NRC ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ
ನವದೆಹಲಿ, ಫೆಬ್ರವರಿ 04: ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್ಆರ್ಸಿ) ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ ಹೊರಡಿಸಲಾಗಿದೆ. ರಾಷ್ಟ್ರವ್ಯಾಪಿ ಎನ್ ಆರ್ ಸಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಗೃಹ ಸಚಿವಾಲಯದ ಪರವಾಗಿ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿಂದು ಲಿಖಿತ ಉತ್ತರ ನೀಡಿದರು.
ದೇಶದೆಲ್ಲೆಡೆ ಎನ್ಆರ್ಸಿ ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಾಗಿದೆಯೆ? ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ, ಇಲ್ಲಿ ತನಕ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಜಾರಿಯಲ್ಲಿದ್ದು ಉಭಯ ಸದನಾಗಳಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್) ವಿರುದ್ಧ ವಿಪಕ್ಷಗಳು ದನಿಯೆತ್ತಿವೆ.
ಕೇಂದ್ರ ಸರ್ಕಾರದ ಜಾರಿಗೆ ತರಲು ಹೊರಟಿರುವ ಎನ್ಪಿಆರ್ನಲ್ಲಿ ತಂದೆಯ ಹುಟ್ಟಿದ ದಿನಾಂಕ ಸೇರಿದಂತೆ ಅನೇಕ ಅನಗತ್ಯ ಪ್ರಶ್ನೆಗಳನ್ನು ಇಡಲಾಗಿದೆ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ, ಕಾಂಗ್ರೆಸ್ನ ಗುಲಾಬ್ ನಬಿ ಆಜಾದ್ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ದೇಶದಲ್ಲಿ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಅದಾದ ಬಳಿಕ ಎನ್ಆರ್ಸಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಅವರು ಈ ಮುಂಚೆ ಹೇಳಿದ್ದರು. ಹೀಗಾಗಿ ಎನ್ ಪಿಆರ್ ಅನುಷ್ಠಾನದ ಬಗ್ಗೆ ಕುತೂಹಲ ಮೂಡಿತ್ತು.