'ರೋಗಗ್ರಸ್ತ ವಿಮಾನದಲ್ಲಿ ಹಾರಲಿದ್ದೇನೆ, ಅಪ್ಪಾ'
ಸೋನಿಪಠ್, ಜೂನ್ 30: 'ಘಟನೆಗೆ ಕೆಲವು ಗಂಟೆಗಳ ಹಿಂದಷ್ಟೇ ಅವಳು ಕರೆ ಮಾಡಿ ಮಾತನಾಡಿದ್ದಳು. ರೋಗಗ್ರಸ್ತ ವಿಮಾನದಲ್ಲಿ ಹಾರಾಟ ನಡೆಸಲಿದ್ದೇನೆ ಎಂದು ಹೇಳಿದ್ದಳು' ಎನ್ನುತ್ತಾ ಭಾವುಕರಾದರು ಎಸ್ಪಿ ಗುಪ್ತಾ.
ಮುಂಬೈನ ವಸತಿ ಪ್ರದೇಶದಲ್ಲಿ ನಡೆದ ಲಘು ವಿಮಾನ ಅಪಘಾತದಲ್ಲಿ ಸಾವಿಗೀಡಾದ ಐವರಲ್ಲಿ ಒಬ್ಬರಾದ ನಿರ್ವಹಣಾ ಎಂಜಿನಿಯರ್ ಸುರಭಿ ಗುಪ್ತಾ ಅವರ ತಂದೆ ಮಾತಿಗಿಳಿದಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.
'ನಾವು ಗುರುವಾರ ಬೆಳಿಗ್ಗೆಯಷ್ಟೇ ಫೋನ್ನಲ್ಲಿ ಮಾತನಾಡಿದ್ದೆವು. ವಿಮಾನ ಸ್ಥಿತಿ ತುಂಬಾ ಹದಗೆಟ್ಟಿದೆ. ಅದರಲ್ಲಿಯೇ ಹಾರಾಟ ನಡೆಸಲಿದ್ದೇನೆ ಎಂದು ಅವಳು ತಿಳಿಸಿದ್ದಳು' ಎಂದು ಗುಪ್ತಾ ಅವರು ಹರಿಯಾಣದ ಸೋನಿಪಠ್ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆ ರೋಗಗ್ರಸ್ಥ ವಿಮಾನದ ಹಾರಾಟ ನಡೆಸಲು ಹೇಗೆ ಅನುಮತಿ ನೀಡಲಾಯಿತು. ಅನುಮತಿ ನೀಡಿದವರು ಯಾರು ಎಂದು ದುಃಖತಪ್ತ ತಂದೆ ನೋವಿನಿಂದಲೇ ಪ್ರಶ್ನಿಸಿದರು.
ಈ ಘಟನೆ ಸ್ಪಷ್ಟ ನಿರ್ಲಕ್ಷ್ಯದ ಪ್ರಕರಣ. ಮುನ್ನೆಚ್ಚರಿಕೆ ವಹಿಸಿದ್ದರೆ ಈ ಘಟನೆಯನ್ನು ತಡೆಯಬಹುದಾಗಿತ್ತು
ಈ ದುರಂತದ ಕುರಿತು ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಲಿದ್ದಾರೆ ಮತ್ತು ಅದಕ್ಕೆ ಹೊಣೆಗಾರರಾದ ವ್ಯಕ್ತಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುರಭಿ ಅವರು ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ಅವರ ಪತಿ ಕೂಡ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಕೆ ಧೈರ್ಯಶಾಲಿ ಯುವ ಮಹಿಳೆ. ಅವಳಿಗೆ ಎತ್ತರಕ್ಕೆ ಏರುವುದು ಎಂದರೆ ಇಷ್ಟವಾಗಿತ್ತು. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಆಕೆಯನ್ನು ಸನ್ಮಾನಿಸಿತ್ತು ಎಂದು ಅವರ ತಂದೆ ನೆನಪಿಸಿಕೊಂಡರು.












Click it and Unblock the Notifications