ಪಂಜಾಬ್ ಸಿಎಂ ಮನೆ ಬಳಿ ಭುಗಿಲೆದ್ದ ಪ್ರತಿಭಟನೆ, ಲಾಠಿ ಪ್ರಹಾರ
ಸಂಗ್ರೂರ್, ನವೆಂಬರ್ 30: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಬಾಡಿಗೆ ನಿವಾಸದ ಹೊರಗೆ ಪ್ರತಿಭಟನಾ ನಿರತ ಕೃಷಿ ಕಾರ್ಮಿಕರ ಮೇಲೆ ಸಂಗ್ರೂರ್ ಪೊಲೀಸರು ಬುಧವಾರ ಲಾಠಿ ಚಾರ್ಜ್ ಮಾಡಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ 2005ರ (ಎಂಜಿಎನ್ಆರ್ಇಜಿಎ) ಅಡಿಯಲ್ಲಿ ಕನಿಷ್ಠ ದಿನಗೂಲಿಯನ್ನು ₹ 700 ಕ್ಕೆ ಹೆಚ್ಚಿಸಬೇಕು, ದಲಿತರಿಗೆ ಐದು ಮರ್ಲಾ ಪ್ಲಾಟ್ಗಳನ್ನು ನೀಡಬೇಕು ಮತ್ತು ಸಮುದಾಯಕ್ಕೆ ಸಾಮಾನ್ಯ ಪಂಚಾಯತಿ ಭೂಮಿಯ ಮೂರನೇ ಭಾಗವನ್ನು ಗುತ್ತಿಗೆಗೆ ಹಂಚಿಕೆ ಮಾಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಸೋನಿಯಾ ಗಾಂಧಿ ಗನ್ ಮ್ಯಾನ್ ಭೇಟಿ ಮಾಡಿ, ಹೈಕಮಾಂಡ್ ಭೇಟಿ ಎನ್ನುತ್ತಿದ್ದರು: ಬಿಜೆಪಿ ವ್ಯಂಗ್ಯ
ಎಂಟು ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಸಂಝಾ ಮಜ್ದೂರ್ ಮೋರ್ಚಾದ ಧ್ವಜದ ಅಡಿಯಲ್ಲಿ ಪ್ರತಿಭಟನೆ ನಡೆಸಿದರು. ಸಂಗ್ರೂರಿನ ಪಟಿಯಾಲ-ಭಟಿಂಡಾ ರಸ್ತೆಯ ಬಳಿ ಬೆಳಗ್ಗೆ ನೂರಾರು ಕೃಷಿ ಕಾರ್ಮಿಕರು ಜಮಾಯಿಸಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳ ಬಾಡಿಗೆ ನಿವಾಸದ ಕಡೆಗೆ ಮೆರವಣಿಗೆ ಹೊರಟರು.
ಭಗವಂತ್ ಮನ್ ಅವರ ನಿವಾಸ ಇರುವ ಖಾಸಗಿ ಕಾಲೋನಿಗೆ ಪ್ರತಿಭಟನಾಕಾರರು ತಲುಪಿದಾಗ, ಪೊಲೀಸರು ಅವರ ಮೇಲೆ ಬಲಪ್ರಯೋಗ ಮಾಡಲು ಪ್ರಾರಂಭಿಸಿದರು. ಉದ್ರಿಕ್ತ ಕಾರ್ಮಿಕರು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆಗ ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ಸಂಗ್ರೂರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮನ್ಪ್ರೀತ್ ಸಿಂಗ್, ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪೊಲೀಸರ ತಂಡದ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಹೊಡೆಯುವುದು ವಿಡಿಯೊಗಳಲ್ಲಿ ಕಂಡುಬಂದಿದೆ. ಸಿಪಿ ಮನ್ಪ್ರೀತ್ ಸಿಂಗ್ ಅವರು ಪ್ರತಿಭಟನಾಕಾರರನ್ನು ಹೊಡೆಯುವುದನ್ನು ಮತ್ತು ಇತರ ಪೊಲೀಸರಿಗೆ ಹೊಡೆಯಲು ನಿರ್ದೇಶನ ನೀಡುತ್ತಿರುವುದನ್ನು ವಿಡಿಯೊಗಳಲ್ಲಿ ಕಾಣಬಹುದು.
ಈ ಘಟನೆಯ ಕುರಿತು ಜಮೀನ್ ಪ್ರಾಪ್ತಿ ಸಂಘರ್ಷ ಸಮಿತಿಯ ಅಧ್ಯಕ್ಷ ಮುಖೇಶ್ ಮಾಲಾದ್ ಮಾತನಾಡಿ, 'ಈ ಹಿಂದೆ ಮುಖ್ಯಮಂತ್ರಿಗಳು ನಮ್ಮ ಸಭೆ ನಡೆಸಿದ್ದರು. ಅದರ ನಂತರ ಅವರು ನಮ್ಮನ್ನು ಭೇಟಿ ಮಾಡಲು ನಿರಾಕರಿಸಿದರು. ಈಗ, ನಮ್ಮ ಬೇಡಿಕೆಗಳು ಈಡೇರಬೇಕು. ಆ ಕಾರಣಕ್ಕಾಗಿ ನಾವು ಪ್ರತಿಭಟನೆಗೆ ಇಳಿದಿದ್ದೇವೆ' ಎಂದು ತಿಳಿಸಿದ್ದಾರೆ.