Jharkhand Election: ನಾಮಪತ್ರದಲ್ಲಿ ವಯೋಮಿತಿ ವಂಚನೆ; ಸಿಎಂ ಹೇಮಂತ್ ಸೊರೇನ್ ವಿರುದ್ಧ ಬಿಜೆಪಿ ಆರೋಪ
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ಬೆನ್ನಲ್ಲೇ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಬರ್ಹೈತ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅಫಿಡಿವಿಟ್ನಲ್ಲಿ ಅವರು ವಯಸ್ಸಿನ ಬಗ್ಗೆ ತಪ್ಪಾದ ಮಾಹಿತಿ ನೀಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಅಫಿಡವಿಟ್ ಪ್ರಕಾರ ಅವರ ವಯಸ್ಸು ಐದು ವರ್ಷಗಳಲ್ಲಿ ಏಳು ವರ್ಷಗಳಷ್ಟು ಹೆಚ್ಚಾಗಿದೆ. 2019ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ಅವರು ವಯಸ್ಸನ್ನು 42 ವರ್ಷಗಳು ಎಂದು ಉಲ್ಲೇಖಿಸಲಾಗಿದ್ದು, ಈಗ ಸಲ್ಲಿಸಿರುವ ದಾಖಲೆಯಲ್ಲಿ ಅವರ ವಯಸ್ಸನ್ನು 49 ವರ್ಷ ಎಂದು ನಮೂದಿಸಲಾಗಿದೆ. ಈ ಸಂಘಟನೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ವಿಪಕ್ಷಗಳು ಟೀಕೆ ಮಾಡುತ್ತಿವೆ.

ನಾಮಪತ್ರ ರದ್ದುಗೊಳಿಸಲು ಆಗ್ರಹ
ಹೇಮಂತ್ ಸೊರೇನ್ ಅವರ ನಾಮಪತ್ರ ರದ್ದುಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಹದೇವ್ ಈ ಬಗ್ಗೆ ಮಾತನಾಡಿ, ಐದು ವರ್ಷಗಳ ಅವಧಿಯಲ್ಲಿ ಒಬ್ಬರ ವಯಸ್ಸು ಏಳು ವರ್ಷಗಳು ಹೇಗೆ ಹೆಚ್ಚಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಸುಳ್ಳು ಮಾಹಿತಿ ನೀಡಿರುವ ಅವರ ನಾಮಪತ್ರವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹೇಮಂತ್ ಸೊರೇನ್ ಅವರ ಆದಾಯವು 10 ಲಕ್ಷದಿಂದ 4 ಲಕ್ಷಕ್ಕೆ ಇಳಿಕೆಯಾಗುವ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ಅಫಿಡವಿಟ್ನಲ್ಲಿ ಹಲವು ಅಸ್ತಿಗಳ ಬಗ್ಗೆ ಅವರು ಮಾಹಿತಿ ನೀಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಮುಖಂಡರು ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ಕೊಟ್ಟಿದ್ದು, ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.
ಜೆಎಂಎಂ ವಿರುದ್ಧ ಹಿಮಂತ್ ಬಿಸ್ವಾ ಶರ್ಮಾ ಅರೋಪ
ಅಸ್ಸಾಂ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಬಿಜೆಪಿ ಸಹ-ಪ್ರಭಾರಿ ಹಿಮಂತ ಬಿಸ್ವಾ ಶರ್ಮಾ ಜೆಎಂಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಎಂಎಂ ಪಕ್ಷದ ಇಡೀ ವ್ಯವಸ್ಥೆಯೇ ನಕಲಿ ಎಂದು ಹೇಳಿದ್ದಾರೆ.
"ಅಫಿಡವಿಟ್ನಲ್ಲಿ ಅವರ ಆಸ್ತಿ ವಇವರ ನೋಡಿದರೆ, ಅವರ ವಯಸ್ಸು ಕೂಡ ಹೆಚ್ಚಾಗಿದೆ. ಇದು ನುಸುಳುಕೋರರ ಸರ್ಕಾರ, ಮತ್ತೆ ಈ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರಿಗೂ ಭದ್ರತೆ ಇರುವುದಿಲ್ಲ. ಬುಡಕಟ್ಟು ಸಮುದಾಯದ ಜನರ ಬಗ್ಗೆ ಅವಹೇಳನಕಾರ ಹೇಳಿಕೆ ನೀಡಿರುವ ಇರ್ಫಾನ್ ಅನ್ಸಾರಿ ವಿರುದ್ಧ ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ" ಎಂದು ಹೇಳಿದರು.
ಸ್ಪಷ್ಟನೆ ಕೊಟ್ಟ ಜೆಎಂಎಂ
ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಬಿಜೆಪಿ ಸೋಲಿನ ಹತಾಶೆಯಿಂದ ಇಂತಹ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕವೇ ನಾಮಪತ್ರವನ್ನು ಅಂಗೀಕರಿಸಲಾಗಿದೆ. ಬಿಜೆಪಿ ಮಾಡುತ್ತಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಹೇಳಿದೆ.
ಅಫಿಡವಿಟ್ ಬಗ್ಗೆ ಬಿಜೆಪಿ ಇಷ್ಟೊಂದು ಆಸಕ್ತಿ ತೋರಿಸುತ್ತಿರುವುದು, ರಾಜ್ಯದಲ್ಲಿ ಅವರಿಗೆ ಸೋಲಿನ ಭಯ ಇರುವುದನ್ನು ತೋರಿಸುತ್ತದೆ. ಜೆಂಎಂಎಂ ಎಂದಿಗೂ ಪಾರದರ್ಶಕವಾಗಿದೆ ಎಂದು ಹೇಳಿದರು.












Click it and Unblock the Notifications