆಯಾಗಲಿದ್ದು, ಆನಂತರ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಇಲಾಖೆ ತಿಳಿಸಿದೆ.
ಆಗಸ್ಟ್ ಎರಡನೇ ವಾರದಲ್ಲಿ ವಿರಾಮ ಪಡೆದುಕೊಂಡಿದ್ದ ಮಳೆ ತಿಂಗಳ ಅಂತ್ಯದಲ್ಲಿ ಚುರುಕುಪಡೆಯಲಿದೆ ಎಂದು ತಿಳಿಸಿದೆ.