ಪಾಟ್ನಾದಲ್ಲಿ ಮೋದಿ ಹತ್ಯೆಗೆ ಮಾನವ ಬಾಂಬರ್ ಬಂದ್ದಿದ್ರು
ಪಾಟ್ನಾ, ನ. 14 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪಾಟ್ನಾ ಸಮಾವೇಶದ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಲು ಸಕಲ ರೀತಿಯಲ್ಲಿ ಸಜ್ಜಾಗಿದ್ದೆವು ಆದರೆ, ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದ ಯೋಜನೆಗೆ ಹಿನ್ನಡೆ ಉಂಟಾಯಿತು ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತ ಉಗ್ರ ಇಮ್ತಿಯಾಜ್ ನೀಡಿದ್ದಾನೆ. ಮಾನವ ಬಾಂಬರ್ ಗಳನ್ನು ಸ್ಫೋಟಕ್ಕೆ ಬಳಸಲಾಗಿತ್ತು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಅ.27ರ ಭಾನುವಾರ ನರೇಂದ್ರ ಮೋದಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಹೂಂಕಾರ್ ಸಮಾವೇಶ ಉದ್ದೇಶಿಸಿ ಮಾತನಾಡುವ ಮೊದಲು ನಗರದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸಮಾವೇಶದ ನಡೆದ ಮೈದಾನದಲ್ಲಿಯೂ ಬಾಂಬ್ ಸ್ಫೋಟಗೊಂಡಿತ್ತು. ಸದ್ಯ ಇದರ ತನಿಖೆ ಮುಂದುವರೆದಿದ್ದು, ಬಂಧಿತ ಆರೋಪಿ ಇಮ್ತಿಯಾಜ್ ಸ್ಫೋಟದ ಮಾಹಿತಿ ಹೊರಹಾಕುತ್ತಿದ್ದಾನೆ.

ಇಂಡಿಯನ್ ಮುಜಾಹಿದೀನ್ ಆದೇಶದಂತೆ ಎಲ್ಲಾ ಸ್ಫೋಟಗಳನ್ನು ನಡೆಸಲಾಗಿತ್ತು. ಸ್ಥಳೀಯ ಮತ್ತು ಜಾರ್ಖಂಡ್ ಯುವಕರನ್ನು ಕೃತ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು ಎಂದು ಇಮ್ತಿಯಾಜ್ ಹೇಳಿದ್ದಾನೆ. ಅವನು ನೀಡಿರುವ ಮಾಹಿತಿಯಂತೆ ಭಾನುವಾರ ಮುಂಜಾನೆ ಎಲ್ಲಾ ಬಾಂಬ್ ಗಳನ್ನು ಸ್ಥಳದಲ್ಲಿ ಇಡಲಾಗಿತ್ತು. ತಾಂತ್ರಿಕ ತೊಂದರೆಯಿಂದಾಗಿ ಎರಡು ಬಾಂಬ್ ಗಳು ಸ್ಫೋಟಗಳಲಿಲ್ಲ ಎಂದು ತಿಳಿಸಿದ್ದಾನೆ.
ಮೋದಿ ಸಮಾವೇಶ ನಡೆಯುವ ಸ್ಥಳಲ್ಲಿ ಸ್ವತಃ ಸ್ಫೋಟಿಸಿಕೊಳ್ಳಲು ಮಾನವ ಬಾಂಬರ್ ಗಳನ್ನು ಕರೆತರಲಾಗಿತ್ತು. ಆದರೆ, ಬಾಂಬ್ ಗಳಿಗೆ ಬ್ಯಾಟರಿ ಮತ್ತು ಟೈಮರ್ ಜೋಡಿಸುವಾಗ ತಾಂತ್ರಿಕ ತೊಂದರೆ ಉಂಟಾಗಿ ಆ ಯೋಜನೆ ಕೈಗೂಡಲಿಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ನರೇಂದ್ರ ಮೋದಿ ಭಾಷಣ ಮಾಡಿದ ವೇದಿಕೆ ಕೆಳಗಿದ್ದ ಬಾಂಬ್ ಸಹ ತಾಂತ್ರಿಕ ಕಾರಣದಿಂದ ಕೈ ಕೊಟ್ಟಿತ್ತು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. (ಪಾಟ್ನಾದಲ್ಲಿ ಸರಣಿ ಬಾಂಬ್ ಸ್ಫೋಟ, ಐವರು ಸಾವು)
ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಡುವಾಗಲೇ ಅದು ಸ್ಫೋಟಗೊಂಡು ಉಗ್ರನೊಬ್ಬ ಗಾಯಗೊಂಡಿದ್ದ, ಅವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಎಂಬ ಮಾಹಿತಿಯನ್ನು ಇಮ್ತಿಯಾಜ್ ನೀಡಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಬಂಧಿತರಾದ ಆಯಿಷಾ ಬಾನು ದಂಪತಿಯು ಬಿಹಾರಕ್ಕೆ ತಲುಪಿದ್ದು, ಅವರ ವಿಚಾರಣೆ ನಂತರವೂ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಇದೆ.











Click it and Unblock the Notifications